ಜಮ್ಮು, ಕಾಶ್ಮೀರದ ಸಿಎಂ ಸಯೀದ್ ಸಂಕ್ಷಿಪ್ತ ಪರಿಚಯ
(ಪಿಟಿಐ) ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೇರಿರುವ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಸೂಕ್ಷ್ಮ ಮತ್ತು ಸ್ವಜನ ಪಕ್ಷಪಾತದ ರಾಜಕೀಯ ನಡೆಗೆ ಹೆಸರಾದವರು.
ಬಿಜೆಪಿ ಜೊತೆ ಸೈದ್ದಾಂತಿಕ ಗೊಂದಲಗಳಿದ್ದರೂ ಅವರ ಜೊತೆಗೆ ಮೈತ್ರಿಯೊಂದಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮುಫ್ತಿ, ಪ್ರಮಾಣವಚನ ಸ್ವೀಕರಿಸಿದ ಸಮಯದಿಂದಲೇ ಬಿಜೆಪಿಗೆ ಮುಜುಗರವನ್ನು ತಂದಿಡುತ್ತಿದ್ದಾರೆ.
ಮುಫ್ತಿ ಮೊಹಮ್ಮದ್ ಅವರ ಪಿಡಿಪಿ ಹಿಂದಿನಿಂದಲೂ ಪ್ರತ್ಯೇಕತಾವಾದಿಗಳ ಮತ್ತು ಸ್ವತಂತ್ರ ರಾಷ್ಟ್ರದ ಪರವಾಗಿದ್ದರು. ಆದರೂ ಬಿಜೆಪಿ ಇವರ ಸಖ್ಯ ಬೆಳೆಸಿರುವ ಹಿಂದೆ ದೇಶದೆಲ್ಲಡೆ ಬಿಜೆಪಿ ಸರಕಾರ ಇರಬೇಕೆನ್ನುವ ಅಮಿತ್ ಶಾ ಅವರ ಕನಸೂ ಇದ್ದಿರಬಹುದು. (ಮುಫ್ತಿ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ)
ರಾಜ್ಯ ರಾಜಕೀಯದಲ್ಲಿ ದಶಕಗಳ ಅನುಭವಹೊಂದಿರುವ ಮುಫ್ತಿ ದೇಶದ ಮೊದಲ ಮುಸ್ಲಿಂ ಗೃಹ ಸಚಿವರಾಗಿದ್ದವರು ಕೂಡಾ. ವಿ ಪಿ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ತನ್ನ ಮಗಳನ್ನು ಭಯೋತ್ಪಾದಕರು ಅಪಹರಿಸಿದಾಗ ಅವರ ಬೇಡಿಕೆಯಂತೆ ಐವರು ಉಗ್ರರನ್ನು ಬಿಡುಗಡೆ ಮಾಡಿಸಿದ್ದರು.
ಕೇಂದ್ರದಲ್ಲಿ ವಿ ಪಿ ಸಿಂಗ್ ಸರಕಾರ ಅಧಿಕಾರಕ್ಕೆ ಬಂದ ಕೇವಲ ಐದೇ ದಿನದಲ್ಲಿ (02.12.1989) ಗೃಹ ಸಚಿವರಾಗಿದ್ದ ಮುಫ್ತಿ ಮಗಳು ರೂಬಿಯಾ ಅಪಹರಣವಾಗಿದ್ದು, ಹತ್ತು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೇ ಈ ವಿಚಾರ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಅಧಿಕಾರಕ್ಕಾಗಿ ಸ್ಪಷ್ಟ ರಾಜಕೀಯ ನಿಲುವು ಪ್ರದರ್ಶಿಸದ ಮುಫ್ತಿ, 1990ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾದ ಸಂದರ್ಭದಲ್ಲಿ ಕಾಶ್ಮೀರ ಪಂಡಿತರು ಕಣಿವೆಯನ್ನು ತೊರೆದಿದ್ದರು. ಆಗ ಮುಫ್ತಿ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದು, ಆಂತರಿಕ ಭದ್ರತೆಯ ವಿಚಾರದಲ್ಲಿ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. (ಜಮ್ಮುವಿನಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ)
ರಾಜೀವ್ ಗಾಂಧಿ ಕಾಲದಲ್ಲಿ
ಇದಕ್ಕೂ ಮುನ್ನ ರಾಜೀವ್ ಗಾಂಧಿ ಸರಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಮುಫ್ತಿ, ಒಂದೇ ವರ್ಷದಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೀರಠ್ ನಲ್ಲಿ ನಡೆದಿದ್ದ ಗಲಭೆಯನ್ನು ಕಾಂಗ್ರೆಸ್ ಸರಿಯಾಗಿ ನಿಭಾಯಿಸಲಿಲ್ಲ ಎಂದು ಕೇಂದ್ರ ಸಚಿವ ಸಂಪುಟದಿಂದ ಹೊರನಡೆದಿದ್ದರು.
ಕಾಂಗ್ರೆಸ್ ನೊಂದಿಗೆ ಮೈತ್ರಿ
ಅಂದು ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದ ಇದೇ ಮುಫ್ತಿ, 2002ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಜಮ್ಮು, ಕಾಶ್ಮೀರದ ಮುಖ್ಯಮಂತ್ರಿಯಾದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯರನ್ನು ಕಾಶ್ಮೀರದಲ್ಲಿ ಭಾಷಣ ಮಾಡುವಂತೆ ಆಹ್ವಾನಿಸಿ, ಹೊಸ ರಾಜಕೀಯ ತಂತ್ರಗಾರಿಕೆಯ ಮೊರೆ ಹೋಗಿದ್ದರು.
ವಿನಮ್ರ ರಾಜಕಾರಣಿ ಮುಫ್ತಿ
ವಿನಮ್ರ ರಾಜಕಾರಣಿಯೆಂದೇ ಹೆಸರಾಗಿರುವ ಮುಫ್ತಿ, ತನ್ನ ಮಗಳು ಮೆಹಬೂಬ ಮುಫ್ತಿ ಜೊತೆ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಮುನ್ನ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದವರು. ತನ್ನ ರಾಜಕೀಯ ಎದುರಾಳಿ ಫಾರೂಕ್ ಅಬ್ದುಲ್ಲಾ ರಾಜಕೀಯದಲ್ಲಿ ಬೆಳೆದ ಬಂದ ರೀತಿಯಲ್ಲೇ ಮುಫ್ತಿ, ಪ್ರಾದೇಶಿಕ ಪಕ್ಷ ಸ್ಥಾಪಿಸಿದ ಮೂರೇ ವರ್ಷದಲ್ಲಿ ಕಾಂಗ್ರೆಸ್ ಜೊತೆ ಸೇರಿ ಜಮ್ಮು ಕಾಶ್ಮೀರದಲ್ಲಿ ಅಧಿಕಾರಕಕ್ಕೇರಿದರು.
ಕಾನೂನು ಪದವೀಧರ
ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಕಾನೂನು ಪದವೀಧರರಾಗಿರುವ ಮುಫ್ತಿ ಮೊಹಮ್ಮದ್ ಈಗ ಮತ್ತೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಕ್ಕೇರಿದ ಕೆಲವೇ ದಿನದಲ್ಲಿ ಪ್ರತ್ಯೇಕತಾವಾದಿ ಮಸರತ್ ಆಲಂನನ್ನು ಬಿಡುಗಡೆಗೊಳಿಸಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಬಿಜೆಪಿ ತಿರುಗಿಬಿದ್ದಾಗ
ಬಿಜೆಪಿ ಈ ವಿಚಾರದಲ್ಲಿ ತೀವ್ರವಾಗಿ ತಿರುಗಿಬಿದ್ದ ನಂತರ ಜೊತೆಗೆ ಲೋಕಸಭೆ ಒಕ್ಕೂರಿಲಿನಲ್ಲಿ ವಿರೋಧಿಸಿದ ನಂತರ, ಬಿಜೆಪಿಯ ಮತ್ತು ಕೇಂದ್ರ ಗೃಹ ಸಚಿವಾಲಯದ ಅನುಮತಿ ಇಲ್ಲದೇ ಇನ್ನು ಮುಂದೆ ಯಾರನ್ನೂ ಬಿಡುಗಡೆ ಮಾಡುವುದಿಲ್ಲ ಎಂದು ಮುಫ್ತಿ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಗೆ ಮುಳುವಾದೀತು
ಕಾಲಕ್ಕೆ ತಕ್ಕಂತೆ ರಾಜಕೀಯ ನಡೆಯಿಡುವ ಮುಫ್ತಿ ಮೊಹಮ್ಮದ್ ಸಯೀದ್ ಜೊತೆಗಿನ ನಂಟು, ಬಿಜೆಪಿಗೆ ಮುಂದೊಂದು ದಿನ ಕಂಟಕವಾದರೂ ಆಶ್ಚರ್ಯ ಪಡಬೇಕಾಗಿಲ್ಲ.