ಮೋದಿ ಸುಮ್ಮನಿದ್ದರೂ ಮಗನ ಕೊಂದ ಉಗ್ರರನ್ನು ನಾನು ಸುಮ್ಮನೆ ಬಿಡುವುದಿಲ್ಲ
ನನ್ನ ಮಗನನ್ನು ಸಾಯಿಸಿದ ಉಗ್ರರ ವಿರುದ್ದ ನಾನು ಸೇಡು ತೀರಿಸಿಕೊಳ್ಳುತ್ತೇನೆ, ಗುರುವಾರ (ಏ28) ಹುತಾತ್ಮರಾದ ಯೋಧನ ತಾಯಿಯ ಆಕ್ರೋಶದ ಮಾತು.
ನವದೆಹಲಿ, ಏ 28: ಭಯೋತ್ಪಾದಕರ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ರಧಾನಮಂತ್ರಿ ವಿಫಲರಾದರೂ, ನನ್ನ ಮಗನನ್ನು ಸಾಯಿಸಿದ ಉಗ್ರರ ವಿರುದ್ದ ನಾನು ಸೇಡು ತೀರಿಸಿಕೊಳ್ಳುತ್ತೇನೆ, ಇದು ಗುರುವಾರ (ಏ27) ಹುತಾತ್ಮರಾದ ಯೋಧನ ತಾಯಿಯ ಆಕ್ರೋಶದ ಮಾತು.
ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ವಿರುದ್ದ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಗುರುವಾರದಂದು ಹುತಾತ್ಮರಾಗಿದ್ದರು. ಇಬ್ಬರು ಭಯೋತ್ಪಾದಕರನ್ನು ಸೇನಾ ಪಡೆ ಹೊಡೆದುರುಳಿಸಿತ್ತು. (ಕುಪ್ವಾರಾ ದಾಳಿ, ನಾಲ್ಕು ಸೈನಿಕರು ಹುತಾತ್ಮ)
ಕ್ಯಾ. ವಿನಾಯಕ್ ಯಾದವ್, ಆಯುಶ್ ಯಾದವ್, ಭೂಪ್ ಸಿಂಗ್ ಗುಜ್ಜಾರ್ ದುಸ್ಸಾ, ನಾಯಕ್ ವೆಂಕಟ್ ರಮಣ್ ಈ ನಾಲ್ವರು ಸೈನಿಕರು ಉಗ್ರರ ನಡುವಿನ ಕಾದಾಟದಲ್ಲಿ ಹುತಾತ್ಮರಾಗಿದ್ದರು.
ಹುತಾತ್ಮ ಆಯುಶ್ ಯಾದವ್ ತಾಯಿ ಮಗನ ಸಾವಿಗೆ ತೀವ್ರ ನೊಂದು ಉಗ್ರರನ್ನು ಸದೆಬಡಿಯಿರಿ, ಒಂದು ವೇಳೆ ನೀವು ಕ್ರಮ ತೆಗೆದುಕೊಳ್ಳದಿದ್ದರೆ ಮಗನನ್ನು ಕೊಂದವರ ವಿರುದ್ದ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಮೋದಿಯನ್ನು ಉದ್ದೇಶಿಸಿ ಆಯುಶ್ ಯಾದವ್ ತಾಯಿ ನೋವಿನ ಮಾತನ್ನಾಡಿದ್ದಾರೆ.
ನಮ್ಮ ಸೈನಿಕರು ಪ್ರತಿರೋಧ ತೋರಿದಾಗ ಮಾತ್ರ ಕಣ್ಣುಬಿಡುವ ಮಾನವಹಕ್ಕುಗಳ ಹೋರಾಟಗಾರರು ಈಗ ಎಲ್ಲಿ ಹೋದರು? ಇವರ ಹೋರಾಟದ ಅರ್ಥವೇನು, ಇವರೆಲ್ಲಾ ನಮ್ಮ ದೇಶದ ನಾಗರೀಕರಾ ಎಂದು ಮೃತ ಆಯುಶ್ ಯಾದವ್ ತಂದೆ ಕೂಡಾ ಬೇಸರದ ಹೇಳಿಕೆಯನ್ನು ನೀಡಿದ್ದಾರೆ.
ದೇಶದ ಇಂದಿನ ಪರಿಸ್ಥಿತಿ ನೋಡಿ, ಉಗ್ರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಮ್ಮ ಸೈನಿಕರು ಹೀಗೆ ಹುತಾತ್ಮರಾಗುತ್ತಲೇ ಇರುತ್ತಾರೆ. ನನ್ನ ಕುಟುಂಬಕ್ಕಾದ ನೋವು, ಬೇರ್ಯಾವ ಕುಟುಂಬಕ್ಕೂ ಬಾರದಿರಲಿ ಎಂದು ಆಯುಶ್ ತಂದೆ ಹೇಳಿದ್ದಾರೆ. (ಚಿತ್ರ: ಟ್ವಿಟ್ಟರ್)