ಇವರೇ ಕಣ್ರಿ.. ಯೋಗಿ ಹೆಸರನ್ನು ಅಮಿತ್ ಶಾ, ಮೋದಿಗೆ ಸಜೆಸ್ಟ್ ಮಾಡಿದ್ದು!
ಶಾ ಅವರ ಐಡಿಯಾಕ್ಕೆ ಇಂಬು ಕೊಟ್ಟವರೇ ಪ್ರತಾಪ್ ಬಾನು ಮೆಹ್ತಾ. ಅವರೇ, ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಬೇಕು. ಹಾಗಾದಲ್ಲಿ ಬಿಜೆಪಿ ವರ್ಚಸ್ಸು ಮುಗಿಲೆತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದ್ದರು.
ನವದೆಹಲಿ, ಮಾರ್ಚ್ 21: ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಆರಿಸಬೇಕು ಎಂಬ ಚರ್ಚೆಯಲ್ಲಿ ನಿರತರಾಗಿದ್ದಾಗ ಈ ವ್ಯಕ್ತಿಯೇ ಇದ್ದಕ್ಕಿದ್ದಂತೆ ಯೋಗಿ ಆದಿತ್ಯನಾಥ್ ಹೆಸರನ್ನೇಳಿದ್ದು.
ಉತ್ತರ ಪ್ರದೇಶ ಮಾತ್ರವಲ್ಲ, ಕೆಲವಾರು ರಾಜ್ಯಗಳ ಮುಖ್ಯಮಂತ್ರಿ ಸ್ಥಾನಕ್ಕೆ ವ್ಯಕ್ತಿಯೊಬ್ಬರ ಆಯ್ಕೆಗೆ ಸಂಬಂಧಿಸಿದಂತೆ ಆರ್ ಎಸ್ಎಸ್, ಅಖಿಲ ಭಾರತೀಯ ಪ್ರತಿನಿಧಿ ಮಹಾಸಭಾಗಳು ಕೆಲವೊಮ್ಮೆ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ, ಇಲ್ಲಿ ಹಾಗಾಗಲಿಲ್ಲ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ದ್ವಂದ್ವದಲ್ಲಿ ಸಿಲುಕಿಕೊಂಡಿದ್ದರು. ಮೋದಿಯವರಾದರೋ ಹಾಲಿ ದೂರಸಂಪರ್ಕ ಇಲಾಖೆ ಸಚಿವರಾದ ಮನೋಜ್ ಸಿನ್ಹಾ ಅವರನ್ನೇ ಉತ್ತರ ಪ್ರದೇಶ ಮುಖ್ಯಮಂತ್ರಿ ಗಾದಿಯಲ್ಲಿ ಕೂಡಿಸಬೇಕೆಂಬ ಆಸೆ ಇತ್ತು. ಅದಕ್ಕೆ ಕಾರಣ ಸಿನ್ಹಾ ಅನುಭವಿ ಹಾಗೂ ಶುದ್ಧಹಸ್ತರೆಂಬುದು.
ಆದರೆ, ಅಮಿತ್ ಶಾ ಅವರ ಲೆಕ್ಕಾಚಾರವೇ ಬೇರೆಯದ್ದಾಗಿತ್ತು. ಅವರ ಮನಸ್ಸಿನಲ್ಲಿದ್ದಿದ್ದು ಒಬ್ಬ ಸ್ಟ್ರಾಂಗ್ ಲೀಡರ್. ಎಂಥಾ ಸ್ಟ್ರಾಂಗ್ ಲೀಡರ್ ಎಂದರೆ, ಆತನ ಒಂದೇ ಒಂದು ಗುಡುಗು ದನಿಗೆ ಇಡೀ ಉತ್ತರ ಪ್ರದೇಶ ಸ್ತಬ್ಧವಾಗಬೇಕು. ಆತನ ಒಂದು ಆಣತಿ ನೀಡಿದರೆ, ಅದನ್ನು ಪಾಲಿಸಲು ಲಕ್ಷೋಪಕ್ಷ ಸಂಖ್ಯೆಯಲ್ಲಿ ಜನ ನಿಂತಿರಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ, ಮಾಸ್ ಲೀಡರ್ ಒಬ್ಬನ ಅವಶ್ಯಕತೆಯನ್ನು ಶಾ, ಮನಗಂಡಿದ್ದರು.
ಅವರ ಮನಸ್ಸಿನಲ್ಲೂ ಎಲ್ಲೋ ಒಂದು ಕಡೆ, ತಮ್ಮ ಆಲೋಚನೆಗಳಿಗೆ ಸೂಕ್ತವಾಗುವ ವ್ಯಕ್ತಿ ಆದಿತ್ಯನಾಥ ಎಂದೆನಿಸಿತ್ತು. ಆದರೆ, ಆ ಬಗ್ಗೆ ಚರ್ಚೆ ಶುರು ಮಾಡಿದರೆ, ತಮಗೆ ವಿರೋಧಗಳೇ ಹೆಚ್ಚು ಬರಬಹುದೆಂದು ಆಲೋಚಿಸಿ ಕೊಂಚ ಅದನ್ನು ಪಕ್ಕಕ್ಕಿಟ್ಟಿದ್ದರು.
ಆಗ, ಶಾ ಅವರ ಐಡಿಯಾಕ್ಕೆ ಇಂಬು ಕೊಟ್ಟವರೇ ಈ ವ್ಯಕ್ತಿ. ಅವರೇ. ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಬೇಕು. ಹಾಗಾದಲ್ಲಿ ಬಿಜೆಪಿ ವರ್ಚಸ್ಸು ಮುಗಿಲೆತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದ್ದರು. ಅವರು ಯಾರು?
ಅವರ ಹೆಸರು... ಪ್ರತಾಪ್ ಬಾನು ಮೆಹ್ತಾ. ಇವರೊಬ್ಬ ರಾಜಕೀಯ ತಜ್ಞ ಮಾತ್ರವಲ್ಲದೆ ಥಿಂಕ್ ಟ್ಯಾಂಕ್. ಆಧುನಿಕ ರಾಜಕೀಯವನ್ನು ಅರೆದು ಕುಡಿದವರು. ಆಕ್ಸಫರ್ಡ್ ನಲ್ಲಿ ಓದಿರುವ ಮೇಧಾವಿ. ರಾಷ್ಟ್ರೀಯ ಜ್ಞಾನ ಆಯೋಗದ ಮಾಜಿ ಆಯುಕ್ತರೂ ಹೌದು.
ಅಸಲಿಗೆ ಇವರು ನವದೆಹಲಿಯಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಎಂಬ ಸಂಸ್ಥೆಯೊಂದನ್ನು ಕಟ್ಟಿ ಅದನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಪ್ರಮುಖವಾಗಿ ರಾಜಕೀಯ ಬುದ್ಧಿಜೀವಿ. ಉತ್ತರ ಪ್ರದೇಶದ ಅಧಿಕಾರವನ್ನು ಯೋಗಿ ಆದಿತ್ಯನಾಥ ಅವರಿಗೆ ಕೊಟ್ಟರೆ ಮಾತ್ರ ಅವರು ಬಿಜೆಪಿಗೆ ಅದೃಷ್ಟ ತರಲಿದ್ದಾರೆಂದು ಭವಿಷ್ಯ ನುಡಿದವರೇ ಮೆಹ್ತಾ.
ಅಸಲಿಗೆ, ಮೋದಿಯವರಿಗೆ ಮೆಹ್ತಾ ಅವರ ಮಾತುಗಳಲ್ಲಿ ಅಪಾರ ಭರವಸೆ ಇದೆ. ಇದು 2014ರಿಂದ ಮೋದಿಯವರ ಆಪ್ತ ಒಡನಾಟ ಹೊಂದಿದವರಿಗೆ ಮಾತ್ರ ಗೊತ್ತು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಎಂಬ ಬ್ರಾಹ್ಮಣ ರಾಜಕಾರಣಿಯನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದನ್ನೂ ಸೇರಿದಂತೆ ಯಾವ ಯಾವ ರಾಜ್ಯದಲ್ಲಿ ಯಾರನ್ನು ಕೆಲವೊಮ್ಮೆ ಜಾತಿ ಆಧಾರದಲ್ಲಿ, ಕೆಲವೊಮ್ಮೆ ಜನಬಲದ ಆಧಾರದಲ್ಲಿ ಮತ್ತೂ ಕೆಲವೊಮ್ಮೆ ವರ್ಚಸ್ಸಿನ ಆಧಾರದಲ್ಲಿ ಅಧಿಕಾರ ನೀಡಬೇಕು ಎಂಬುದನ್ನು ಮೋದಿ, ಅಮಿತ್ ಶಾ ಅವರಿಗಿಂತ ಒಂದು ಗುಂಜಿ ಜಾಸ್ತಿ ಎಂಬಂತೆ ಕರಾರುವಾಕ್ಕಾಗಿ ಹೇಳಬಲ್ಲವರೇ ಮೆಹ್ತಾ.
ಈಗಾಗಲೇ, ಬಿಜೆಪಿ ಆಂತರಿಕ ವಲಯದ ಆಡಳಿತದಲ್ಲಿ, ಹಲವಾರು ರಾಜ್ಯಗಳ ರಾಜಕೀಯ ನಾಯಕರ ಬದಲಾವಣೆ, ಹೊಸ ನೇಮಕಗಳ ವಿಚಾರದಲ್ಲಿ ಮೆಹ್ತಾ ಅವರ ಸಲಹೆಗಳನ್ನು ಅನುಷ್ಠಾನಗೊಳಿಸಿರುವ ಮೋದಿ ಅಲ್ಲೆಲ್ಲಾ ಜಯ ಸಾಧಿಸಿದ್ದಾರೆ. ಹಾಗಾಗಿಯೇ, ಮೋದಿಯವರಿಗೆ ಮೆಹ್ತಾ ಮಾತು ಅಂದ್ರೆ ವೇದವಾಕ್ಯವಿದ್ದಂತೆ.
ಈಗ, ಯೋಗಿ ವಿಚಾರದಲ್ಲೂ ಅದೇ ಆಗಿದೆ. ಮೆಹ್ತಾ ಮಾತನ್ನು ಮೋದಿ ಅನುಮೋದಿಸಿದ್ದಾರೆ. ಅಮಿತ್ ಶಾ ಅವರಿಗೇ ಮೊದಲು ಯೋಗಿ ಅವರನ್ನು ಸಿಎಂ ಮಾಡಬೇಕೆಂಬ ಐಡಿಯಾ ಇತ್ತಾದರೂ, ಅದಕ್ಕೆ ಇಂಬು ಕೊಟ್ಟಿದ್ದು ಮೆಹ್ತಾ ಎನ್ನುತ್ತಿದೆ ಬಿಜೆಪಿಗೆ ಹತ್ತಿರವಿರುವ ಮೂಲಗಳು.