ಕೋಲ್ಕತ್ತಾ ನಂತರ ಕೇರಳದತ್ತ ಮೋದಿ,ಶಾ ಚಿತ್ತ
ತಿರುವನಂತಪುರಂ, ಜ.23: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಾಬಲ್ಯ ಮುರಿಯಲು ಹವಣಿಸುತ್ತಿರುವ ಮೋದಿ ಹಾಗೂ ಅಮಿತ್ ಶಾ ಜೋಡಿ ಈಗ ದೇವರ ನಾಡು ಕೇರಳದತ್ತ ಕಣ್ಣು ಹಾಯಿಸಿದೆ. ಈ ನಡುವೆ ಬಂಗಾಳದ ಹುಲಿ ಮತ್ತೊಮ್ಮೆ ಶಾ ಅವರ ಆಫರ್ ರೆಜೆಕ್ಟ್ ಮಾಡಿದ್ದಾರೆ.
ಈ ನಡುವೆ ಬಂಗಾಳದ ಹುಲಿ ಸೌರವ್ ಗಂಗೂಲಿ ಅವರು ಮತ್ತೊಮ್ಮೆ ಶಾ ಅವರ ಆಫರ್ ರೆಜೆಕ್ಟ್ ಮಾಡಿದ್ದಾರೆ. ಈಗ ಮಲೆಯಾಳಂ ನಟ, ಗಾಯಕ, ನಿರೂಪಕ, ಐ ಚಿತ್ರದ ಮುಖ್ಯ ವಿಲನ್ ಸುರೇಶ್ ಗೋಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮತ್ತೊಮ್ಮೆ ಮಾತುಕತೆ ನಡೆಯುತ್ತಿದೆ.
ಕೇರಳದ ಬಿಜೆಪಿ ಘಟಕದ ಅಧ್ಯಕ್ಷ ವಿ ಮುರಳೀಧರನ್ ಅವರು ಗುರುವಾರ ಈ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸೇರುವಂತೆ ಅಧಿಕೃತವಾಗಿ ನಟ ಸುರೇಶ್ ಗೋಪಿ ಅವರಿಗೆ ಆಹ್ವಾನ ಕಳಿಸಲಾಗಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಸುರೇಶ್ ಗೋಪಿ ಅವರು ಬಿಜೆಪಿ ಆಹ್ವಾನ ಸ್ವೀಕರಿಸಿದ್ದು ಗಣತಂತ್ರ ದಿನೋತ್ಸವದ ನಂತರ ಅಧಿಕೃತವಾಗಿ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದಾರೆ. [ದೇವರ ನಾಡಿನ ಮೇಲೆ ಮೋದಿ ಕಣ್ಣು]
ಈ ಹಿಂದೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಂಗಳೂರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಕರಾವಳಿ ಪ್ರದೇಶಗಳನ್ನು ಒಗ್ಗೂಡಿಸಿ ಬಂದರುಗಳ ಜಾಲ ನಿರ್ಮಾಣದ ಬಗ್ಗೆ ಮಾತನಾಡಿದ್ದರು.
ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮಲೆಯಾಳಂ ನಟ, ಗಾಯಕ, ನಿರೂಪಕ ಸುರೇಶ್ ಗೋಪಿ (ಕನ್ನಡದಲ್ಲಿ ಅಂಬರೀಶ್ ಅಭಿನಯದ ನ್ಯೂಡೆಲ್ಲಿ ಚಿತ್ರದಲ್ಲೂ ನಟಿಸಿದ್ದಾರೆ) ಅವರು ಮೋದಿ ಅವರನ್ನು ಭೇಟಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸುರೇಶ್ ಗೋಪಿ ಸೇರ್ಪಡೆ ಬಗ್ಗೆ ಇನ್ನಷ್ಟು ವಿವರ ಮುಂದಿದೆ...
ನಾಯರ್ ಕುಟುಂಬದ ಸುರೇಶ್ ಗೋಪಿ
ರಾಜಕಾರಣಿ ಅಲ್ಲದ, ರಾಜಕೀಯ ನನಗೆ ಬೇಡ ಎನ್ನುವ ನಾಯರ್ ಕುಟುಂಬದ ಸುರೇಶ್ ಗೋಪಿಗೆ ಮೋದಿ ಮಣೆ ಹಾಕಿರುವುದು ಮಲ್ಲೂ ನಾಡಲ್ಲಿ ಕುತೂಹಲ ಕೆರಳಿಸಿತ್ತು. ಅದರೆ, ಸುರೇಶ್ ಗೋಪಿ ಅವರ ಜನಪ್ರಿಯತೆಯನ್ನು ತಳ್ಳಿ ಹಾಕುವಂತಿಲ್ಲ. ಟಾಪ್ ನಟರಾದ ಮಮ್ಮೂಟಿ, ಮೋಹನ್ ಲಾಲ್, ದಿಲೀಪ್ ಸಮಾನಾಂತರವಾಗಿ ಸುರೇಶ್ ಗೋಪಿ ಕೇರಳದಲ್ಲಿ ಪ್ರಭಾವ ಹೊಂದಿದ್ದಾರೆ.
ಮೂರು ತಿಂಗಳಿನಿಂದ ನಡೆದಿದೆ ಮಾತುಕತೆ
ಅಮಿತ್ ಶಾ ಅವರ ನಿರ್ದೇಶನದಂತೆ ಮೂರು ತಿಂಗಳಿನಿಂದ ಸುರೇಶ್ ಗೋಪಿ ಅವರನ್ನು ಸೆಳೆಯಲು ಕೇರಳ ಬಿಜೆಪಿ ಯತ್ನಿಸುತ್ತಿದೆ. ಅದರೆ, ಸರಿಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸುರೇಶ್ ಗೋಪಿ ಹೇಳಿದ್ದಾರೆ. ಈಗ ಮತ್ತೊಮ್ಮೆ ಆಹ್ವಾನ ಕಳಿಸಲಾಗಿದೆ ಎಂದು ಮುರಳೀಧರನ್ ಅವರು ಐಎಎನ್ಎಸ್ ಗೆ ತಿಳಿಸಿದ್ದಾರೆ.
ಸುರೇಶ್ ಗೋಪಿ ಮೋದಿ ಅವರ ಆಯ್ಕೆ
ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಮೊದಲ ಭೇಟಿ ನಂತರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಗೋಪಿ ಹಾಜರಿದ್ದರು.
ಜನಪ್ರಿಯ ನಟ ಗೋಪಿಗಿಲ್ಲ ರಾಜಕೀಯ ನಂಟು
ಸುರೇಶ್ ಗೋಪಿ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಹತ್ತು ವರ್ಷದಿಂದ ಸುದ್ದಿ ಇದೆ.ಈಗ ಐ ಚಿತ್ರದ ಜನಪ್ರಿಯತೆಯೂ ಸಾಥ್ ನೀಡಿದೆ. ಈ ಹಿಂದೆ ವಿ.ಎಚ್ ಅಚ್ಯುತಾನಂದನ್ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪರ ನಿರತರಾಗಿದ್ದು ಬಿಟ್ಟರೆ ಮೋದಿ ಅವರನ್ನು ಮಾತ್ರ ಮೆಚ್ಚಿಕೊಂಡಿದ್ದಾರೆ.
ಪಕ್ಷಕ್ಕಿಂತ ವ್ಯಕ್ತಿ ನೋಡಿಕೊಂಡು ಬೆಂಬಲಿಸುತ್ತಾ ಬಂದಿರುವ ಗೋಪಿ ಅವರು ಬಿಜೆಪಿ ಸೇರಿದಂತೆ ಕೇರಳ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಾಣವಾಗುವ ಸಾಧ್ಯತೆಗಳಿವೆ.