ಮಮತಾ ಬ್ಯಾನರ್ಜಿಗೆ ಜೀವಬೆದರಿಕೆ, 50 ಲಕ್ಷ ರುಪಾಯಿಗೆ ಬೇಡಿಕೆ
ಕೋಲ್ಕತ್ತಾ, ಡಿಸೆಂಬರ್ 13: 50 ಲಕ್ಷ ರುಪಾಯಿ ಕೊಡಲಿಲ್ಲ ಅಂದರೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೊಲ್ತೀವಿ ಎಂದು ಬೆದರಿಕೆ ಹಾಕುವ ಪತ್ರವೊಂದು ರೈಲ್ವೆ ಇಲಾಖೆ ಜನರಲ್ ಮ್ಯಾನೇಜರ್ ಅವರಿಗೆ ಬಂದಿದೆ. ಒಂದು ವೇಳೆ ಹಣ ಹೊಂದಿಸಲಿಲ್ಲ ಅಂದರೆ ಲಕ್ಷಾಂತರ ಜನರನ್ನು ಕೊಲ್ತೀವಿ ಎಂದು ಬೆದರಿಕೆ ಹಾಕಲಾಗಿದೆ.
ಪತ್ರ ಬರೆದ ವ್ಯಕ್ತಿಯು ತಾನು ಜೈಶ್ ಇ ಮೊಹ್ಮದ್ ಉಗ್ರ ಸಂಘಟನೆ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಪಶ್ಚಿಮ ಬಂಗಾಲದ ಐವತ್ತು ಅಪಾರ್ಟ್ ಮೆಂಟ್ ಗಳಲ್ಲಿ ಉಗ್ರರು ಅಡಗಿಕೊಂಡಿದ್ದಾರೆ. ಹೆಚ್ಚಿಗೆ ಬುದ್ಧಿವಂತಿಕೆ ತೋರಿಸುವುದಕ್ಕೆ ಪ್ರಯತ್ನಿಸಿದರೆ ಹೌರಾ ರೈಲ್ವೆಯಲ್ಲಿ ಲಕ್ಷಾಂತರ ಮಂದಿಯನ್ನು ಕೊಲ್ತೀವಿ ಎಂದು ಬೆದರಿಕೆ ಹಾಕಲಾಗಿದೆ.[ನಾನು ಸಾಯಲಿ ಬದುಕಲಿ ಮೋದಿಯನ್ನು ಕಿತ್ತೊಗೆಯಿರಿ: ಮಮತಾ]
ಪತ್ರ ಬಂದ ನಂತರ ಸಮಗ್ರ ತನಿಖೆಯನ್ನು ಮಾಡಲಾಗಿದೆ. ಪತ್ರದಲ್ಲಿ ಫೋನ್ ನಂಬರ್, ವಿಳಾಸವಿದೆ. ಆದರೆ ತನಿಖೆ ನಂತರ ಅವೆಲ್ಲ ಸುಳ್ಳು ಎಂದು ಗೊತ್ತಾಗಿದೆ ಎಂದು ರೈಲ್ವೆ ಅಧಿಕಾರಿ ಆರ್ಯನ್ ಮಹಾಪಾತ್ರ ತಿಳಿಸಿದ್ದಾರೆ. ಇದೊಂದು ನಕಲಿ ಪತ್ರ. ರೈಲ್ವೆಯ ನೌಕರರ ಪೈಕಿಯೇ ಒಬ್ಬರು ಬರೆದಿರಬಹುದು. ಈ ಬಗ್ಗೆ ಸಂಪೂರ್ಣ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.