ಪ್ಲಸ್ ಟುನಲ್ಲಿ1200ಕ್ಕೆ 1180 ಅಂಕ ಬಂದಿದ್ದ ಜಾಣೆ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ?
ಆ ಹುಡುಗಿ ರಫ್ಸೀನಾ ಕೇರಳ ರಾಜ್ಯಕ್ಕೆ ಹನ್ನೆರಡನೆ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಳು. ಮಾಧ್ಯಮಗಳಲ್ಲಿ ಆ ಬಗ್ಗೆ ವರದಿ ಬಂದ ಮೇಲೆ ಆಕೆ ಆತ್ಮಹತ್ಮೆ ಮಾಡಿಕೊಂಡಿದ್ದಾಳೆ
ಕಣ್ಣೂರು, ಮೇ 19 : ಕೇರಳದ ಕಣ್ಣೂರಿನಲ್ಲಿ ನಡೆದ ಈ ದುರ್ಘಟನೆಯ ಹೊಣೆ ಯಾರು ಎಂಬುದನ್ನು ಓದುಗರು ನೀವೇ ನಿರ್ಧರಿಸಬೇಕು. ಅಲ್ಲಿನ ಮಾಲೂರು ಎಂಬಲ್ಲಿ ರಫ್ಸೀನಾ ವಾಸವಿದ್ದಳು. ಹನ್ನೆರಡನೇ ತರಗತಿಯಲ್ಲಿ ಆಕೆಗೆ 1200 ಅಂಕಕ್ಕೆ 1180 ಬಂದಿತ್ತು. ಶಿವಪುರಂ ಶಾಲೆ ವಿದ್ಯಾರ್ಥಿನಿಯಾಗಿದ್ದ ಆಕೆಯನ್ನು ಮನೆಗೆ ಬಂದು, ಎಲ್ಲರೂ ಅಭಿನಂದಿಸಿದ್ದರು.
ಆ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಂಥ ಒಳ್ಳೆ ಅಂಕ ಪಡೆದ ಜಾಣೆ ಯಾಕೆ ಹಾಗೆ ಮಾಡಿಕೊಂಡಳು ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ರಫ್ಸೀನಾ ಬಡ ಕುಟುಂಬದವಳು ಒಂದು ಕೋಣೆಯ ಮನೆಯಲ್ಲಿ ವಾಸವಿದ್ದ ಆಕೆಯ ಸಾಧನೆ ಅಮೋಘ ಎಂದೆಲ್ಲ ಮಾಧ್ಯಮಗಳು ಸುದ್ದಿ ಮಾಡಿದ್ದವು.[ತೀರಿಹೋದ ಆ ಹುಡುಗನದು ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ]
ರಫ್ಸೀನಾ ಮನೆಯ ಬಡತನಕ್ಕೆ ಹೆಚ್ಚು ಅಂಕಗಳು ಸಿಕ್ಕಂತಾಯಿತು ಎಂದು ಬೇಸರವಾಗಿ ಆಕೆ ನೇಣಿಗೆ ಕೊರಳೊಡ್ಡಿದಳು ಎಂಬ ಬಗ್ಗೆ ಈಗ ಚರ್ಚೆಯಾಗುತ್ತಿದೆ. ರಫ್ಸೀನಾ ಮನೆ ಹೀಗಿದೆ. ಆಕೆಯ ಕೌಟುಂಬಿಕ ಹಿನ್ನೆಲೆ ಇಂಥದ್ದು ಎಂಬ ಬಗ್ಗೆ ಆಕೆ ಸಹಪಾಠಿಗಳ ಬಳಿಯಲ್ಲೂ ಹೇಳಿಕೊಂಡಿರಲಿಲ್ಲವಂತೆ.
ಆದರೆ, ರಫ್ಸೀನಾ ಮನೆಗೆ ಬಂದ ಮಾಧ್ಯಮದವರು ಆಕೆಯ ಸ್ಥಿತಿ, ಇರುವ ಮನೆಯ ಫೋಟೋ ಹಾಕಿ ಪ್ರಕಟಿಸಿದ್ದರು. ಇದರಿಂದ ಆ ಯುವತಿಯ ಮನಸಿಗೆ ಘಾತವಾಯಿತು. ಅನುಕಂಪ ಸಿಗಲಿ ಎಂಬ ಯಾವ ನಿರೀಕ್ಷೆಯೂ ಆಕೆಗಿರಲಿಲ್ಲ. ಆದರೆ ಆ ಆಯಾಮದಲ್ಲಿ ಬಂದ ವರದಿಗಳು ಆತ್ಮಹತ್ಯೆಗೆ ಪ್ರೇರಣೆಯಾಗಿವೆ ಎಂಬುದು ಸದ್ಯಕ್ಕೆ ಚರ್ಚೆಯಾಗುತ್ತಿದೆ.['ಯಾವ ತಂದೆ ಮಗಳನ್ನು ಸಾಯಲು ಬಿಡಲು ಸಾಧ್ಯ?']
ರಫ್ಸೀನಾ ಪೋಷಕರಾದ ರಹಮತ್-ಅಂಬುಟ್ಟಿ ಕೂಲಿ ಕೆಲಸ ಮಾಡುವವರು. ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇನ್ನು ಆಕೆಯ ಸಹೋದರಿ ತಿರುವನಂತಪುರದಲ್ಲಿ ಬಿ ಫಾರ್ಮಾ ಮಾಡುತ್ತಿದ್ದರೆ, ಸಹೋದರ ಬೆಂಗಳೂರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಂಥ ಜಾಣೆ ರಫ್ಸೀನಾ ಬದುಕು ಮುಗಿಸಿಕೊಂಡಿದ್ದಾಳೆ. ಈ ಸುದ್ದಿ ಗೊತ್ತಾದ ಮೇಲೆ ಮನಸ್ಸು ಏಕೋ ಅಳಕುತ್ತಿದೆ. ಯಾರ ಮನಸ್ಸಿನ ಮೇಲೆ ಯಾವ ಸಂಗತಿ, ವಿಚಾರ ಅಥವಾ ಸುದ್ದಿ ಹೇಗೆ ಪರಿಣಾಮ ಬೀರುತ್ತದೋ!