ಈ ಬಹುಭಾಷಾ ನಟನ ಸಾವಿನ ನಿಗೂಢತೆ ಇನ್ನೂ ಬಯಲಾಗಿಲ್ಲ
ಬಹುಭಾಷಾ ನಟ, ಜಾನಪದ ಗಾಯಕ, ಮಿಮಿಕ್ರಿ ಕಲಾವಿದ ಕಲಾಭವನ್ ಮಣಿ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಮಣಿ ಅವರ ಸಾವಿನ ಪ್ರಕರಣ ರಾಜಕೀಯ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಆಡಳಿತಾರೂಢ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಈ ತಲೆ ನೋವು ಬೇಕಿಲ್ಲ.
ಕೊಚ್ಚಿ, ಮಾರ್ಚ್ 20: 'ಕಲಾಭವನ್ ಮಣಿಯ ಸಾವು ಹತ್ಯೆ ಎಂದು ಶಂಕಿಸಲು ಯಾವುದೇ ಪುರಾವೆಗಳು ಸಿಕ್ಕಿಲ್ಲ' ಎಂದು ತನಿಖಾಧಿಕಾರಿಗಳು ಕೇರಳ ಹೈಕೋರ್ಟಿಗೆ ಇತ್ತೀಚೆಗೆ ತಿಳಿಸಿದ್ದಾರೆ. ಬಹುಭಾಷಾ ನಟ, ಜಾನಪದ ಗಾಯಕ, ಮಿಮಿಕ್ರಿ ಕಲಾವಿದ ಕಲಾಭವನ್ ಮಣಿ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ.
ಮಣಿ ಅವರದ್ದು ಸಹಜ ಸಾವಲ್ಲ, ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಕೇರಳದ ಬಿಜೆಪಿ ಮುಖಂಡರು ಆಗ್ರಹಿಸಿದ್ದರು. ಆದರೆ, ಮಣಿ ಅವರ ಸಾವಿನ ಪ್ರಕರಣ ರಾಜಕೀಯ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಆಡಳಿತಾರೂಢ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಈ ಪ್ರಕರಣದ ತಲೆ ನೋವು ಬೇಕಿಲ್ಲ.[ಮಣಿ ದೇಹದಲ್ಲಿ ಕೀಟನಾಶಕ ಸೇರಿದ್ದು ಹೇಗೆ? ಸಿಬಿಐ ತನಿಖೆಯಾಗ್ಲಿ]
ಮಣಿ ಅವರದ್ದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರ ಮೃತದೇಹದಲ್ಲಿ ಮಿಥೈಲ್ ಅಲ್ಕೋಹಾಲ್ ಅಂಶ ಅಧಿಕವಾಗಿರುವುದು ಪತ್ತೆಯಾಗಿತ್ತು.
ಮರಣೋತ್ತರ ಪರೀಕ್ಷೆಯನ್ನು ತ್ರಿಸ್ಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಯಿತು. ವಿಸೇರಾದಲ್ಲಿ ಕೀಟನಾಶಕ ಅಂಶ ಇರುವುದು ಅನುಮಾನ ಮೂಡಿಸಿತ್ತು. ಆದರೆ, ಈಗ ಕೀಟನಾಶಕ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವಿಸೇರಾದಲ್ಲಿ ಕೀಟನಾಶಕ ಅಂಶ
ವಿಸೇರಾದಲ್ಲಿ ಕೀಟನಾಶಕ ಅಂಶ ಇರುವುದು ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ತ್ರಿಸ್ಸೂರಿನ ವೈದ್ಯಕೀಯ ಕಾಲೇಜು ಹಾಗೂ ಹೈದರಾಬಾದ್ನ ಸೆಂಟ್ರಲ್ ಫಾರೆನ್ಸಿಕ್ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ರಕ್ತಪರೀಕ್ಷೆಯಲ್ಲಿ ವಿಷ ಮದ್ಯ(ಮಿಥೈಲ್ ಆಲ್ಕೋಹಾಲ್) ಅಂಶ ಮಾತ್ರ ಕಂಡು ಬಂದಿದೆ. ಕೀಟನಾಶಕ ಅಂಶ ಪತ್ತೆಯಾಗಿಲ್ಲ ಎಂದು ಕೇರಳದ ಪೊಲೀಸರು ಈಗ ಕೋರ್ಟಿಗೆ ವರದಿ ನೀಡಿದ್ದಾರೆ. ಆದರೆ, ತನಿಖೆ ಇನ್ನೂ ಮುಂದುವರೆದಿದೆ.
ವರದಿ ತಿರುಚಿದ ಆರೋಪ
ಮಣಿಯ ಶರೀರದಲ್ಲಿ ವಿಷ ಮದ್ಯ ಜೊತೆಗೆ ಕ್ಲಾರ್ ಪೈಪರೀಸ್ ಎನ್ನುವ ಕೀಟನಾಶಕ ಕೂಡ ಇರತ್ತು ಎರ್ನಾಕುಲಂನಲ್ಲಿರುವ ರೀಜನಲ್ ಲ್ಯಾಬ್ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಈ ವರದಿಯನ್ನು ಪೊಲೀಸರು ಪರಿಗಣಿಸಿಲ್ಲ ಏಕೆ? ಎಂದು ಬಿಜೆಪಿ ಪ್ರಶ್ನಿಸಿದೆ. ಮಣಿ ಅವರು 2016 ಮಾರ್ಚ್ 6ರಂದು ನಿಧನರಾದರು. ಈಗ ಕಿಡ್ನಿ ವೈಫಲ್ಯವೇ ಅವರ ಸಾವಿಗೆ ಕಾರಣ ಎಂದು ಅಂತಿಮ ಷರಾ ಬರೆಯಲು ಸಿದ್ಧತೆ ನಡೆದಿದೆ.
ಬಿಜೆಪಿ ಬೆಂಬಲಕ್ಕೆ ನಿಂತಿದೆ
ಸಿಬಿಐ ತನಿಖೆಗೆ ಆಗ್ರಹಿಸಿ ಕಲಾಭವನ್ ಮಣಿ ಅವರ ಸೋದರ ಕೆ ರಾಮಕೃಷ್ಣನ್ ಅವರು ಪ್ರತಿಭಟನೆ ನಡೆಸಿದ್ದಾರೆ. ಇವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಪಶು ವೈದ್ಯೆ ಡಾ. ನಿಮ್ಮಿಯನ್ನು ಮದುವೆಯಾಗಿದ್ದ ಮಣಿ ಅವರಿಗೆ ಶ್ರೀಲಕ್ಷ್ಮಿ ಎಂಬ ಹೆಸರಿನ ಮಗಳಿದ್ದಾರೆ. ಆಟೋರಿಕ್ಷಾ ಚಾಲಕನಾಗಿ ವೃತ್ತಿ ಬದುಕು ಕಂಡುಕೊಂಡು, ಕಲಾಭವನ ನಾಟಕ ತಂಡದ ಮೂಲಕ ಹಲವಾರು ಶೋಗಳನ್ನು ನೀಡಿ ಜನಪ್ರಿಯತೆ ಗಳಿಸಿ, ನಂತರ ಚಿತ್ರರಂಗದಲ್ಲಿ ಮಿಂಚಿದ್ದರು. 2016ರ ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅವರಿಗೆ ಆಫರ್ ಬಂದಿತ್ತು.
ತನಿಖೆ ಎತ್ತ ಸಾಗಿದೆ
ಕೊಚ್ಚಿ ಪೊಲೀಸರಿಂದ ನಾಲ್ಕು ಜನರ ಬಂಧನವಾಗಿದೆ. ಎಲ್ಲರೂ ನಟ ಮಣಿ ಅವರ ಗೆಳೆಯರು ಎಂಬುದು ಗಮನಾರ್ಹ. ಮಣಿ ಅವರ ಪತ್ನಿ ಡಾಕ್ಟರ್ ನಿಮ್ಮಿ, ಸೋದರ ಆರ್ ಎಲ್ ವಿ ರಾಮಕೃಷ್ಣನ್ ಅವರು ಮಣಿ ಅವರ ಗೆಳೆಯರ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಗೆಳೆಯರು, ಬ್ಯಾಂಕ್ ಬ್ಯಾಲೆನ್ಸ್, ವಿಸೇರಾ ವರದಿ, ಕೀಟನಾಶಕ ಸಿಕ್ಕಿದ್ದು ಹೇಗೆ? ಎಂಬ ಎಲ್ಲಾ ಅಂಶವನ್ನು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಕ್ರೈಂ ವಿಭಾಗದ ಎಸ್ ಪಿ ಉನ್ನಿ ರಾಜನ್ ಹೇಳಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಾವಿನ ಕಥೆ
ಕನ್ನಡ, ಮಲಯಾಳಂ, ತಮಿಳು, ತೆಲುಗು ಸೇರಿದಂತೆ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರು ವಾಸಂತಿಯುಂ ಲಕ್ಷ್ಮಿಯುಂ ಪಿನ್ನೆ ನ್ಯಾನುಂ ಚಿತ್ರದಲ್ಲಿ ಅಂಧ ಗಾಯಕನಾಗಿ ಕಾಣಿಸಿಕೊಂಡು ಕೇರಳ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದೇ ಪಾತ್ರವನ್ನು ಕನ್ನಡ ಆವೃತ್ತಿ(ನನ್ನ ಪ್ರೀತಿಯ ರಾಮು) ಯಲ್ಲಿ ದರ್ಶನ್ ತೂಗುದೀಪ ಅವರು ನಟಿಸಿದ್ದರು. ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದ ಸಂದರ್ಭದಲ್ಲೇ ಇವರ ಅಕಾಲಿಕ ಸಾವು ಹಲವು ಅನುಮಾನಕ್ಕೆ ಎಡೆಮಾಡಿದ್ದು ಸಹಜ.