ಆಲಮಟ್ಟಿ ಎತ್ತರ ಹೆಚ್ಚಿಸಲು ಕರ್ನಾಟಕ ನಿರ್ಧಾರ; ತೆಲಂಗಾಣ, ಆಂಧ್ರಕ್ಕೆ ಶಾಕ್
ಹೆಚ್ಚಿನ ನೀರು ಸಂಗ್ರಹಕ್ಕೆ ಮುಂದಾಗಿರುವ ಕರ್ನಾಟಕ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಮುಂದಾಗಿದೆ. ಇದರಿಂದ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ನೀರು ಪೂರೈಕೆ ಕಡಿಮೆಯಾಗಲಿದೆ.
ಬೆಂಗಳೂರು, ಫೆಬ್ರವಿ 7: ಹೆಚ್ಚಿನ ನೀರು ಸಂಗ್ರಹಕ್ಕೆ ಮುಂದಾಗಿರುವ ಕರ್ನಾಟಕ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಮುಂದಾಗಿದೆ. ಇದರಿಂದ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ನೀರು ಪೂರೈಕೆ ಕಡಿಮೆಯಾಗಲಿದೆ.
ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿರುವ 519.60 ಅಡಿಯಿಂದ 524.256 ಅಡಿಗಳಿಗೆ ಹೆಚ್ಚಿಸಲು ಕರ್ನಾಟಕ ಪ್ಲಾನ್ ಸಿದ್ಧಪಡಿಸಿದೆ. ಈ ಮೂಲಕ 3ನೇ ಹಂತದ ಕೃಷ್ಣ ಮೇಲ್ದಂಡೆ ಯೋಜನೆಯಡಿ 4 ಏತ ನೀರಾವರಿ ಯೋಜನೆ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ನೀರಿಗೆ ಹೊಡೆತ ಬೀಳಲಿದ್ದು ಎರಡೂ ಸರ್ಕಾರಗಳು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಮೆಟ್ಟಲೇರುವ ಸಾಧ್ಯತೆಗಳಿವೆ.[ಆಲಮಟ್ಟಿ ಎತ್ತರ ಬದಲಾವಣೆ ಇಲ್ಲ: ನ್ಯಾಯಾಧೀಕರಣ]
ಒಂದೊಮ್ಮೆ ಕರ್ನಾಟಕ ಆಲಮಟ್ಟಿ ಎತ್ತರ ಹೆಚ್ಚಿಸಿದ್ದೇ ಆದಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರೈತರ ಜೀವನಾಡಿಯಾಗಿರುವ ಕೃಷ್ಣಾ ನದಿ ನೀರಿನ ಒಳಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಈಗಾಗಲೇ ಆಂಧ್ರ ಪ್ರದೇಶ ಸರಕಾರ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದು ಪ್ರಕರಣ ನ್ಯಾಯಾಂಗ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳೂ ಇವೆ.[ಸೋಲಾರ್ ವಿದ್ಯುತ್ ನೀಡುವ ಆಲಮಟ್ಟಿ ಕಾಲುವೆಗಳು!]
ಈ ಕುರಿತು ಮಾತನಾಡಿರುವ ಆಂಧ್ರ ಪ್ರದೇಶ ಜಲ ಸಂಪನ್ಮೂಲ ಸಚಿವ ದೇವಿನೇನಿ ಉಮಾ ಮಹೇಶ್ವರ ರಾವ್, "ಆಲಮಟ್ಟಿ ನದಿ ನೀರು ಹಂಚಿಕೆ ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ. ಪ್ರಕರಣದ ತೀರ್ಪು ಇನ್ನೂ ಹೊರಬಿದ್ದಿಲ್ಲ. ಈ ಹಂತದಲ್ಲಿ ಜಲಾಶಯದ ಎತ್ತರ ಏರಿಸಿ 4ಏತ ನೀರಾವರಿ ಯೋಜನೆ ನಿರ್ಮಿಸಲು ಕರ್ನಾಟಕ ಹೊರಟಿದೆ. ಇದು ಸರಿಯಲ್ಲ," ಎಂದು ಹೇಳಿದ್ದಾರೆ.