IN PICS: ಕಾನ್ಪುರ ರೈಲು ದುರಂತದ ಮನಸ್ಸು ಕಲಕುವ ಚಿತ್ರ..
ಸಾವು..ಸಾವು...ಸಾವು
-ಉತ್ತರ ಪ್ರದೇಶದ ಕಾನ್ಪುರ ಪುಕ್ರಾಯನ್ ಬಳಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಹೀಗೆ ಹೇಳಬಹುದು. ಭಾನುವಾರ ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ಹಳಿ ತಪ್ಪಿ, ಕನಿಷ್ಠ ನೂರಾ ನಲವತ್ತೆರಡು ಮಂದಿ ಉಸಿರು ಕಳೆದುಕೊಂಡರು. ಅಲ್ಲಿನ ಸಾವು-ನೋವು, ಗಾಯಾಳುಗಳು.. ಅಬ್ಬಾ ಮೈ ನಡುಗಿಸುವಂಥ ದುರಂತವದು.
ಇನ್ನೂರು ಗಾಯಾಳುಗಳು ಇದ್ದಾರೆ ಎಂಬ ಮಾಹಿತಿಯಿದೆ. ಎಸ್ 3 ಮತ್ತು ಎಸ್ 4 ಬೋಗಿಗಳನ್ನು ತೆಗೆದು ಬಿಸಾಡಿದ ಹಾಗೆ ಬಿದ್ದಿದೆ. ಇನ್ನು ಏಸಿ ಕೋಚ್ ಗಳಿಗೂ ಭಾರೀ ಹಾನಿಯಾಗಿದೆ. ದುರಂತಕ್ಕೆ ಕಾರಣ ಗೊತ್ತಾಗಿಲ್ಲ. ಈ ಅವಘಡಕ್ಕೆ ಕೇವಲ ಒಂಬತ್ತು ನಿಮಿಷದ ಮುಂಚೆ ಸಬರಮತಿ ಎಕ್ಸ್ ಪ್ರೆಸ್ ಇದೇ ಹಳಿ ಮೇಲೆ ಹಾದುಹೋಗಿದೆ.[ಕಳೆದ ಮೂರು ವರ್ಷಗಳಲ್ಲಿ ನಡೆದ ಭೀಕರ ರೈಲು ದುರಂತಗಳು]
ಆದರೆ, ಆ ವೇಳೆ ಯಾವುದೇ ಅನುಮಾನ ಬರುವಂಥ ಸ್ಥಿತಿ ಇರಲಿಲ್ಲ ಎಂದು ಸಬರಮತಿ ಎಕ್ಸ್ ಪ್ರೆಸ್ ರೈಲ್ವೆ ಎಂಜಿನ್ ನ ಡ್ರೈವರ್ ತಿಳಿಸಿದ್ದಾರೆ. ಅಪಘಾತದಲ್ಲಿ ತೀರಿಕೊಂಡವರು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರು ಇದ್ದಾರೆ.
ಮದುವೆ ಗೊತ್ತಾಗಿದ್ದ ಹೆಣ್ಣುಮಗಳೊಬ್ಬಳು ಇದೇ ರೈಲಿನಲ್ಲಿ ಹೊರಟಿದ್ದಳು. ಸಂಭ್ರಮವನ್ನು, ಭವಿಷ್ಯದ ಕನಸನ್ನು ಹೊತ್ತಿದ್ದವಳಿಗೆ ತಂದೆಯನ್ನು ಕಳೆದುಕೊಂಡ ದುಃಖ ಜೊತೆಯಾಗಿದೆ. ಎಷ್ಟು ಕುಟುಂಬಗಳು, ಎಷ್ಟು ಥರದ ದುಃಖ? ಅಲ್ಲಿನ ದುರಂತದ ಚಿತ್ರಗಳು ಇಲ್ಲಿವೆ. ಮನಸ್ಸು ಗಟ್ಟಿ ಮಾಡಿಕೊಂಡು ನೋಡಿ.[ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ]
ದುರಂತ ಚಿತ್ರಣ
ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತದ ನಂತರ ಕಾನ್ಪುರದ ದೆಹತ್ ಬಳಿ ಪರಿಹಾರ ಕಾರ್ಯ ಕೈಗೊಂಡ ವೇಳೆ ಅವಘಡದ ಪ್ರಮಾಣ ಸೂಚಿಸುವಂಥ ಚಿತ್ರವಿದು.
ಪ್ರಯಾಣಿಕರ ರಕ್ಷಣೆ
ಕಾನ್ಪುರ ರೈಲು ದುರಂತದ ನಂತರ ಬೋಗಿಯಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರೊಬ್ಬರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ದೃಶ್ಯ.
ಸಿಬ್ಬಂದಿ ಸಹಾಯ
ರೈಲು ದುರಂತದ ಗಾಯಾಳುಗಳ ತುರ್ತು ರಕ್ಷಣೆಯಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿ ಕಂಡುಬಂದಿದ್ದು ಹೀಗೆ.
ಕಣ್ಣೀರ ಕ್ಷಣ
ರೈಲು ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯ ಸಂಬಂಧಿಕರೊಬ್ಬರು ಕಣ್ಣೀರಾದ ಕ್ಷಣ.
ಯಾರಾದರೂ ಇದ್ದೀರಾ
ಅಪಘಾತದ ರಕ್ಷಣಾ ಕಾರ್ಯಾಚರಣೆ ವೇಳೆ ರೈಲು ಕೋಚ್ ನ ಒಳಗೆ ಯಾರಾದರೂ ಸಿಕ್ಕಿಕೊಂಡಿದ್ದಾರಾ ಎಂದು ಗಮನಿಸುತ್ತಿರುವ ಪೊಲೀಸ್ ಸಿಬ್ಬಂದಿ.
ಆಟಿಕೆಯಂತಾದ ರೈಲು
ಮಕ್ಕಳು ಅಡಿ ಕಿತ್ತು ಬಿಸಾಡಿದಂತೆ ಕಾಣುತ್ತಿರುವ ಈ ದೃಶ್ಯದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ ಸಿಬ್ಬಂದಿ ಅದೆಷ್ಟು ಮಂದಿ ಇದ್ದರೋ ಎಂದು ಕುತೂಹಲ ಹುಟ್ಟುತ್ತದೆ.
ತಂದೆ ಕಳೆದುಕೊಂಡ ದುಃಖದಲ್ಲಿ ಮದುವೆ ಹೆಣ್ಣು
ಈ ಹೆಣ್ಣುಮಗಳ ಮದುವೆ ನಿಶ್ಚಯವಾಗಿತ್ತು. ಅ ಸಂಭ್ರಮದಲ್ಲೇ ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ರೈಲು ಹತ್ತಿದ್ದಳು. ಅದರೆ ದುರಂತದಲ್ಲಿ ತನ್ನ ತಂದೆಯನ್ನು ಕಳೆದುಕೊಂಡು ನಿಸ್ಸಹಾಯಕಳಾಗಿ ನಿಂತಿದ್ದ ಹೆಣ್ಣುಮಗಳನ್ನು ಕಂಡು ಕರುಳು ಚುರ್ ಎನ್ನುವಂತಿತ್ತು.