ಕಾರ್ಗಿಲ್ ವಿಶೇಷ: ಕಾರ್ಗಿಲ್ ಯುದ್ಧ ಶಾಲೆ ವಿಶೇಷ ಏನು?
ಕಾರ್ಗಿಲ್,ಜು.25: ಪಾಕಿಸ್ತಾನದ ಮೇಲೆ 1999ರಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಜುಲೈ 26ರಂದು ಪ್ರತಿವರ್ಷ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತಿದೆ. 'ಆಪರೇಷನ್ ವಿಜಯ್'ನ 15ನೇ ವಾರ್ಷಿಕೋತ್ಸವದ ವಿಶೇಷ ಲೇಖನಗಳನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರರ ಕಥೆಗಳನ್ನು ಕಾರ್ಗಿಲ್ನಿಂದಲೇ ಒನ್ಇಂಡಿಯಾ ನಿಮಗೆ ನೀಡಲಿದೆ.
ಕಾರ್ಗಿಲ್ ಯುದ್ಧ ನಡೆದ ನೆಲ ಈಗಿನವರೆಗೆ ಕೇವಲ ದಿನಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿತ್ತು. ಗ್ರೌಂಡ್ ಜೀರೋ ನೆಲವನ್ನು ಮೆಟ್ಟಿದ ಮೊದಲ ಆನ್ ಲೈನ್ ಪೋರ್ಟಲ್ ಒನ್ಇಂಡಿಯಾ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಲೇಖನಗಳನ್ನು ಒನ್ಇಂಡಿಯಾದ ಪ್ರತಿನಿಧಿ ರೀಚಾ ಬಾಜಪೈ ಬರೆಯುತ್ತಿದ್ದು ಈ ಸರಣಿಯ ಲೇಖನ ಇಲ್ಲಿದೆ.
ಕಾರ್ಗಿಲ್ ಯುದ್ಧದ ಬಳಿಕ ಭಾರತೀಯ ಸೇನೆ ಮತ್ತಷ್ಟು ಬಲಗೊಂಡಿತು ಎಂಬುದನ್ನು ನೀವು ಈ ಹಿಂದಿನ ಲೇಖನಗಳಲ್ಲಿ ಓದಿದ್ದೀರಿ.[ಕಾರ್ಗಿಲ್ ವಾರ್ ಬಳಿಕ ಭಾರತ ಶಕ್ತಿಶಾಲಿ ದೇಶವಾಗಿದೆ]
ಕಾರ್ಗಿಲ್ ಯುದ್ಧಕ್ಕೂ ಮೊದಲು ನಮ್ಮ ಸೈನಿಕರಿಗೆ ಯುದ್ದ ಮಾಡುವುದರಲ್ಲಿ ಪರಿಣಿತಿಯಿದ್ದರೂ, ಎತ್ತರದ ಪ್ರದೇಶದಲ್ಲಿ ನಿಂತು ಹೋರಾಟ ಮಾಡುವ ಕೌಶಲ್ಯ ಕಡಿಮೆಯಿತ್ತು. ಆದರೂ ಭಾರತೀಯ ಸೈನಿಕರು ಸರಿಯಾದ ತರಬೇತಿ ಇಲ್ಲದಿದ್ದರೂ, ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿ ಛಲದಿಂದ ಯುದ್ದ ಮಾಡಿ ಪಾಕ್ ಸೈನ್ಯವನ್ನು ಹೊಡೆದು ಓಡಿಸಿ ಮಹಾನ್ ಸಾಧನೆ ಮಾಡಿದ್ದು ಈಗ ಇತಿಹಾಸ
ಯುದ್ದದ ಬಳಿಕ ಎಚ್ಚೆತ್ತ ಸೇನೆ ಮುಂದೆ ಯಾವುದೇ ದುರ್ಗಮವಾದ ಬೆಟ್ಟ ಪ್ರದೇಶವಿದ್ದರೂ ಅನುಭವದ ಕೊರತೆಯಾಗಬಾರದು ಎನ್ನುವ ಕಾರಣಕ್ಕೆ ಕಾರ್ಗಿಲ್ ವಿಜಯದ ಹತ್ತನೇ ವರ್ಷದ ಆಚರಣೆಯ ಸಂದರ್ಭದಲ್ಲಿ ವಿಶೇಷ ಸೈನಿಕ ಶಾಲೆಯನ್ನು ತೆರೆದಿದೆ.
'ಕಾರ್ಗಿಲ್ ಯುದ್ಧ ಶಾಲೆ' ಈ ವಿಶೇಷ ಶಾಲೆ ಹೆಸರು. ಹೆಸರೇ ಹೇಳುವಂತೆ ಇದು ಯುದ್ಧದ ಸಂದರ್ಭದಲ್ಲಿ ಬೆಟ್ಟ ಗುಡ್ಡದಲ್ಲಿ ಸೈನಿಕರು ಹೇಗೆ ಯುದ್ಧ ಮಾಡಬೇಕು ಎನ್ನುವುದರ ಸಂಪೂರ್ಣ ಪಾಠವನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ದ್ರಾಸ್ ವಲಯದಲ್ಲಿ ಈ ಶಾಲೆ ಸ್ಥಾಪನೆಯಾಗಿದ್ದು, ಈ ಶಾಲೆಯಲ್ಲಿ ಕಲಿತ ಸೈನಿಕರು ಕ್ಷಣಮಾತ್ರದಲ್ಲೇ ಬೆಟ್ಟವನ್ನು ಏರುತ್ತಾರೆ.
ಬೆಟ್ಟವನ್ನು ಏರಿದಂತೆ ಆಮ್ಲಜನಕ ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಸೈನಿಕರು ತಮ್ಮ ಆರೋಗ್ಯವನ್ನು ಕಾಪಾಡಿ ಯಾವ ರೀತಿ ಗುರಿಯನ್ನು ತಲುಪಬೇಕು ಎನ್ನುವುದರ ಮಾಹಿತಿಯನ್ನು ನೀಡಲಾಗುತ್ತದೆ.
ಈ ಶಾಲೆಯಲ್ಲಿ ಒಂದು ಹಗ್ಗವನ್ನು ಹಿಡಿದುಕೊಂಡು ಹೇಗೆ ಹತ್ತಬೇಕು, ಎರಡು ಹಗ್ಗವನ್ನು ಹಿಡಿದು ಹತ್ತುವುದು ಹೇಗೆ, ಸೊಂಟಕ್ಕೆ ಹಗ್ಗವನ್ನು ಕಟ್ಟಿ ಹತ್ತುವನ್ನು ಹೇಗೆ ಎಂಬುದನ್ನು ಕಲಿಸಿಕೊಡಲಾಗುತ್ತದೆ.
ಇಲ್ಲಿ ತರಬೇತಿ ನೀಡುವ ಅಧಿಕಾರಿ ಎಸ್ಎಂ ಮ್ಯಾಥ್ಯೂ " ಸೇನೆಯಲ್ಲೇ ಬಹಳ ವಿಶಿಷ್ಠವಾದ ತರಬೇತಿ ಇದಾಗಿದ್ದು, ಬೆಟ್ಟ ಗುಡ್ಡದ ಪ್ರದೇಶದಲ್ಲಿ ಹೋರಾಟ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ. ಇಲ್ಲಿ ಸೈನಿಕರಿಗೆ ಕೇವಲ ಬೆಟ್ಟವನ್ನು ಏರುವ ತರಬೇತಿ ನೀಡುತ್ತಿಲ್ಲ. ಒಂದು ವೇಳೆ ಅಪಾಯದ ಸಂದರ್ಭದಲ್ಲಿ ಮತ್ತೊಬ್ಬ ಸೈನಿಕನನ್ನು ಎತ್ತಿಕೊಂಡು ಹೋಗುವ ತರಬೇತಿಯನ್ನು ನೀಡಲಾಗುತ್ತದೆ " ಎಂದು ಹೇಳುತ್ತಾರೆ.
ಕಾರ್ಗಿಲ್ ವಿಜಯ ದಿವಸ ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಕಾರ್ಗಿಲ್ ವಿಜಯ ದಿವಸ