ಶಫಿನ್, ಹಾದಿಯಾ ಪ್ರಕರಣ ಲವ್ ಜಿಹಾದ್ ಹೇಗೆ?
ತಿರುವನಂತಪುರಂ, ಅ. 19 : ಕೇರಳದ ಲವ್ ಜಿಹಾದ್ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ಎನ್ಐಎಗೆ ವಹಿಸಿದೆ. ಶಫಿನ್ ಜಹಾನ್ ಮತ್ತು ಹಾದಿಯಾ ಶಫಿನ್ ಮೂಲಭೂತ ಹಕ್ಕುಗಳನ್ನು ನ್ಯಾಯಾಂಗವೇ ಹತ್ತಿಕ್ಕುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಒನ್ ಇಂಡಿಯಾ ಜೊತೆ ಮಾತನಾಡಿರುವ ಶಫಿನ್ ಜಹಾನ್ ಪರ ವಕೀಲರು, 'ಇಸ್ಲಾಂಗೆ ಮತಾಂತರಗೊಂಡಿರುವ ಯುವತಿಯನ್ನು ವಿವಾಹವಾಗುವುದು ಹೇಗೆ ಲವ್ ಜಿಹಾದ್ ವ್ಯಾಪ್ತಿಗೆ ಬರುತ್ತದೆ?' ಎಂದು ಪ್ರಶ್ನಿಸಿದ್ದಾರೆ. 2016ರ ಜನವರಿಯಲ್ಲೇ ಅಖಿಲಾ (ಹಾದಿಯಾ ಶಫಿನ್) ಮುಸ್ಲಿಂಗೆ ಮತಾಂತರಗೊಂಡಿದ್ದಳು ಎನ್ನುತ್ತದೆ ಪ್ರಕರಣದ ವಿವರ.
2016ರ ಜನವರಿಯಲ್ಲಿ ಕೊಝಿಕೋಡ್ನಲ್ಲಿ ಅಖಿಲಾ ಮುಸ್ಲಿಂಗೆ ಮತಾಂತರಗೊಂಡಿದ್ದಳು. ಈ ಬಗ್ಗೆ ಕೇರಳ ಹೈಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣ ಪತ್ರದ ಆಧಾರದ ಮೇಲೆಯೇ ಮೊದಲ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಲಾಗಿತ್ತು.
ಲವ್ ಜಿಹಾದ್ ಪ್ರಕರಣದ ತನಿಖೆ ಎನ್ಐಎಗೆ, ಏನಿದು ಪ್ರಕರಣ?
ಅಖಿಲಾ 2016ರ ಜನವರಿಯಲ್ಲಿ ವ್ಯಾಸಂಗಕ್ಕಾಗಿ ಇಸ್ಲಾಮಿಕ್ ಇನ್ಸ್ಟಿಟ್ಯೂಷನ್ (ಸತ್ಯ ಸಾರನಿ) ಸೇರಿದ್ದಳು. ಎರಡು ತಿಂಗಳ ಕೋರ್ಸ್ ಅನ್ನು ಆಕೆ ಮಾರ್ಚ್ನಲ್ಲಿ ಮುಗಿಸಿದ್ದಳು. ಆಕೆ ಇಸ್ಲಾಂಗೆ ಮತಾಂತರಗೊಂಡ ಬಳಿಕವೇ ಶಫಿನ್ ಜಹಾನ್ ಆಕೆಯನ್ನು ಭೇಟಿಯಾಗಿದ್ದು. ಆದ್ದರಿಂದ, ಇಲ್ಲಿ ಲವ್ ಜಿಹಾದ್ ಪ್ರಶ್ನೆಯೇ ಉದ್ಭವವಾಗುವುದಿಲ್ಲ.
ಕೊಲ್ಲಂ ಮೂಲದ ಶಫಿನ್ ಜಹಾನ್ ಓಮನ್ನಲ್ಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹಾದಿಯಾಳ ಪ್ರೊಫೈಲ್ಅನ್ನು ಆತ ಮುಸ್ಲಿಂ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ 2016ರ ಏಪ್ರಿಲ್ನಲ್ಲಿ ನೋಡಿದ್ದ. ಹಾದಿಯಾ ಪರ ವಕೀಲರು ಹೇಳುವಂತೆ ಆಕೆಯೇ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಳು. ಆಕೆ ಮತಾಂತರಗೊಂಡ ಬಳಿಕವೇ ಶಫಿನ್ ಆಕೆಯನ್ನು ನೋಡಿದ್ದು.
ಹಾದಿಯಾ ಮತಾಂತರಗೊಂಡ ಮುಸ್ಲಿಂ ಎನ್ನುವುದು ಶಫಿನ್ಗೆ ತಿಳಿದಿತ್ತು. ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಈ ಬಗ್ಗೆ ವಿವರ ದಾಖಲು ಮಾಡಲಾಗಿತ್ತು. ಏಪ್ರಿಲ್ನಲ್ಲಿ ಆತ ಹಾದಿಯಾಳನ್ನು ಸಂಪರ್ಕಿಸಿದ್ದ. ನವೆಂಬರ್ನಲ್ಲಿ ಆತ ಭಾರತಕ್ಕೆ ಬಂದಿದ್ದ. ಡಿಸೆಂಬರ್ 19, 2016ರಲ್ಲಿ ಈ ಜೋಡಿ ವಿವಾಹವಾಗಿತ್ತು.
ಮದುವೆಯಾದ ಎರಡೇ ದಿನಕ್ಕೆ ಕೇರಳ ಹೈಕೋರ್ಟ್ ಅವರ ವಿವಾಹವನ್ನು ಅಸಿಂಧುಗೊಳಿಸಿತು. ಪತಿ ಮತ್ತು ಪತ್ನಿಯನ್ನು ಬೇರೆ-ಬೇರೆಯಾಗಿ ಮಾಡಿತು. ಈಗ ನ್ಯಾಯಾಲಯದ ಆದೇಶದಂತೆ ಶಫಿನ್ಗೆ ಪತ್ನಿಯನ್ನು ಭೇಟಿ ಮಾಡುವ ಅವಕಾಶವೂ ಇಲ್ಲವಾಗಿದೆ.
'ಹಾದಿಯಾ ಬಳಿ ಪಾಸ್ಪೋರ್ಟ್ ಇಲ್ಲ. ಅದಕ್ಕಾಗಿ ಅವಳು ಅರ್ಜಿಯನ್ನು ಹಾಕಿಲ್ಲ. ಆಕೆಯ ಎಲ್ಲಾ ದಾಖಲೆಗಳು ತಂದೆಯ ಬಳಿ ಇವೆ. ತಂದೆ ಹಾದಿಯಾಳನ್ನು ಇಸ್ಲಾಮಿಕ್ ಗ್ರೂಪ್ ಗೃಹ ಬಂಧನದಲ್ಲಿಟ್ಟಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈಗ ನ್ಯಾಯಾಲಯವೇ ಆಕೆಗೆ ಗೃಹ ಬಂಧನದಲ್ಲಿರುವಂತೆ ಮಾಡಿದೆ' ಎಂದು ವಕೀಲ ನಾಸಿರ್ ಹೇಳಿದ್ದಾರೆ.
ಮೊದಲ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಕೇರಳ ಹೈಕೋರ್ಟ್ಗೆ ಆಗಸ್ಟ್ನಲ್ಲಿ ಹಾಜರಾಗಿದ್ದ ಹಾದಿಯಾ, 'ತನ್ನ ಇಚ್ಛೆಯಂತೆಯೇ ಮತಾಂತರಗೊಂಡಿದ್ದು, ಇಸ್ಲಾಂ ಕಲಿಯುವ ಇಚ್ಛೆ ಇದೆ ಎಂದು ಹೇಳಿದ್ದಳು. ತನ್ನನ್ನು ಯಾರೂ ಬಂಧನದಲ್ಲಿಟ್ಟಿಲ್ಲ' ಎಂದು ಕೋರ್ಟ್ಗೆ ಹೇಳಿದ್ದಳು.
ಹಾದಿಯಾ ವಿರುದ್ಧ ಎರಡನೇ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಾದ ಬಳಿಕ ಆಕೆಯನ್ನು ಮಹಿಳಾ ಹಾಸ್ಟೆಲ್ಗೆ ಕಳುಹಿಸಲಾಯಿತು. ಆಕೆಯನ್ನು ಭಯೋತ್ಪಾದಕರಂತೆ ನೋಡಲಾಗುತ್ತಿದ್ದು, ಈಗ ಗೃಹ ಬಂಧನದಲ್ಲಿಡಲಾಗಿದೆ. ಮೊಬೈಲ್ ಬಳಸಲೂ ಅನುಮತಿ ನೀಡುತ್ತಿಲ್ಲ. ಬೇರೆಯವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ.