ಗಂಗಾ ಮಾತೆಯಂತೆ ಕಾವೇರಿಗೂ ಸ್ವಚ್ಛತಾ ಭಾಗ್ಯ
ಬೆಂಗಳೂರು, ಡಿಸೆಂಬರ್, 15: ಗಂಗಾ ನದಿ ಸ್ವಚ್ಛತೆ ಯೋಜನೆ ರೀತಿಯಲ್ಲಿ ಕಾವೇರಿ ನದಿ ಸ್ವಚ್ಛತೆಗೂ ಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಕೇಂದ್ರ ಸರಕಾರದ ಪ್ರಮುಖ ಸಚಿವರುಗಳು ಭರವಸೆ ನೀಡಿದ್ದಾರೆ. ದೆಹಲಿಗೆ ತೆರಳಿದ್ದ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ನಿಯೋಗಕ್ಕೆ ಕೇಂದ್ರ ಸಚಿವರು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಮೂರು ದಿನಗಳ ಕಾಲ ದೆಹಲಿಗೆ ತೆರಳಿದ ಅಭಿಯಾನದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಾಧುಸಂತರು, ಪ್ರಮುಖರೊಂದಿಗೆ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದ ನಿಯೋಗ ಸಲ್ಲಿಸಿದ ಮನವಿಗೆ ಕೇಂದ್ರ ಸರಕಾರದ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.[ನಗರ ಸ್ವಚ್ಛವಾಗಿಡಿ.. ಇಲ್ಲದಿದ್ದರೆ ಇವನಿಗಾದಂತೆ ಆದೀತು!]
ಕಾವೇರಿ ನದಿ ಸ್ವಚ್ಚತಾ ಆಂದೋಲನದ ತಂಡ ದೆಹಲಿಯಲ್ಲಿ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಕಲ್ಯಾಣ ಸಚಿವರನ್ನು ಭೇಟಿ ಮಾಡಿದ ಸಂದರ್ಭ ಸ್ಪಂದಿಸಿರುವ ಅವರು, ಈಗಾಗಲೆ ಗಂಗಾ ಕಲ್ಯಾಣ ಯೋಜನೆ ಸರಕಾರದ ಮೂಲಕ ಮುಂದುವರಿಯುತ್ತಿದ್ದು ಕಾವೇರಿ ಸ್ವಚ್ಚತಾ ಯೋಜನೆ ಸೇರ್ಪಡೆಗೊಳಿಸಲು ಪ್ರಧಾನಿಗಳು, ಪರಿಸರ ಖಾತೆ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಕೇಂದ್ರ ಸಚಿವರಾದ ಉಮಾಭಾರತಿ , ರಾಜನಾಥ್ ಸಿಂಗ್, ಡಿವಿ ಸದಾನಂದಗೌಡ, ಅನಂತಕುಮಾರ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ತಂಡ ಪ್ರತ್ಯೇಕವಾಗಿ ಮನವಿ ಸಲ್ಲಿಕೆ ಮಾಡಿದೆ.
ಮನವಿ ಯಾಕಾಗಿ?
ನದಿ ಪಾತ್ರದಲ್ಲಿ ಕರ್ನಾಟಕದಲ್ಲಿ 61, ತಮಿಳುನಾಡು ರಾಜ್ಯ ವ್ಯಾಪ್ತಿಯಲ್ಲಿ 1139 ಕಾರ್ಖಾನೆಗಳಿದ್ದು ಭಾರೀ ಪ್ರಮಾಣದ ಘನತ್ಯಾಜ್ಯಗಳು ನದಿ ಸೇರುತ್ತಿವೆ. ರಾಸಾಯನಿಕ ಕ್ರಿಮಿನಾಶಕಗಳಿಂದ ಜಲಚರಗಳು ಅಪಾಯದ ಮಟ್ಟದಲ್ಲಿವೆ. ಇದೆಲ್ಲದರಿಂದ ನದಿಯನ್ನು ರಕ್ಷಣೆ ಮಾಡಬೇಕಿದೆ.
ಪ್ರಾಧಿಕಾರ ರಚಿಸಿ
ಕಾವೇರಿ ನದಿಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ, ತಕ್ಷಣ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಕಾನೂನು ರೂಪಿಸುವುದರೊಂದಿಗೆ ಈ ಉದ್ದೇಶಕ್ಕಾಗಿ ಕೇಂದ್ರ ರಾಜ್ಯ ಸರಕಾರದ ಅಧಿಕಾರಿಗಳು, ಪರಿಸರವಾದಿಗಳು ಹಾಗೂ ಸ್ವಯಂ ಸೇವಾ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಪ್ರಾಧಿಕಾರ ರಚಿಸಬೇಕು.
ರಾಜ್ಯದ ಪ್ರತಿನಿಧಿಗಳೊಂದಿಗೆ ಚರ್ಚೆ
ನಿಯೋಗದೊಂದಿಗೆ ರಾಜ್ಯವನ್ನು ಪ್ರತಿನಿಧಿಸುವಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಪ್ರಹ್ಲಾದ್ ಜೋಷಿ, ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಎಚ್.ರಾಜ ಅವರಿಗೆ ಅಲ್ಲದೆ ಹಿರಿಯ ಪತ್ರಕರ್ತರುಗಳೊಂದಿಗೆ ನದಿ ಸ್ವಚ್ಛತೆ ಬಗ್ಗೆ ಚರ್ಚೆ ಮಾಡಲಾಯಿತು.
ನಿಯೋಗದಲ್ಲಿ ಯಾರಿದ್ದರು?
ನಿಯೋಗದಲ್ಲಿ ಹಿರಿಯ ಪತ್ರಕರ್ತ ಎಂ.ಎ.ಪೊನ್ನಪ್ಪ, ಹೇಮಂತ್ ಮಾರ್, ಕುಮಾರ್ ರಾಕೇಶ್, ಕಾವೇರಿ ನದಿ ಸ್ವಚ್ಚತಾ ಅಭಿಯಾನದ ಸಂಸ್ಥಾಪಕ ಶ್ರೀ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ರಮಾನಂದ ಸ್ವಾಮೀಜಿ, ಸ್ವಾಮಿ ಮರುದಾಚಲಂ ಅಡಿಗಳಾರ್, ಶ್ರೀ ಗಣೇಶ ಶರ್ಮಾ, ನಾಗೇಶ್ವರಾನಂದ ಸ್ವಾಮೀಜಿ, ಪ್ರಾಂತ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ಅರುಳ್ ವೀರಮಣಿ, ಕೊಡಗು ಜಿಲ್ಲಾ ಸಂಚಾಲಕರಾದ ರೀನಾ ಪ್ರಕಾಶ್, ಪಿ.ಜಿ.ಪ್ರಕಾಶ್, ಡಿ.ಆರ್.ಸೋಮಶೇಖರ್, ಎಸ್.ಎನ್.ಶ್ರೀಕಾಂತ್, ಸಿಂಚನಾ ಚಂದ್ರಮೋಹನ್, ವಿನೋದ್, ಮುತ್ತುಕುಮಾರ್, ವಾಸು ಇದ್ದರು.