JNU: ಮತ್ತೆ ಕೋಲಾಹಲ, ರಣರಂಗವಾದ ಪಟಿಯಾಲ ಕೋರ್ಟ್
ನವದೆಹಲಿ, ಫೆಬ್ರವರಿ, 17: ಬುಧವಾರ ಸಹ ನವದೆಹಲಿಯಲ್ಲಿ ಗೊಂದಲಗಳದ್ದೇ ಕಾರು ಬಾರು. ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಕನ್ಹಯ್ಯ ಕುಮಾರ್ ಮೇಲೆ ವಕೀಲರಿಂದ ಕೋರ್ಟ್ ನಲ್ಲೇ ಹಲ್ಲೆ, ಇದಾದ ಮೇಲೆ ಬಿಗಿ ಭದ್ರತೆಯಲ್ಲಿ ರವಾನೆ, ಮಾರ್ಚ್ 2 ರವರೆಗೆ ಕುಮಾರ್ ಗೆ ನ್ಯಾಯಾಂಗ ಬಂಧನ ಇದು ಬುಧವಾರದ ಘಟನಾವಳಿಗಳ ಹೈಲೈಟ್ಸ್.
ಪಟಿಯಾಲಾ ಹೌಸ್ ಕೋರ್ಟ್ ಗೆ ಕುಮಾರ್ ನನ್ನು ಹಾಜರುಪಡಿಸಿದ ಸಂದರ್ಭ ಹೊರಭಾಗದಲ್ಲಿ ವಕೀಲರು ಪತ್ರಕರ್ತರು, ಕನ್ನಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಎರಡು ವಕೀಲರ ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಬಿಗಿ ಭದ್ರತೆ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.[ಪತ್ರಕರ್ತರು ಮತ್ತು ವಕೀಲರ ನಡುವೆ ಜಟಾಪಟಿ]
ಜವಾಹರ ಲಾಲ್ ವಿವಿಯಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದಾರೆ ಎಂಬ ಸಂಗತಿ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಇದಾದ ಮೇಲೆ ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ನನ್ನು ಬಂಧಿಸಲಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಕನಡುವಿನ ಜಟಾಪಟಿಗೂ ಘಟನೆ ಕಾರಣವಾಗಿತ್ತು.
ಕುಮಾರ್ ಗೆ 14 ದಿನ ನ್ಯಾಯಾಂಗ ಬಂಧನ
ದೇಶದ್ರೋಹ ಆರೋಪದಡಿಯಲ್ಲಿ ಬಂಧಿಸಲ್ಪಟ್ಟಿರುವ ಕನ್ಹಯ್ಯ ಕುಮಾರ್ ಗೆ ದೆಹಲಿ ಪಟಿಯಾಲಾ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ನನಗೆ ಸಂವಿಧಾನದ ಮೇಲೆ ಗೌರವವಿದೆ
ನಾನು ಭಾರತೀಯ, ಈ ದೇಶದ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಕನ್ಹಯ್ಯ ಕುಮಾರ್ ಬುಧವಾರ ಹೇಳಿದ್ದಾರೆ.
ಮಾನವ ಹಕ್ಕು ಆಯೋಗದಿಂದ ನೋಟಿಸ್
ದೇಶದ್ರೋಹ ಆರೋಪದ ಮೇಲೆ ಬಂಧಿತರಾಗಿರುವ ಕನ್ಹಯ್ಯ ಕುಮಾರ್ ನನ್ನು ಕೋರ್ಟ್ ಗೆ ಹಾಜರುಪಡಿಸಿದ ವೇಳೆ ನಡೆದ ಘರ್ಷಣೆ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ದೆಹಲಿ ಪೊಲೀಸ್ ಆಯುಕ್ತರಿಗೆ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಕ್ಲೀನ್ ಚಿಟ್ ಇಲ್ಲ
ಕನ್ಹಯ್ಯ ಕುಮಾರ್ ಭಾರತ ವಿರೋಧಿ ಚಟುವಟಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷಿಗಳಿವೆ. ಕ್ಲೀನ್ ಚಿಟ್ ಕೊಡಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸ್ ಕಮೀಷನರ್ ಬಿಎಸ್ ಬಸ್ಸಿ ಬುಧವಾರ ತಿಳಿಸಿದ್ದು ಪ್ರಧಾನಿ ಮೋದಿಗೆ ವರದಿ ನೀಡಲಿದ್ದಾರೆ.