8 ವರ್ಷದಿಂದ ಅತ್ಯಾಚಾರಗೈದವನ ಮರ್ಮಾಂಗ ಕತ್ತರಿಸಿದ ಹುಡುಗಿ!
ತಿರುವನಂತಪುರ, ಮೇ 20: ಇಲ್ಲಿನ ಕಾನೂನು ವಿದ್ಯಾರ್ಥಿನಿಯೊಬ್ಬಳು ಕಳೆದ ಎಂಟು ವರ್ಷಗಳಿಂದ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ವ್ಯಕ್ತಿಯೊಬ್ಬನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ.
ಗಾಯಗೊಂಡ ವ್ಯಕ್ತಿಯನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದ್ದು, 23 ವರ್ಷದ ಆ ಯುವತಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಶುಕ್ರವಾರ ರಾತ್ರಿ ಪುನಃ ತನ್ನ ಮೇಲೆ ಅತ್ಯಾಚಾರವೆಸಗಲು ಬಂದಾಗ ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾಗಿ ಯುವತಿ ತಿಳಿಸಿದ್ದಾಳೆ.
ತನ್ನನ್ನು ತಾನು ದೇವ ಮಾನವ ಎಂದು ಕರೆದುಕೊಳ್ಳುತ್ತಿದ್ದ ಸ್ವಾಮಿ ಗಣೇಶಾನಂದ (56) ಎಂಬಾತ, ಕೊಲ್ಲಂನಲ್ಲಿ ಪನ್ಮಾನ ಎಂಬ ಹೆಸರಿನಲ್ಲಿ ಆಶ್ರಮವೊಂದನ್ನು ನಡೆಸುತ್ತಿದ್ದ. ಯುವತಿಯ ತಾಯಿ ಆ ಗುರುವಿನ ಪರಮ ಭಕ್ತೆ. ಆತನನ್ನು ದೇವ ಮಾನವನೆಂದೇ ತಿಳಿದಿದ್ದ ಆಕೆಯನ್ನು ಭೇಟಿಯಾಗಲು ಕಳೆದ ಎಂಟು ವರ್ಷಗಳಿಂದ ಆಗಾಗ ಹರಿ ಅವರ ಮನೆಗೆ ಬರುತ್ತಿದ್ದ.
ಆಗಿನ್ನೂ ಆ ಹುಡುಗಿಗೆ 15 ವರ್ಷ ವಯಸ್ಸು. ಹಾಗೆ ಮನೆಗೆ ಬಂದು ಪೂಜೆ, ಫಲಾಹಾರ ಸ್ವೀಕರಿಸುತ್ತಿದ್ದ ಆ ಕಳ್ಳ ಸ್ವಾಮಿಗೆ ಅದೊಮ್ಮೆ ಈ ಹುಡುಗಿಯ ಮೇಲೆ ಕಣ್ಣುಬಿತ್ತು. ಅದೊಂದು ದಿನ ಆತ, ಭಕ್ತೆಯ ಮನೆಯಲ್ಲಿ ತಂಗುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಅಲ್ಲಿಂದ ನಿರಂತರವಾಗಿ ಭಕ್ತೆಯ ಮನೆಗೆ ಹೋದಾಗಲೆಲ್ಲಾ ಆ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಾ ಬಂದಿದ್ದಾನೆ ಎಂಬುದು ಯುವತಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ಎಂಬುದು ಸ್ಪಷ್ಟವಾಗಿದೆ.
ಆದರೆ, ಆಘಾತಕಾರಿ ವಿಚಾರವೇನೆಂದರೆ, ಆ ಯುವತಿಯ ತಾಯಿಗೆ ಇದೆಲ್ಲಾ ಗೊತ್ತಿತ್ತು ಎನ್ನುವುದು. ಇದನ್ನು ಯುವತಿಯು ದೂರಿನಲ್ಲಿ ಹೇಳಿಕೊಂಡಿದ್ದಾಳೆ. ತನ್ನ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದುದು ಗೊತ್ತಿದ್ದರೂ ಆಕೆಯ ತಾಯಿ ಸುಮ್ಮನಿದ್ದಳು.
ಇದನ್ನೆಲ್ಲಾ ಸಹಿಸಿಕೊಂಡು ಇಷ್ಟು ವರ್ಷ ಸುಮ್ಮನಿದ್ದ ಆ ಯುವತಿ, ಸಮಯ ನೋಡಿ ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ.
ಇನ್ನು, ಹರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹರಿ ಸ್ಥಾಪಿಸಿದ್ದ ಆಶ್ರಮಕ್ಕೆ ಭೇಟಿ ನೀಡಿದಾಗ, ಆ ಸ್ವಾಮಿಯು 15 ವರ್ಷಗಳ ಹಿಂದೆಯೇ ಆಶ್ರಮ ತೊರೆದಿದ್ದಾರೆಂದು ಆಶ್ರಮದವರು ಹೇಳಿದ್ದಾರೆ.
ವೈದ್ಯರು ಏನಂತಾರೆ?: ಆತನ ಮರ್ಮಾಂಗವು ಶೇ. 90ರಷ್ಟು ಕತ್ತರಿಸಲ್ಪಟ್ಟಿದ್ದು ಮರು ಜೋಡಣೆ ಅಸಾಧ್ಯವೆಂದು ವೈದ್ಯರು ತಿಳಿಸಿರುವುದಾಗಿ ಇಂಡಿಯಾ ಡಾಟ್ ಕಾಮ್ ಹೇಳಿದೆ.
ಸ್ವಾಮಿ ಗಣೇಶಾನಂದ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.