ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಶವವಾಗಿ ಪತ್ತೆ!
ಲಖನೌ, ಮೇ 17: ಕರ್ನಾಟಕ ಕೇಡರ್ 2007ರ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (36) ಅವರ ಶವ ಇಲ್ಲಿನ ಹಜರತ್ ಗಂಜ್ ನಲ್ಲಿರುವ ಮೀರಾಬಾಯಿ ಗೆಸ್ಟ್ ಹೌಸ್ ಬಳಿ ದೊರೆತಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ತಿವಾರಿ ಅವರು, ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಮೀಷನರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ನಾಲ್ಕು ವಾರಗಳ ರಜೆ ಮೇರೆಗೆ ಅವರು ತಮ್ಮ ಊರಿಗೆ ತೆರಳಿದ್ದರು. 1981ರ ಮೇ 17ರಂದು ಜನಿಸಿದ್ದ ತಿವಾರಿ, ಅವರ ಹುಟ್ಟುಹಬ್ಬದಂದೇ (ಮೇ 17) ಶವವಾಗಿ ಪತ್ತೆಯಾಗಿರುವುದು ವಿಪರ್ಯಾಸ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಲಖನೌ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದಿದ್ದ ತಿವಾರಿ ಅವರು ರಾಜ್ಯ ಸರ್ಕಾರದ ನಾನಾ ಭಾಗಗಳಲ್ಲಿ , ಇಲಾಖೆಗಳಲ್ಲಿ ಕೆಲಸ ಮಾಡಿ ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದರು.
ಹೆಚ್ಚುವರಿ ಆಯುಕ್ತರಾಗಿ, ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ, ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅವರನ್ನು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಕಳೆದ ವರ್ಷ ಡಿಸೆಂಬರ್ ನಲ್ಲಿ ಬೀದರ್ ನಿಂದ ಅವರ ವರ್ಗಾವಣೆಯಾದಾಗ ಅಲ್ಲಿನ ಜನರು ಬೀದಿಗಿಳಿದು ಜಿಲ್ಲಾಧಿಕಾರಿ ವರ್ಗಾವಣೆ ಆಗಬಾರದೆಂದು ಹೋರಾಟ ಮಾಡಿದ್ದರು. ಬೀದರ್ ನಲ್ಲಿ ಕೆಲವಾರು ಜನಪರ ಕೆಲಸಗಳನ್ನು ಮಾಡುವ ಮೂಲಕ ಅವರು ಹೆಸರುವಾಸಿಯಾಗಿದ್ದರು.
ಕೆರೆಗಳ ಹೂಳೆತ್ತಿಸಿ ನೀರಿನ ಸೌಕರ್ಯ ಒದಗಿಸಿಕೊಟ್ಟಿದ್ದಲ್ಲದೆ, ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೃತಕ ಅರಣ್ಯಗಳನ್ನು ಬೆಳೆಸುವ ಯೋಜನೆಗಳಿಗೆ ಕೈ ಹಾಕಿದ್ದರು. ಅಲ್ಲದೆ, ಕೇಂದ್ರದಿಂದ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬೀದರ್ ನ ಅನೇಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.