ಮೀರತ್ ನಲ್ಲಿ ಕರ್ನಾಟಕದ 'ಭ್ರಷ್ಟ' ಮಂತ್ರಿ ಬಗ್ಗೆ ಮೋದಿ ಹೇಳಿದ್ದೇನು?
ಉತ್ತರ ಪ್ರದೇಶದ ಮೀರತ್ ನಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧ ಬಗ್ಗೆ ಕಾಂಗ್ರೆಸ್ ನಿಲುವನ್ನು ಪ್ರಶ್ನಿಸುತ್ತಾ, ಕರ್ನಾಟಕ ಸಚಿವರೊಬ್ಬರ ಮನೆಯಲ್ಲಿ 150 ಕೋಟಿ ಸಿಕ್ಕ ಬಗ್ಗೆ ಪ್ರಸ್ತಾವ ಮಾಡಿದ್ದಾರೆ
ಮೀರತ್, ಫೆಬ್ರವರಿ 4: ನೋಟು ನಿಷೇಧದ ಬಗ್ಗೆ ಕಾಂಗ್ರೆಸ್ ನವರು ಮಾತನಾಡ್ತೀರಿ. ಹಾಗಿದ್ದರೆ ಕರ್ನಾಟಕದ ಮಂತ್ರಿಯೊಬ್ಬರ ಮನೆಯಲ್ಲಿ 150 ಕೋಟಿ ರುಪಾಯಿ ಹೇಗೆ ಸಿಕ್ಕಿತು ಎಂದು ಮೋದಿ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಮೀರತ್ ನ ಚುನಾವಣೆ ಪ್ರಚಾರದಲ್ಲಿ ಶನಿವಾರ ಈ ಪ್ರಶ್ನೆ ಕೇಳಿದರು.
ಅಂಥ ಮಂತ್ರಿಯನ್ನು ಇನ್ನೂ ಸಂಪುಟದಿಂದ ತೆಗೆದು ಹಾಕಿಲ್ಲವಲ್ಲಾ? ಅದಕ್ಕೆ ಕಾರಣ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜನೀತಿ ಮಾಡ್ತೀರಾ? ಇಂಥ ಜನ ತಮ್ಮ ಹಾಗೂ ತಮ್ಮ ಕುಟುಂಬದ ಬಗ್ಗೆ ಯೋಚನೆ ಮಾಡ್ತಾರೆ. ಇಂಥವರಿಂದ ಉತ್ತರ ಪ್ರದೇಶದ ಅದೃಷ್ಟ ಬದಲಾಗಲ್ಲ ಎಂದ ಪ್ರಧಾನಿ, ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದು ಮೀರತ್ ನಲ್ಲಿ, 1857ರಲ್ಲಿ, ಬ್ರಿಟಿಷರ ವಿರುದ್ಧ. ಈಗ ಬಡತನದ ವಿರುದ್ಧ ಕದನ ಶುರುವಾಗಿದೆ ಎಂದು ಹೇಳಿದರು.[ಮೋದಿ ಮೇಲಿನ ಗೌರವದಿಂದ ಕೃಷ್ಣ ಬಿಜೆಪಿ ಸೇರ್ಪಡೆ: ಯಡಿಯೂರಪ್ಪ]
ಉತ್ತರ ಪ್ರದೇಶದಲ್ಲಿ ಎಷ್ಟೆಲ್ಲ ಶ್ರೀಮಂತವಾಗಿದೆ. ಆದರೆ ಇಲ್ಲಿನ ಯುವ ಜನಾಂಗಕ್ಕೆ ಉದ್ಯೋಗಾವಕಾಶಗಳು ಏಕಿಲ್ಲ? ಎಅರಡೂವರೆ ವರ್ಷವಾಯಿತು, ಯಾರಾದರೂ ದೇಶ ತಲೆ ಎತ್ತಿ ಹೇಳಿಬಹುದಾದ ಕೆಲಸ ಮಾಡಿದ್ದಾರಾ? ಉತ್ತರ ಪ್ರದೇಶಕ್ಕೆ ನಾನೆಷ್ಟೇ ಒಳ್ಳೆಯದು ಮಾಡಬೇಕು ಅಂದುಕೊಂಡರೂ ಇಲ್ಲಿರುವ ಸರಕಾರ ಅದನ್ನು ತಡೆಯುವಂಥದ್ದಾಗಿದ್ದರೆ...ದೆಹಲಿಯಿಂದ ಲಾಭ ತಲುಪಬೇಕು ಅಂದರೆ ಲಖನೌಗೆ ಬಂದು ಹೋಗಬೇಕಲ್ವೆ ಎಂದರು.
ಮೀರತ್ ನ ಸ್ಥಿತಿ ಹೇಗಾಗಿದೆ? ಯಾರಿಗಾದರೂ ಸಂಜೆ ಜೀವಂತವಾಗಿ ವಾಪಸ್ ಮನೆಗೆ ಹೋಗ್ತೀವಿ ಅನ್ನೋ ಖಾತ್ರಿ ಇದೆಯಾ ಎಂದು ಪ್ರಶ್ನಿಸಿದರು ಮೋದಿ. ಉತ್ತರ ಪ್ರದೇಶದಲ್ಲಿ ಹತ್ಯೆಗಳನ್ನು ನಡೆಸುತ್ತಿರುವವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇದು ಬಿಜೆಪಿ SCAM ವಿರುದ್ಧದ ಕದನ ಎಂದರು.[ನನ್ನ ಬಂಧನಕ್ಕೆ ಮೋದಿ-ಟ್ರಂಪ್ ಗೆಳೆತನವೇ ಕಾರಣ: ಹಫೀಜ್ ಸಯೀದ್]
SCAM ಅಂದರೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ಅಖಿಲೇಶ್ ಹಾಗೂ ಮಾಯಾವತಿ ಎಂದು ಇಂಗ್ಲಿಷ್ ಅಕ್ಷರದ ವಿವರಣೆ ನೀಡಿದರು. ಅಡೆ ತಡೆಗಳನ್ನು ಮಾಡುವ ರಾಜ್ಯ ಸರಕಾರವಿದ್ದರೆ ಅಭಿವೃದ್ಧಿ ಕಾರ್ಯಗಳು ಲಖನೌದಲ್ಲೇ ನಿಂತು ಬಿಡುತ್ತವೆ. ಇಲ್ಲಿನ ಸರಕಾರದ ಬಗ್ಗೆ ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಗೆ ರಾತ್ರೋ ರಾತ್ರಿ ಏನಾಯಿತು? ಅವರನ್ನು ತಬ್ಬಿ ನಿಲ್ಲುವಂಥದ್ದು ಎಂದು ವ್ಯಂಗ್ಯವಾಡಿದರು.
ಇಂಥ ಮೈತ್ರಿಯನ್ನು ಮೊದಲ ಸಲ ನೋಡ್ತಿದೀನಿ. ದಶಕಗಳ ಕಾಲ ಹಗಲು ರಾತ್ರಿ ಒಬ್ಬರನ್ನೊಬ್ಬರು ಹಣಿಯಲು ನೋಡುತ್ತಿದ್ದವರು ರಾತ್ರೋ ರಾತ್ರಿ ದೋಸ್ತಿಗಳಾಗಿದ್ದು ಹೇಗೆ ಅನ್ನೋದೇ ಪ್ರಶ್ನೆ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಾರದವರು ಉತ್ತರಪ್ರದೇಶವನ್ನು ಏನು ರಕ್ಷಿಸುತ್ತಾರೆ ಎಂದರು.[ಸರ್ವೇ: ಈಗ ಲೋಕಸಭಾ ಚುನಾವಣೆ ನಡೆದರೆ ವಿಪಕ್ಷಗಳ ಕಥೆ, ವ್ಯಥೆ!]
ಉತ್ತರ ಪ್ರದೇಶ ಸರಕಾರಕ್ಕೆ ಆರೋಗ್ಯಕ್ಕಾಗಿ 4 ಸಾವಿರ ಕೋಟಿ ರುಪಾಯಿ ಅನುದಾನವನ್ನು ಆರೋಗ್ಯಕ್ಕಾಗಿ ನೀಡಿದರೆ ಅದರಲ್ಲಿ 250 ಕೋಟಿ ರುಪಾಯಿ ಕೂಡ ಖರ್ಚು ಮಾಡಲಿಲ್ಲ. ಆ ನಂತರ ಏಳು ಸಾವಿರ ಕೋಟಿಗೆ ಅನುದಾನ ಹೆಚ್ಚಿಸಿದರೆ ಅದರಲ್ಲಿ 280 ಕೋಟಿ ಕೂಡ ಖರ್ಚು ಮಾಡಲಿಲ್ಲ ಎಂದು ಮೂದಲಿಸಿದರು.