ಕಾಶ್ಮೀರದ ಸರಣಿ ಕಲ್ಲು ತೂರಾಟಗಾರ ಚೋಟಾ ಗಿಲಾನಿಯ ಹತ್ಯೆ
ಜಮ್ಮು ಮತ್ತು ಕಾಶ್ಮೀರ, ಜೂನ್ 23: ಇಲ್ಲಿನ ಸರಣಿ ಕಲ್ಲು ತೂರಾಟಗಾರ ಚೋಟಾ ಗಿಲಾನಿ ಸಾವಿಗೀಡಾಗಿದ್ದಾನೆ. ಪುಲ್ವಾಮಾದ ಕಕ್ಪೋರಾ ಪೊಲೀಸ್ ಚೌಕಿಯಲ್ಲಿ ಪ್ರತಿಭಟನೆ ವೇಳೆ 27 ವರ್ಷದ ಚೋಟಾ ಗಿಲಾನಿ ಅಲಿಯಾಸ್ ತೌಸೀಫ್ ಸಹ್ಮದ್ ವನಿ ಸಾವನ್ನಪ್ಪಿದ್ದಾನೆ.
ಇಲ್ಲಿನ ತೆಂಗಪುನಾ ನಿವಾಸಿಯಾಗಿರುವ ವನಿ ಮೇಲೆ ಒಟ್ಟು 10 ಎಫ್ಐಆರ್ ಗಳಿವೆ. ಭದ್ರತಾ ಪಡೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ 2010ರಲ್ಲಿ ಆತನನ್ನು ಬಂಧಿಸಲಾಗಿತ್ತು ಕೂಡಾ.
ಕಳೆದ ವರ್ಷ ಬುರ್ಹಾನ್ ವನಿ ಸಾವಿನ ಬೆನ್ನಿಗೆ ಕಾಶ್ಮೀರ ಕಣಿವೆಯಲ್ಲಿ ಹುಟ್ಟಿಕೊಂಡ ಸಂಘರ್ಷದ ಸಂದರ್ಭದಲ್ಲಿ ಆತನನ್ನು ಸಾರ್ವಜನಿಕ ರಕ್ಷಣಾ ಕಾಯ್ದೆಯಡಿಯಲ್ಲಿಯೂ ಬಂಧಿಸಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆತನನ್ನು ಬಿಡುಗಡೆ ಮಾಡಲಾಗಿತ್ತು.
ಗುರುವಾರ ಪ್ರತಿಭಟನೆ ವೇಳೆ ಗಿಲಾನಿ ಪೊಲೀಸರ ಗುಂಡಿಗೆ ಸಾವನ್ನಪ್ಪಿದ್ದಾನೆ. ಪೊಲೀಸರು ಬೇಕೆಂದೇ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಆದರೆ ಪೊಲೀಸರು ಮಾತ್ರ ಇದೊಂದು ಆಕಸ್ಮಿಕ ಹತ್ಯೆ ಎಂದು ಹೇಳಿದ್ದಾರೆ.
ಆತ ಕಲ್ಲು ತೂರಾಟಗಾರರಲ್ಲಿ ಮುಂಚೂಣಿಯಲ್ಲಿದ್ದ. ಈ ಸಂದರ್ಭ ಶೆಲ್ ದಾಳಿಗೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ ಶೇಲ್ ದಾಳಿಯಿಂದ ಮೃತಪಟ್ಟಿದ್ದಾನೆ ಎಂದಿದ್ದು, ತೀರಾ ಹತ್ತಿರದಿಂದ ಆತನ ಮೇಲೆ ಶೇಲ್ ದಾಳಿ ನಡೆದಿದೆ. ಇದರಿಂದ ತೀವ್ರ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.