ರಾಜಕೀಯ ಅಂಗಳದಲ್ಲಿ ಟುಸ್ ಆದ ಶ್ರೀಶಾಂತ್ ಬೌಲಿಂಗ್ ಮ್ಯಾಜಿಕ್ !
ತಿರುವನಂತಪುರ, ಮೇ 19 : ಕ್ರಿಕೆಟ್, ಸಿನಿಮಾ ಬಿಟ್ಟು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಟೀಂ ಇಂಡಿಯಾ ವೇಗದ ಬೌಲರ್ ಎಸ್.ಶ್ರೀಶಾಂತ್ ಅವರ ಬೌಲಿಂಗ್ ರಾಜಕೀಯದಲ್ಲಿ ಕೈಕೊಟ್ಟಿದೆ.
ಹೌದು, ಬಿಜೆಪಿ ಪಕ್ಷದಿಂದ ತಿರುವನಂತಪುರದ ಎರ್ನಾಕುಲಂ ಜಿಲ್ಲೆಯ ತ್ರಿಪುಣಿತುರ ವಿಧಾನ ಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದ ಶ್ರೀಶಾಂತ್ ಸುಮಾರು 10 ಸಾವಿರ ಮತಗಳಿಂದ ಪರಾಭವಗೊಂಡಿದ್ದಾರೆ.[ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]
ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ಕೆ ಬಾಬು ಅವರು ಈ ಕ್ಷೇತ್ರದಲ್ಲಿ 1991ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ.[ವಿಜಯೋತ್ಸಾಹದ ಚಿತ್ರಗಳು]
ಕ್ರಿಕೆಟ್ ಹಾಗೂ ಚಿತ್ರರಂಗದಲ್ಲಿ ನೆಲೆ ಕಾಣದೆ ಕಂಗಲಾಗಿದ್ದ ಶ್ರೀಶಾಂತ್ ರಾಜಕೀಯದಲ್ಲಾದರೂ ನೆಲೆ ಕಾಣಲು ಬಯಸಿದ್ದರು. ಆದರೆ ಮತದಾರ ಪ್ರಭಗಳು ಅವರನ್ನು ತಿರಸ್ಕರಿಸಿ ರಾಜಕೀಯದಲ್ಲೂ ನೆಲೆ ಕಾಣದಂತೆ ಮಾಡಿದ್ದಾರೆ. [ಸೋಲೊಪ್ಪಿಕೊಂಡ ರಾಹುಲ್, ಟ್ವಿಟ್ಟರ್ ನಲ್ಲಿ ಮಂಗಳಾರತಿ]
ಶ್ರೀಶಾಂತ್ ಬಿಜೆಪಿ ಸೇರ್ಪಡೆಗೆ ಕೇರಳದ ಕೆಲವು ಬಿಜೆಪಿ ನಾಯಕರುಗಳಿಂದ ವಿರೋಧ ವ್ಯಕ್ತವಾಗಿದ್ದವು. ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪ ಹೊತ್ತಿದ್ದ ಶ್ರೀಶಾಂತ್ ಪಕ್ಷಕ್ಕೆ ಬಂದರೆ ಮುಜುಗರ ಉಂಟಾಗುತ್ತದೆ ಎಂದು ಹೇಳಿದ್ದರು.[ಕೇರಳ ಚುನಾವಣೆ : 3 ಕ್ಷೇತ್ರದಲ್ಲಿ ಜೆಡಿಎಸ್ಗೆ ಗೆಲುವು]
ಶ್ರೀಶಾಂತ್ 2005 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಸಿಲುಕಿಕೊಂಡು ತಮ್ಮ ಕ್ರಿಕೆಟ್ ಜೀವನವನ್ನ ಅಂತ್ಯಗೊಳಿಸಿ ಒಂದು ಸಿನಿಮಾದಲ್ಲೂ ನಟಿಸಿದ್ದರು. ಈಗ ರಾಜಕೀಯದಲ್ಲೂ ಬೌಲಿಂಗ್ ಮಾಡಲು ಕಣಕ್ಕಿಳಿದಿದ್ದ ಶ್ರೀಶಾಂತ್ ಅವರ ಬೌಲಿಂಗ್ ಅಸ್ತ್ರ ಫಲಿಸಲಿಲ್ಲ.