ಬಜೆಟ್ ಅಧಿವೇಶನ ಮತ್ತೆ ರಾಡಿ ಹಿಡಿಸಲು ವಿರೋಧಿಗಳು ರೆಡಿ?
ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸದ ನಂತರ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಸರಿಯಾಗಿ ನಡೆದ ಉದಾಹರಣೆಗಳೇ ಕಮ್ಮಿ ಎನ್ನುವುದಕ್ಕಿಂತ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಸ್ವೀಕರಿಸಿದ ಳು ಸದನ ನಡೆಸಲು ಅವಕಾಶ ನೀಡಲಿಲ್ಲ ಎನ್ನುವುದೇ ಸೂಕ್ತ.
ಒಂದೊಂದು ದಿನದ ಅಧಿವೇಶನಕ್ಕೂ ಕೋಟ್ಯಾಂತರ ರೂಪಾಯಿ ಖರ್ಚಾಗುವ ಕಲಾಪದ ಅವಧಿಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವಿಲ್ಲದ ನಮ್ಮ ಕೆಲ ಜನಪ್ರತಿನಿಧಿಗಳಿಂದ ಮಂಗಳವಾರದಿಂದ (ಫೆ 23) ಆರಂಭವಾಗಲಿರುವ ಬಜೆಟ್ ಅಧಿವೇಶನಕ್ಕೆ ಇನ್ನೇನು ರಾಹುಕಾಲ ಕಾದಿದೆಯೋ? (ಕನ್ಹಯ್ಯಾ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ)
ಮೋದಿ ಅಧಿಕಾರಕ್ಕೆ ಬಂದ ನಂತರ ಬರುವ ವಾರ ಆರಂಭವಾಗುವ ಅಧಿವೇಶನ ಮೂರನೇಯದ್ದು. ಕಳೆದ ಎರಡು ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಶನವನ್ನು ದಾದ್ರಿ, ಅಸಹಿಷ್ಣುತೆ, ನ್ಯಾಷನಲ್ ಹೆರಾಲ್ಡ್ ಕೇಸ್ ಮುಂತಾದವು ನುಂಗಿ ಹಾಕಿದ್ದವು.
ಈ ಬಾರಿಯಂತೂ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ, ಎನ್ಡಿಎ ಸರಕಾರದ ವಿರುದ್ದ ಮುಗಿಬೀಳಲು ಬೇಕಾದಷ್ಟು ಪ್ರಕರಣಗಳಿವೆ. ಹೈದರಾಬಾದ್, ಜವಾಹರಲಾಲ್ ನೆಹರೂ ವಿವಿಯ ಘಟನೆಗಳು ಸಾಕಲ್ಲವೇ, ಗದ್ದಲ ಎಬ್ಬಿಸಿ ಕಲಾಪ ಹಾಳುಮಾಡಲು. (JNU ವೃತ್ತಾಂತ: ಗುಪ್ತಚರ ಸ್ಫೋಟಕ ಮಾಹಿತಿ)
ಒಟ್ಟಾರೆ ನಡೆಯುವ ಸಂಸತ್ತಿನ ಅಧಿವೇಶನಗಳಲ್ಲಿ ಸಾರ್ವಜನಿಕರಿಗೆ ಅತ್ಯಂತ ಕುತೂಹಲ ಇರುವುದೆಂದರೆ ಅದು ಬಜೆಟ್ ಅಧಿವೇಶನ. ಯಾಕೆಂದರೆ ಈ ವೇಳೆಯಲ್ಲಿ ಮಂಡನೆಯಾಗುವ ರೈಲ್ವೆ ಮತ್ತು ಕೇಂದ್ರ ಬಜೆಟ್. ರೈಲ್ವೆ ಬಜೆಟ್ ಫೆ 25ಕ್ಕೆ ಮತ್ತು ಕೇಂದ್ರ ಬಜೆಟ್ ಫೆ 29ಕ್ಕೆ ಮಂಡನೆಯಾಗಲಿದೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ..
ರೈಲ್ವೆ ಮತ್ತು ಕೇಂದ್ರ ಬಜೆಟ್
ರೈಲ್ವೆ ಬಜೆಟಿನಲ್ಲಿ ಪ್ರಯಾಣದ ದರದಲ್ಲಿನ ಏರಿಳಿತ, ಹೊಸ ಮಾರ್ಗ, ಹೊಸ ರೈಲು ಘೋಷಣೆಯಾಗಿದೆಯೋ ಎನ್ನುವುದು ಒಂದೆಡೆಯಾದರೆ, ಕೇಂದ್ರ ಬಜೆಟಿನಲ್ಲಿ ಯಾವುದು ತುಟ್ಟಿ/ಅಗ್ಗವಾಯಿತು, ಇದರ ಜೊತೆಗೆ ಸಂಬಳದಾರರಿಗೆ ಐಟಿಯಲ್ಲಿ ಮತ್ತಷ್ಟು ರಿಯಾಯತಿ ಸಿಗುತ್ತೋ ಅನ್ನೋ ಕುತೂಹಲದಿಂದಾಗಿ ಈ ಅಧಿವೇಶನಕ್ಕೆ ಹೆಚ್ಚಿನ ಪ್ರಾಶಸ್ತ್ಯ.
ಬಜೆಟ್ ಅಧಿವೇಶನದಲ್ಲಿ ಗದ್ದಲ
ಮಂಗಳವಾರ (ಫೆ 16) ಪ್ರಧಾನಿ ಮೋದಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಮತ್ತು ಜವಾಹರಲಾಲ್ ನೆಹರೂ ವಿವಿಯ ಬಗ್ಗೆ ಸದನದಲ್ಲಿ ಪ್ರಸ್ತಾವಿಸುವುದಾಗಿ ಕಾಂಗ್ರೆಸ್ ಈಗಾಗಲೇ ಹೇಳಿಕೆ ನೀಡಿದೆ. ಆನಂದ್ ಶರ್ಮಾ ಮತ್ತು ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದರು.
ಜಿಎಸ್ಟಿ ಬಿಲ್ ಕಥೆ ಏನಾಗುತ್ತೋ?
ಈ ಎರಡು ಪ್ರಕರಣದ ಜೊತೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಿಎಸ್ಟಿ ಬಿಲ್ ಈ ಅಧಿವೇಶನದಲ್ಲೂ ಪಾಸ್ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ನಾವು ಹೇಳಿದಷ್ಟು (18%) ತೆರಿಗೆಗೆ ಒಪ್ಪಿದರೆ ಹದಿನೈದು ನಿಮಿಷದಲ್ಲಿ ಬಿಲ್ ಪಾಸ್ ಆಗುತ್ತೆ ಎಂದು ಕಾಂಗ್ರೆಸ್ ಯುವರಾಜರು ಹೈದರಾಬಾದಿನಲ್ಲಿ ಘರ್ಜಿಸಿದ್ದರು.
ಮನಮೋಹನ್ ಸಿಂಗ್ ಹೇಳಿದ್ದು
ಬಿಜೆಪಿಯವರು ಇದೇ ರೀತಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಟೀಕಿಸುತ್ತಿದ್ದರೆ, ಜಿಎಸ್ಟಿ ಬಿಲ್ ಪಾಸ್ ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದು ಈಗ ಚರ್ಚೆಯ ವಿಷಯವಾಗಿದೆ.
ಹಗರಣಗಳು
ಮೇ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ, ಅಧಿವೇಶನದ ಮುನ್ನ ಭಾರೀ ಸುದ್ದಿಯಾಗಿದ್ದ ವ್ಯಾಪಂ, ಮೋದಿ ಗೇಟ್, ಅಸಹಿಷ್ಣುತೆ, ದಾದ್ರಿ, ನ್ಯಾಷನಲ್ ಹೆರಾಲ್ಡ್ ಮುಂತಾದ ವಿಚಾರದಲ್ಲಿ ಸದನದ ಸಮಯವನ್ನು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಹಾಳು ಮಾಡಿದ್ದವು.
ಬಜೆಟ್ ಅಧಿವೇಶನ
ಮಂಗಳವಾರದಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈಗಾಗಲೇ ಹೈದರಾಬಾದ್ ಸ್ನಾತಕೋತ್ತರ ವಿದ್ಯಾರ್ಥಿ ರೋಹಿತ್ ವೇಮುಲ, JNU ಘಟನೆ ಭಾರೀ ಸುದ್ದಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಬಿಜೆಪಿ ಮುಖಂಡರ ಹೇಳಿಕೆ, ಕೇಂದ್ರ ಗೃಹಸಚಿವಾಲಯ ವ್ಯಾಪ್ತಿಯಲ್ಲಿ ಬರುವ ದೆಹಲಿ ಪೊಲೀಸರ ವಿರುದ್ದ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಮುಗಿಬೀಳುವ ಎಲ್ಲಾ ಲಕ್ಷಣಗಳು ಕಾಣುತ್ತಿರುವುದರಿಂದ ಮೋದಿ 'ವಾಷ್ ಔಟ್ ಹ್ಯಾಟ್ರಿಕ್' ಅನುಭವಿಸುವುದು ಹೆಚ್ಚುಕಮ್ಮಿ ನಿಶ್ಚಿತ ಎನ್ನಲಾಗುತ್ತಿದೆ.