ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು : ಸಾಧ್ಯಾಸಾಧ್ಯತೆಗಳು!
ನವದೆಹಲಿ, ಫೆಬ್ರವರಿ 06 : ತಮಿಳುನಾಡಿಗೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಮೂರು ಬಾರಿಯೂ ಇತರರಿಗೆ ಅಧಿಕಾರ ಬಿಟ್ಟುಕೊಟ್ಟ ಓ ಪನ್ನೀರ್ ಸೆಲ್ವಂ ಅವರನ್ನು ತರಾತುರಿಯಲ್ಲಿ ಕೆಳಗಿಳಿಸಿ, ಶಶಿಕಲಾ ನಟರಾಜನ್ ಅವರು ಮುಖ್ಯಮಂತ್ರಿ ಪದವಿಗೇರುತ್ತಿರುವುದರ ಹಿಂದೆ ಮತ್ತೊಂದು ಬಲವಾದ ಕಾರಣವಿದೆ.
ಅದು ಎಲ್ಲರಿಗೆ ತಿಳಿದಿರುವಂತೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ನಾಲ್ವರ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಹೂಡಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಂತಿಮ ತೀರ್ಪು ಸದ್ಯದಲ್ಲಿಯೇ ಸುಪ್ರೀಂ ಕೋರ್ಟಿನಲ್ಲಿ ಪ್ರಕಟವಾಗಲಿದೆ.[ಜಯಾ -ಶಶಿಕಲಾ ಅಕ್ರಮ ಆಸ್ತಿ ಕೇಸ್, ಈ ವಾರ ತೀರ್ಪು ಪ್ರಕಟ?]
ಶಶಿಕಲಾ ಅವರು ಎಂಥಾ ಮಹತ್ವಾಕಾಂಕ್ಷೆಯ ಹೆಂಗಸು ಎಂದು ಜಯಲಲಿತಾ ಅವರ ಸ್ನೇಹಕೂಟವನ್ನು ಅವರು ಸೇರಿಕೊಂಡಾಗಲೇ ಹಲವರಿಗೆ ಮನವರಿಕೆಯಾಗಿತ್ತು. ಜಯಲಲಿತಾ ಅವರು ತೀರ ಅನಾರೋಗ್ಯಕ್ಕೆ ಈಡಾದ ನಂತರ ಅದು ಯಾವುದೇ ಸಂಶಯಕ್ಕೆ ಎಡೆಮಾಡದಂತೆ ಸಾಬೀತಾಗಿದೆ.
ಅವರ ಮಹತ್ವಾಕಾಂಕ್ಷೆ ಏನೇ ಇರಲಿ, ಶಶಿಕಲಾ ಅವರ ಹಣೆಬರಹ ಸರ್ವೋಚ್ಚ ನ್ಯಾಯಾಲಯ ಇನ್ನೇನು ನೀಡಲಿರುವ ಅಂತಿಮ ತೀರ್ಪಿನ ಮೇಲೆ ಆಧಾರವಾಗಿರುತ್ತದೆ. ಇದೇ ಕಾರಣಕ್ಕೆ ತರಾತುರಿಯಲ್ಲಿ ಪನ್ನೀರ್ ಅವರನ್ನು ಕೆಳಗಿಳಿಸಿ ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತಿರುವುದು.
ಸರ್ವೋಚ್ಚ ನ್ಯಾಯಾಲಯದ ತೀರ್ಪು, 66.65 ಕೋಟಿ ರುಪಾಯಿ ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಎರಡನೇ ಆರೋಪಿ ಸ್ಥಾನದಲ್ಲಿರುವ ಶಶಿಕಲಾ ನಟರಾಜನ್ ಅವರು ರಾಜಕೀಯ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ತೀರ್ಪು ಪರವಾದರೆ ಅಥವಾ ವ್ಯತಿರಿಕ್ತವಾದರೆ ಸಂಭವಿಸುವ ಸಾಧ್ಯತೆಗಳೇನು ಇಲ್ಲಿ ಚರ್ಚಿಸಲಾಗಿದೆ.
ತೀರ್ಪು ಬರುವವರೆಗೆ ಕಾಯಲು ರಾಜ್ಯಪಾಲರು ಹೇಳುತ್ತಾರಾ?
ನ್ಯಾಯಮೂರ್ತಿಗಳಾದ ಪಿಸಿ ಘೋಷ್ ಮತ್ತು ನ್ಯಾ. ಅಮಿತವಾ ರಾಯ್ ಅವರು ಅಂತಿಮ ತೀರ್ಪು ಪ್ರಕಟಿಸುವವರೆಗೆ ಶಶಿಕಲಾ ನಟರಾಜನ್ ಅವರು ಪ್ರಮಾಣ ವಚನ ಸ್ವೀಕರಿಸುವುದನ್ನು ಮುಂದೂಡಬೇಕೆಂದು ಕೋರುತ್ತಾರಾ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಒಂದು ವೇಳೆ ತೀರ್ಪು ಪರವಾಗಿ ಬಂದರೆ!
ಒಂದು ವೇಳೆ ತೀರ್ಪು ಶಶಿಕಲಾ ನಟರಾಜನ್ ಅವರ ಪರವಾಗಿ ಬಂದರೆ, ಅವರ ಮುಂದಿನ ರಾಜಕೀಯ ಹಾದಿ ಹೂವಿನ ಹಾಸಿಗೆಯಿದ್ದಂತೆ. ತಮಿಳುನಾಡಿನಾದ್ಯಂತ ಪಟಾಕಿಗಳು ಸಿಡಿಯಲಿವೆ, ಲಡ್ಡುಗಳು ತಮಿಳರ ಬಾಯಿಗೆ ಬೀಳಲಿವೆ. ಮತ್ತೆ ಮಹಿಳಾಮಣಿಗಳು ಢಂಕಣಕ್ಕ ಕುಣಿಯಲಿದ್ದಾರೆ.
ಒಂದು ವೇಳೆ ತೀರ್ಪು ವಿರುದ್ಧವಾಗಿದ್ದರೆ!
ಒಂದು ವೇಳೆ ತೀರ್ಪು ಶಶಿಕಲಾ ಮತ್ತಿತರರ ವಿರುದ್ಧ ಬಂದರೆ, ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಅವರು ನೀಡಿದಂತೆ 4 ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಗಿ ಮುದ್ದೆ ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಉಣ್ಣಬೇಕಾಗುತ್ತದೆ.
ಜಯಲಲಿತಾ ಸತ್ತಿದ್ದರಿಂದ...
ಈ ಪ್ರಕರಣದ ಪ್ರಮುಖ ಆರೋಪಿ ಜಯಲಲಿತಾ ಅವರೇ ಅಸುನೀಗಿರುವುದರಿಂದ ಉಳಿದವರನ್ನೂ ಬಿಡುಗಡೆ ಮಾಡಬೇಕೆಂದು ಎಐಎಡಿಎಂಕೆ ಪಕ್ಷ ಆಶಿಸುತ್ತಿದೆ. ಆದರೆ, ಹಾಗಾಗುತ್ತದಾ? ಇದು ಸದ್ಯದ ಯಕ್ಷಪ್ರಶ್ನೆ. ಆದರೆ, ಹಾಗಾಗುವ ಸಾಧ್ಯತೆ ಇಲ್ಲ. ಕೋರ್ಟ್ ಉಳಿದವರ ವಿರುದ್ಧ ತೀರ್ಪನ್ನು ಪ್ರಕಟಿಸಬಹುದು, ಶಿಕ್ಷೆ ಘೋಷಿಸಬಹುದು.
ಕರ್ನಾಟಕ ಹೈಕೋರ್ಟಿಗೆ ವಾಪಸ್ ಕಳಿಸಿದರೆ?
ಈ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೈಕೋರ್ಟ್ ನ್ಯಾಯಮೂರ್ತಿ ಕುಮಾರಸ್ವಾಮಿ ಅವರು ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಹೂಡಲಾಗಿದ್ದ ಮೇಲ್ಮನವಿಯನ್ನು ನಿರ್ಣಾಯಿಸುವಾಗ ನಾಲ್ಕು ನಿಮಿಷಗಳನ್ನೂ ತೆಗೆದುಕೊಂಡಿರಲಿಲ್ಲ. ಹೀಗಾಗಿ, ಪ್ರಕರಣದ ಪರಾಮರ್ಶೆಗೆ ಮತ್ತೆ ವಾಪರ್ ಕಳಿಸಿದರೂ ಅಚ್ಚರಿಯಿಲ್ಲ.
ಶಶಿಕಲಾಗೆ ಸಂಕಷ್ಟ ಗ್ಯಾರಂಟಿ
ಒಂದು ವೇಳೆ ಹೀಗಾದರೆ ಶಶಿಕಲಾಗೆ ಸಂಕಷ್ಟ ಗ್ಯಾರಂಟಿ. ಏಕೆಂದರೆ, ನ್ಯಾಯಮೂರ್ತಿ ಸಿ ಕುಮಾರಸ್ವಾಮಿ ಅವರು ನೀಡಿದ್ದ ತೀರ್ಪನ್ನು ತಡೆಹಿಡಿಯಲಾಗುತ್ತದೆ ಮತ್ತು ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪು ಜಾರಿಗೆ ಬರುತ್ತದೆ. ಆಗ, ಶಶಿಕಲಾ ಮತ್ತೆ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ ಮತ್ತು 6 ತಿಂಗಳು ಚುನಾವಣೆಗೆ ನಿಲ್ಲುವುದರಿಂದ ವಂಚಿತರಾಗುತ್ತಾರೆ.
ಏನದು ಅಕ್ರಮ ಗಳಿಕೆ ಆರೋಪ?
1991 ಮತ್ತು 1996ರಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಆದಾಯವನ್ನು ಮೀರಿ 66.65 ಕೋಟಿ ರುಪಾಯಿಯನ್ನು ಅಕ್ರಮವಾಗಿ ಗಳಿಸಿದ್ದರು. ಅದರಲ್ಲಿ ಉಳಿದ ಮೂವರು ಕೂಡ ಪಾಲುದಾರರಾಗಿದ್ದರು. ಶಶಿಕಲಾ ಅವರು ಎರಡನೇ ಸ್ಥಾನದಲ್ಲಿದ್ದಾರೆ.