ಬಂದರು, ಕೊಂದರು, ಸತ್ತರು: ಉಗ್ರರನ್ನು ಕೊಂದದ್ದು 12 ನಿಮಿಷದಲ್ಲಿ
ಕಾಶ್ಮೀರ, ಸೆಪ್ಟೆಂಬರ್ 20: ಎಲ್ಲವೂ ಮುಗಿದಿದ್ದು ಹನ್ನೆರಡೇ ನಿಮಿಷದಲ್ಲಿ. ಹದಿನೇಳು ಯೋಧರು ಭಾನುವಾರ 'ಉರಿ'ಯಲ್ಲಿ ಹುತಾತ್ಮರಾಗಿದ್ದು, ಮೂವರು ಭಯೋತ್ಪಾದಕರನ್ನು ಕೊಂದಿದ್ದು ಹನ್ನೆರಡೇ ನಿಮಿಷದಲ್ಲಿ. ಜೈಶ್ ಎ ಮೊಹಮದ್ ನ ಭಯೋತ್ಪಾದಕರು ಜಮ್ಮು-ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆಸಿದ ದಾಳಿ ಇತ್ತೀಚೆಗೆ ಮಾಡಿದ ಭಯಾನಕವಾದ ಆಕ್ರಮಣ.
ದಾಳಿ ನಡೆಸಿದ ನಾಲ್ವರು ಭಯೋತ್ಪಾದಕರಿಗೆ ಸೇನಾ ನೆಲೆಯ ಆಯಕಟ್ಟಿನ ಜಾಗಗಳು ಚೆನ್ನಾಗಿ ಗೊತ್ತಿದ್ದವು ಎಂದು ತನಿಖೆಯಿಂದ ಗೊತ್ತಾಗಿದೆ. ಕ್ಯಾಂಪ್ ಬಗ್ಗೆ ಭಯೋತ್ಪಾದಕರಿಗೆ ಸಾಕಷ್ಟು ಮಾಹಿತಿ ಇತ್ತು ಮತ್ತು ಎಲ್ಲ ಗೊತ್ತಿದ್ದವರಿಂದಲೇ ನೆರವಿನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮೂರು ಹಂತದ ರಕ್ಷಣೆಯನ್ನು ಭಯೋತ್ಪಾದಕರು ಹೇಗೆ ದಾಟಿದರು ಎಂಬ ಬಗ್ಗೆ ರಾಷ್ಟೀಯ ತನಿಖಾ ದಳದ ತಂಡ ತನಿಖೆ ನಡೆಸುತ್ತಿದೆ.[ಹುತಾತ್ಮ ಸೈನಿಕರಿಗೆ ಅಂತಿಮ ನಮನ ಸಲ್ಲಿಸಿದ ಭಾರತ]
ಗುಪ್ತಚರ ಇಲಾಖೆಯು ನಿರ್ಲಕ್ಷ್ಯ ವಹಿಸಿತೇ ಎಂಬ ಅಯಾಮದಲ್ಲೂ ತನಿಖೆ ನಡೆಯಲಿದೆ. ಜಮ್ಮು-ಕಾಶ್ಮೀರದ ಸೇನಾ ಕ್ಯಾಂಪ್ ಮೇಲೆ ಉಗ್ರರು ದೊಡ್ಡ ಮಟ್ಟದ ದಾಳಿ ನಡೆಸುವ ಸೂಚನೆಗಳಿದ್ದವು. ಆದರೂ ಈ ಬಗ್ಗೆ ಗುಪ್ತಚರ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ದಾಳಿ ಮಾಡಿದ ಉಗ್ರರು ಮಿಲಿಟರಿ ದಿರಿಸಿನಲ್ಲಿದ್ದರು. ಸಣ್ಣದಾಗಿ ಹೇರ್ ಕಟ್ ಮಾಡಿಸಿದ್ದರು. ಶನಿವಾರ ಸಂಜೆ ನಂತರ ಭಾರತದೊಳಗೆ ನುಸುಳಿದ್ದರು. ಸೇನಾ ಕ್ಯಾಂಪ್ ಒಳಗೆ ಬರುವ ಮುಂಚೆ ಬೇಲಿಯನ್ನು ಕತ್ತರಿಸಿದ್ದಾರೆ. ಮೊದಲಿಗೆ ಅಡುಗೆ ಮನೆ ಕಡೆಗೆ ಹೋಗಿ ಗ್ರೆನೇಡ್ ಹಾಕಿ, ಗುಂಡು ಹಾರಿಸಿದ್ದಾರೆ. ಆ ನಂತರ ಡೀಸೆಲ್ ಬ್ಯಾರೆಲ್ಸ್ ಗೆ ಬೆಂಕಿ ಹಚ್ಚಿದ್ದಾರೆ.[ಉಗ್ರರ ದಾಳಿಯಲ್ಲಿ ಹುತಾತ್ಮರಾದವರು ಗಡಿ ಕಾದು ಬಂದಿದ್ದರು]
ಯೋಧರು ಇದ್ದ ಟೆಂಟ್ ಗಳಿಗೆ ಬೆಂಕಿ ವ್ಯಾಪಿಸಿದೆ. ನಾಲ್ವರು ಭಯೋತ್ಪಾದಕರು ನಿರಂತರವಾಗಿ ಗುಂಡು ಹಾರಿಸಿದ್ದಾರೆ. ನಮ್ಮ ಯೋಧರು 12 ನಿಮಿಷದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಬೆಂಕಿಯಲ್ಲಿ ಸಿಲುಕಿಕೊಂಡ ಯೋಧರು ಹುತಾತ್ಮರಾಗಿದ್ದಾರೆ. ಕೆಲ ನಿಮಿಷದಲ್ಲಿ ನಾಲ್ಕನೇ ಉಗ್ರನನ್ನೂ ಗುಂಡಿಟ್ಟು ಕೊಲ್ಲಲಾಗಿದೆ.
ಉಗ್ರರು ಯೋಧರ ದಿರಿಸಿನಲ್ಲಿದ್ದರು. ಆತ್ಮಾಹುತಿ ದಳದ ಸದಸ್ಯರಂತೆ ಇರಲಿಲ್ಲ. ಉಗ್ರರನ್ನು ಕೊಂದ ನಂತರ ಪರಿಶೀಲಿಸಿದಾಗ ಅವರ ಎದೆಯನ್ನು ಕ್ಷೌರ ಮಾಡಿದ್ದು ಕಂಡುಬಂದಿದೆ. ಅತ್ಮಾಹುತಿ ದಾಳಿಗೆ ಮುನ್ನ ಫಿದಾಯಿನ್ ಗಳು ಈ ರೀತಿ ಮಾಡಿಕೊಳ್ಳುತ್ಟಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.