ತಲೆಯಲ್ಲಿ ಕೊಂಬು ಮೂಡಿದ ಮಹಿಳೆಯ ಶಸ್ತ್ರಚಿಕಿತ್ಸೆಗೆ ತಯಾರಿ
ಚಾಮರಾಜನಗರ,ಮಾರ್ಚ್,31: ತಲೆಯಲ್ಲಿ ಕೊಂಬು ಮೂಡಿ, ಇದರಿಂದ ದಿನಂಪ್ರತಿ ನೋವು ಎದುರಿಸುತ್ತಿರುವ ಸೋಲಿಗ ಮಹಿಳೆ ಮಾದಮ್ಮಗೆ ಶಸ್ತ್ರಚಿಕಿತ್ಸೆ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು ಇಂದು ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಯಿದೆ.
ತಾಲೂಕಿನ ಹೊಸಪೋಡಿನ ನಿವಾಸಿಯಾಗಿದ್ದ ಮಾದಮ್ಮ ತಲೆಯಲ್ಲಿ ಕೊಂಬು ಮೂಡಿತ್ತು. ಇವರು ಆರ್ಥಿಕವಾಗಿ ಸಬಲರಲ್ಲದ ಕಾರಣ ಆಕೆ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಇದೀಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ್ಕೆ ಬಂದಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮಾದಮ್ಮಳಿಗೆ ಶಸ್ತ್ರಚಿಕಿತ್ಸೆ ನಡೆಸಲು ತಯಾರಿ ನಡೆಸಿದೆ.[ಅಚ್ಚರಿ : ಚಾಮರಾಜನಗರದ ಮಹಿಳೆ ತಲೆಯಲ್ಲಿ ಕೊಂಬು!]
ಬುಧವಾರ ಆಸ್ಪತ್ರೆಗೆ ದಾಖಲಾಗಿರುವ ಮಾದಮ್ಮಳ ತಲೆಯಲ್ಲಿ ಮೂಡುತ್ತಿರುವ ಕೊಂಬಿನ ಬಗ್ಗೆ ವೈದ್ಯರು ಪರೀಕ್ಷೆ ನಡೆಸಿದ್ದು, ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತಲೆಯಲ್ಲಿ ಕೊಂಬು ಮೂಡುವ ವಿಚಿತ್ರ ಸುದ್ದಿ ತಿಳಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸರಸ್ವತಿ ವೈದ್ಯರ ತಂಡದೊಂದಿಗೆ ಮಹಿಳೆ ವಾಸವಿದ್ದ ಹೊಸಪೋಡುಗೆ ಕರೆದೊಯ್ದು, ಪರೀಕ್ಷೆ ನಡೆಸಿದ್ದರು. ಅಲ್ಲದೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಶಸ್ತ್ರಚಿಕಿತ್ಸೆ ನಡೆಸಲು ಮಾದಮ್ಮಳನ್ನು ಒಪ್ಪಿಸಲಾಗಿತ್ತು.[ಮಹಿಳೆ ತಲೆಯಲ್ಲಿ ಕೊಂಬು, ಪರಿಶಿಷ್ಟ ವರ್ಗ ಇಲಾಖೆಯ ಸಹಾಯ]
ಮೊದಲಿಗೆ ಆಸ್ಪತ್ರೆ ಬರಲು ಹಿಂದೇಟು ಹಾಕುತ್ತಿದ್ದ ಮಾದಮ್ಮ ಮತ್ತು ಕುಟುಂಬದವರು ಕೊನೆಗೂ ದೃಢ ಮನಸ್ಸು ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು ಗುರುವಾರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಆರೋಗ್ಯ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಮಾದಮ್ಮಳಿಗೆ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತು ನೀಡಲು ಮುಂದಾಗಿದೆ.