ಕರ್ನಾಟಕ ಬಂದ್ : ಗೋವಾದಲ್ಲಿ ಕನ್ನಡಿಗರ ಮನೆ ನೆಲಸಮ
ಪಣಜಿ, ಸೆಪ್ಟೆಂಬರ್ 26 : ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರು ಹರಿಸುವ ಕಳಸಾ-ಬಂಡೂರಿ ನಾಲೆ ಯೋಜನೆ ಪರವಾಗಿ ಕರ್ನಾಟಕದಾದ್ಯಂತ ಭರ್ಜರಿ ಕೂಗು ಎದ್ದಿದ್ದರೆ, ಇದರ ಪರಿಣಾಮ ಎದುರಿಸಿ ಸಂಕಷ್ಟಕ್ಕೀಡಾಗಿರುವುದು ಗೋವಾದಲ್ಲಿರುವ ಕನ್ನಡಿಗರು.
ಬೈನಾ ಬೀಚ್ ನಲ್ಲಿ ಬೀಡುಬಿಟ್ಟಿರುವ 150ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ಏಕಾಏಕಿ ನೆಲಸಮಗೊಳಿಸಿ 'ಕರ್ನಾಟಕ ಬಂದ್'ಗೆ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಗೋವಾ ಸರಕಾರದ ಈ ನಡೆಯಿಂದಾಗಿ ಗೋವಾದಲ್ಲಿರುವ ಕನ್ನಡಿಗರು ಮನೆಮಠ ಕಳೆದುಕೊಂಡಂತಾಗಿದೆ. [ಕಳಸಾ-ಬಂಡೂರಿಗಾಗಿ ಕರ್ನಾಟಕ ಬಂದ್]
ಬೈನಾ ಬೀಚ್ ನಲ್ಲಿರುವ ಕನ್ನಡಿಗರ ಮನೆ ಕಿತ್ತುಕೊಳ್ಳುವ ಗೋವಾ ಸರಕಾರದ ಹುನ್ನಾರ ಇಂದು ನಿನ್ನೆಯದಲ್ಲ. ಇದು ಕೋರ್ಟ್ ಮೆಟ್ಟಿಲೇರಿ ಕನ್ನಡಿಗರನ್ನು ತೆರವುಗೊಳಿಸದಂತೆ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಧಿಕ್ಕರಿಸಿ ಗೋವಾ ಸರಕಾರ ಕನ್ನಡಿಗರ ಮನೆಗಳನ್ನು ಕಿತ್ತುಕೊಂಡಿದೆ. ದಶಕಗಳಿಂದ ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ.
ಗೋವಾದಲ್ಲಿ 29 ಕಿ.ಮೀ. ಹರಿದು ಸಮುದ್ರ ಪಾಲಾಗುತ್ತಿರುವ ಮಹದಾಯಿ ನದಿ ನೀರನ್ನು ಸದ್ಬಳಕೆ ಮಾಡಿಕೊಂಡು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಕಳಸಾ-ಬಂಡೂರಿ ನಾಲಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಇದನ್ನು ಗೋವಾ ಸರಕಾರ ವಿರೋಧಿಸಿದ್ದರಿಂದ ಕರ್ನಾಟಕ ಪ್ರತಿಭಟನೆಗಿಳಿದಿದೆ.
ಬೆಂಗಳೂರಿ ಸೇರಿದಂತೆ ಕರ್ನಾಟಕದಾದ್ಯಂತ ಕಳಸಾ-ಬಂಡೂರಿ ಯೋಜನೆಗಾಗಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಮೆರವಣಿಗೆ ನಡೆಸುತ್ತಿವೆ. ಬೆಳಗಾವಿ, ಹುಬ್ಬಳ್ಳಿ, ಗದಗದಲ್ಲಿಯೂ ಪ್ರತಿಭಟನೆಗಳಾಗುತ್ತಿವೆ. ಪ್ರತಿಭಟನೆಯ ಕಾವು ಕೇಂದ್ರ ಸರಕಾರವನ್ನು ಮುಟ್ಟಬೇಕಷ್ಟೆ. [ಏನಿದು ಕಳಸಾ-ಬಂಡೂರಿ ಯೋಜನೆ]