ತೆರಿಗೆ ಹೊರೆ ಕಡಿಮೆ ಆಗುತ್ತೆ: ವಿತ್ತ ಸಚಿವ ಅರುಣ್ ಜೇಟ್ಲಿ ಇಶಾರೆ
ಮುಂದುವರಿದ ದೇಶಗಳಲ್ಲಿ ಒಂದೋ ತೆರಿಗೆಯೇ ಇಲ್ಲ ಅಥವಾ ತೆರಿಗೆ ಪ್ರಮಾಣ ಕಡಿಮೆ. ಅಪನಗದೀಕರಣ ನಿರ್ಧಾರದ ನಂತರ ಭಾರತದ ಅರ್ಥ ವ್ಯವಸ್ಥೆ ಎಷ್ಟು ಬಲಿಷ್ಠವಾಗಿದೆ ಎಂಬುದು ಗೊತ್ತಾಗುತ್ತಿದೆ. ತೆರಿಗೆ ಹೊರೆ ಕಡಿಮೆ ಆಗುತ್ತದೆ ಎಂಬ ಸೂಚನೆ ಸಿಕ್ಕಿದೆ
ನವದೆಹಲಿ, ಡಿಸೆಂಬರ್ 13: ಬ್ಯಾಂಕ್, ಎಟಿಎಂಗಳ ಮುಂದೆ ನಿಂತು, ನಮ್ಮ ದುಡ್ಡು ನಮಗೆ ಕೊಡದಿದ್ದರೆ ಹೇಗೆ ಎಂದು ಬೇಸರಿಸಿಕೊಂಡ ಕ್ಷಣಗಳನ್ನೆಲ್ಲ ಮರೆಸುವಂಥ ವಿಚಾರವೊಂದರ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಶಾರೆಯೊಂದನ್ನು ಕೊಟ್ಟಿದ್ದಾರೆ. ತೆರಿಗೆ ಆದಾಯದಲ್ಲಿ ಹೆಚ್ಚಳವಾಗಿರುವುದರಿಂದ ನೇರ ಹಾಗೂ ಪರೋಕ್ಷ ತೆರಿಗೆ ದರದಲ್ಲಿ ಕಡಿಮೆ ಮಾಡುವ ಸೂಚನೆಯನ್ನು ಮಂಗಳವಾರ ನೀಡಿದ್ದಾರೆ.
ಇಷ್ಟು ಕಾಲ ಲೆಕ್ಕಕ್ಕೆ ನೀಡದೆ ತಪ್ಪಿಸಿಕೊಂಡಿದ್ದ ಕಪ್ಪುಕುಳಗಳೀಗ ಲೆಕ್ಕ ಕೊಟ್ಟು, ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಕಾನೂನುಬಾಹಿರವಾಗಿ ಹಣ ಕ್ರೋಡೀಕರಿಸುವವರು ಇನ್ನೂ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು, ಆ ರೀತಿ ನಗದು ಒಟ್ಟು ಹಾಕಿಕೊಳ್ಳುವವರ ಮೇಲೆ ಕಣ್ಗಾವಲು ಇಡಲಾಗುವುದು ಎಂದು ಹೇಳಿದ್ದಾರೆ.['ತೆರಿಗೆ ಬೇಡವೇ ಬೇಡ, ಆದಾಯದಲ್ಲಿ ಶೇ 2ರಷ್ಟು ಕೊಟ್ಟರೆ ಸಾಕು!']
ನವೆಂಬರ್ 8ರಂದು 500, 1000 ನೋಟನ್ನು ಅಮಾನ್ಯ ಮಾಡಿದ್ದರಿಂದ ಚಲಾವಣೆಯಲ್ಲಿದ್ದ ಶೇ 86ರಷ್ಟು ಹಣವನ್ನು ಹಿಂಪಡೆಯುವ ನಿರ್ಧಾರ ಮಾಡಲಾಯಿತು. "ಚಲಾವಣೆಯಲ್ಲಿದ್ದ ಬಿಡಿ ಮೊತ್ತ, ಬ್ಯಾಂಕ್ ವ್ಯವಸ್ಥೆಯೊಳಗೆ ಲೆಕ್ಕಕ್ಕೆ ಸಿಗದೆ ಉಳಿದಿದ್ದ ಹಣ ಈಗ ಕಣ್ಣಳತೆಯೊಳಗೆ ಸಿಕ್ಕಿದೆ. ಈಗ ತೆರಿಗೆ ವ್ಯಾಪ್ತಿಯೊಳಗೆ ಬಂದಿದ್ದು, ಯಾವುದಕ್ಕೆ ತೆರಿಗೆ ಪಾವತಿಸಿರಲಿಲ್ಲವೋ ಅದನ್ನು ವಸೂಲಿ ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.
ಇನ್ನು ಮುಂದೆ ಬಹುತೇಕ ವ್ಯವಹಾರಗಳು ಡಿಜಿಟಲ್ ಆಗುತ್ತವೆ. ಭಾರತದಲ್ಲಿ ಇನ್ನು ಮುಂದೆ ನಗದುರಹಿತ ವ್ಯವಹಾರ ಗಣನೀಯವಾಗಿ ಜಾಸ್ತಿಯಾಗುತ್ತದೆ. ಆದ್ದರಿಂದ ಭವಿಷ್ಯದಲ್ಲಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಸದ್ಯಕ್ಕಿಂತ ತುಂಬ ಹೆಚ್ಚು ಸಂಗ್ರಹವಾಗುವುದರಿಂದ ನೇರ ಹಾಗೂ ಪರೋಕ್ಷ ತೆರಿಗೆಯಲ್ಲಿ ಕಡಿಮೆ ಮಾಡಬಹುದು ಎಂದರು.[500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]
ಅಪನಗದೀಕರಣದ ಜತೆಗೆ ಇತರ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಎಸ್ ಟಿ, ನಗದು ಖರ್ಚಿನ ಮೇಲೆ ಮಿತಿ (ಪ್ಯಾನ್ ಕಾರ್ಡ್ ಸಂಖ್ಯೆ ಹಾಕಿ ಘೋಷಿಸಿರುವ ಆದಾಯವನ್ನು ಪರಿಶೀಲಿಸಲಾಗುವುದು) ಹಾಕುವುದರಿಂದ ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಇದ್ದು, ಕಾನೂನುಬಾಹಿರವಾಗಿ ಕಪ್ಪು ಹಣ ಬದಲಿಸಲು ನೆರವಾಗುತ್ತಿರುವವರ ಮೇಲೆ ತನಿಖಾ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿವೆ. ಸಿಕ್ಕಿಬಿದ್ದಾಗ ತಪ್ಪಿಗೆ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.