ಸೈನಿಕರೇ, ಸಾಮಾಜಿಕ ಜಾಲತಾಣದಲ್ಲಿ ದೂರದಿರಿ: ಸೇನಾ ಮುಖ್ಯಸ್ಥ
ಸೈನಿಕರು, ತಮಗಿರುವ ಕುಂದು ಕೊರತೆ, ತೊಂದರೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ, ಜನವರಿ 15: ಸೈನಿಕರು, ತಮಗಿರುವ ಕುಂದು ಕೊರತೆ, ತೊಂದರೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಸೇನಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸೈನಿಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಇತ್ತೀಚೆಗೆ, ಜಮ್ಮು-ಕಾಶ್ಮೀರ ಗಡಿ ಪ್ರದೇಶದಲ್ಲಿ ಕಾವಲು ನಿರತ ಯೋಧನೊಬ್ಬ ಸೈನಿಕರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವೀಡಿಯೊ ಸಹಿತ ಫೇಸ್ ಬುಕ್ ನಲ್ಲಿ ದೂರಿದ್ದ. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದಾಗಿ, ಎರಡು ದಿನಗಳಲ್ಲಿ ಅರೆಸೇನಾ ಪಡೆಯ ಯೋಧನೊಬ್ಬ ತಮಗೆ ರಜೆ ಮುಂತಾದ ಸವಲತ್ತುಗಳಿಲ್ಲವೆಂದು ಫೇಸ್ ಬುಕ್ ವೀಡಿಯೋದಲ್ಲಿ ಅಲವತ್ತುಕೊಂಡಿದ್ದ. ಇದೂ ಸಹ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಹಿನ್ನೆಲೆಯಲ್ಲಿ, ಸೇನಾ ಮುಖ್ಯಸ್ಥರಿಂದ ಈ ಎಚ್ಚರಿಕೆ ರವಾನೆಯಾಗಿದೆ. ತಮ್ಮ ಹೇಳಿಕೆಯಲ್ಲಿ ಅವರು, "ಪ್ರತಿಯೊಬ್ಬ ಸೈನಿಕನಿಗೂ ತನ್ನ ಸಮಸ್ಯೆಗಳ ಬಗ್ಗೆ ದೂರು ನೀಡಲು ಪ್ರತ್ಯೇಕ ವ್ಯವಸ್ಥೆಯಿದೆ. ಆ ಮೂಲಕವೇ ಅವರು ವ್ಯವಹರಿಸಬೇಕು. ತಾವು ದೂರು ನೀಡಿದ ಹೊರತಾಗಿಯೂ ಸಮಸ್ಯೆ ನಿವಾರಣೆಯಾಗಲಿಲ್ಲವೆಂದರೆ, ನೀವು ನೇರವಾಗಿ ನನ್ನನ್ನು ಸಂಪರ್ಕಿಸಬಹುದು'' ಎಂದು ಕಿವಿಮಾತು ಹೇಳಿದ್ದಾರೆ.