ಐಎಸ್ ಐ ಏಜೆಂಟ್ ಅಕ್ತರ್ ನ ಕಸುಬುದಾರಿಕೆ, ಕರಾಮತ್ತು
ನವದೆಹಲಿ, ಅಕ್ಟೋಬರ್ 28: ಭಾರತದಲ್ಲಿ ಪಾಕಿಸ್ತಾನ ಹೈ ಕಮಿಷನ್ ನ ನೌಕರನಾಗಿದ್ದ ಮೆಹ್ಮೂದ್ ಅಕ್ತರ್ ಬೇಹುಗಾರಿಕೆ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾನೆ, ಆತ ಮೂರು ವರ್ಷದ ಹಿಂದೆ ಬಲೂಚ್ ರೆಜಿಮಂಟ್ 40ರಲ್ಲಿ ಹವಾಲ್ದಾರನಾಗಿದ್ದವನು. ಭಾರತದಲ್ಲಿ ಬೇಹುಗಾರರನ್ನು ನೇಮಿಸಲು ಐಎಸ್ ಐ ಜನರಿಗಾಗಿ ಹುಡುಕಾಡುತ್ತಿದ್ದ ವೇಳೆ ಕಣ್ಣಿಗೆ ಬಿದ್ದವನು ಈ ಅಕ್ತರ್.
ಐಎಸ್ ಐ ಮಾಡಿಕೊಂಡಿದ್ದ ಸಂಭಾವ್ಯರ ಪಟ್ಟಿಯಲ್ಲೇ ಅತ್ಯುತ್ತಮ ಆಯ್ಕೆ ಅನಿಸಿಕೊಂಡವನು ಅಕ್ತರ್. ಆತನಿಗೆ ಜನವರಿ 2013ರಲ್ಲಿ ಕಠಿಣ ಪರೀಕ್ಷೆಗಳನ್ನು ಮಾಡಿ, ಐಎಸ್ ಐ ಏಜೆಂಟ್ ಆಗಿ ಆಯ್ಕೆ ಮಾಡಲಾಯಿತು ಎಂದು ಪೊಲೀಸ್ ಜಂಟಿ ಕಮಿಷನರ್ (ಅಪರಾಧ) ಹೇಳಿದ್ದಾರೆ.[50 ಸಾವಿರದ ಆಸೆಗೆ ಆತ ಎಂಥ ಮಾಹಿತಿ ಒದಗಿಸಿದ್ದ ಗೊತ್ತಾ?]
ವೀಸಾ ವಿಭಾಗ: 2014ರ ಮಧ್ಯಭಾಗದಲ್ಲಿ ಅಕ್ತರ್ ನನ್ನು ಭಾರತಕ್ಕೆ ಕಳುಹಿಸಲಾಯಿತು. ಪಾಕಿಸ್ತಾನ ಹೈ ಕಮಿಷನ್ ನ ವೀಸಾ ವಿಭಾಗದಲ್ಲಿ ಆತ ಸೇರಿಕೊಂಡ. ಈ ಬೇಹುಗಾರಿಕೆ ಕಾರ್ಯಾಚರಣೆಯಲ್ಲಿ ಐಎಸ್ ಐಗೆ ಭಾರತದಲ್ಲಿ ಅತಿ ಮುಖ್ಯವಾಗಿ ಕೆಲಸ ಮಾಡುತ್ತಿದ್ದವನು ಇದೇ ಅಕ್ತರ್. ಪಾಕಿಸ್ತಾನದ ವೀಸಾಗೆ ಅರ್ಜಿ ಹಾಕುತ್ತಿದ್ದ ಭಾರತೀಯರ ಪೈಕಿ ಬೇಹುಗಾರಿಕೆ ಕೆಲಸಕ್ಕೆ ಉಪಯೋಗ ಆಗಬಹುದಾದವರನ್ನು ಆತ ಗುರುತು ಮಾಡಿಕೊಳ್ಳುತ್ತಿದ್ದ.
ರಾಜಸ್ತಾನ ಮತ್ತು ಗುಜರಾತ್ ರಾಜ್ಯಗಳಿಗೆ ಪದೇಪದೇ ಹೋಗುತ್ತಿದ್ದ ಅಕ್ತರ್, ಪಾಕ್ ಪರವಾಗಿ ಕೆಲಸ ಮಾಡಬಲ್ಲವರಿಗಾಗಿ ಹುಡುಕಾಡುತ್ತಿದ್ದ. 'ಅಕ್ತರ್ ಗಾಗಿ ಇನ್ನೂ ಹಲವರು ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ. ನಾವು ವಿಚಾರಣೆ ನಡೆಸುತ್ತಿದ್ದೇವೆ' ಎಂದು ಪೊಲೀಸರು ಹೇಳಿದ್ದಾರೆ.[ಪಾಕ್ ಅಧಿಕಾರಿಗಳಿಗೆ ಭಾರತ ಬಿಟ್ಟು ಹೋಗುವಂತೆ ಸೂಚನೆ!]
ಪ್ರವಾಸಿ ತಾಣಗಳಲ್ಲಿ ಭೇಟಿ: ಭಾರತದಲ್ಲಿ ಅಕ್ತರ್ ನ ಅತಿ ಮುಖ್ಯ ಮನುಷ್ಯ ಜೋಧ್ ಪುರದ ಶೋಯಬ್. ಆತನ ತಾಯಿ, ಸಂಬಂಧಿಕರು ಪಾಕಿಸ್ತಾನದಲ್ಲೇ ಇದ್ದಾರೆ. ಆತ ಆರು ಬಾರಿ ಪಾಕ್ ಗೆ ಹೋಗಿಬಂದಿದ್ದ. ಬಂಧಿಸುವ ವೇಳೆ ದಾಖಲೆಗಳನ್ನು ನಾಶಪಡಿಸುವುದಕ್ಕೆ ಯತ್ನಿಸಿದ್ದಾನೆ. ಆ ಯತ್ನವನ್ನು ವಿಫಲಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂದಹಾಗೆ ಅಕ್ತರ್ ತನ್ನ ಬಾತ್ಮೀದಾರರನ್ನು ಭೇಟಿಯಾಗುತ್ತಿದ್ದದ್ದು ದೆಹಲಿಯ ಪ್ರವಾಸಿ ತಾಣಗಳಲ್ಲಿ. ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದದ್ದು ಮತ್ತು ಹಣ ಪಾವತಿಸುತ್ತಿದ್ದದ್ದು ಅಂಥ ಜಾಗಗಳಲ್ಲೇ. ಸೇನೆ ಹಾಗೂ ಬಿಎಸ್ ಎಫ್ ನ ಸೇವೆಯಲ್ಲಿರುವ ಹಾಗೂ ನಿವೃತ್ತರಾದವರ ಸಂಪರ್ಕದಲ್ಲಿರುವಂತೆ ತನ್ನ ಬಾತ್ಮೀದಾರರಿಗೆ ಸೂಚಿಸುತ್ತಿದ್ದ ಅಕ್ತರ್, ತಿಂಗಳಿಗೆ ಒಮ್ಮೆಯಾದರೂ ತನಗಾಗಿ ಕೆಲಸ ಮಾಡುವವರನ್ನು ಭೇಟಿಯಾಗುತ್ತಿದ್ದ.
ಸೇನೆಯ ಮಾಹಿತಿ: ಆ ಮೂಲಕ ಗಡಿಯಲ್ಲಿನ ಸೇನೆ ನಿಯೋಜನೆ, ಎಲ್ಲಿ ಸ್ಥಿತಿ ದುರ್ಬಲವಾಗಿದೆ, ರಕ್ಷಣಾ ಲೋಪಗಳು ಮತ್ತು ಅಲ್ಲಿರುವ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ. ದೇಶದೊಳಗೆ ಉಗ್ರರು ನುಸುಳಲು ಈ ಅಂಶಗಳು ಸಹಾಯಕವಾಗಿದ್ದವು. ಮತ್ತು ಪಠಾಣ್ ಕೋಟ್ ನಲ್ಲಿ ನಡೆದಂಥ ದಾಳಿ ಸಂಘಟಿಸುವುದಕ್ಕೆ ನೆರವಾಗುತ್ತಿದ್ದವು ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.[ದೆಹಲಿ ಪೊಲೀಸರಿಂದ ಪಾಕ್ ಹೈ ಕಮಿಷನ್ ಅಧಿಕಾರಿ ಬಂಧನ]
ಅಕ್ತರ್ ಫೋನ್ ನಲ್ಲಿ ತನ್ನ ವ್ಯವಹಾರಗಳನ್ನು ಮಾತನಾಡುತ್ತಿರಲಿಲ್ಲ. ಕೆಲವು ರಹಸ್ಯ ಪದಗಳನ್ನು ಬಳಸಿ, ಎಲ್ಲಿ ಭೇಟಿಯಾಗಬೇಕು ಎಂದಷ್ಟೇ ತಿಳಿಸುತ್ತಿದ್ದ. ಈ ಕಾರಣಗಳಿಗಾಗಿ ಭಾರತೀಯ ಗುರುತಿನ ಚೀಟಿ ಹೊಂದಿದ್ದ. ಅಕ್ತರ್ ದಾಖಲೆಗಳ ಜತೆಗೆ ಸಿಕ್ಕಿಬಿದ್ದಾಗಲೂ ಅಧಾರ್ ತೋರಿಸಿ, ತನ್ನ ಹೆಸರು ಮೆಹ್ಬೂಬ್ ರಜಪೂತ್, ಚಾಂದಿನಿ ಚೌಕದವನು ಅಂತಲೇ ಹೇಳಿದ್ದ. ಯಾವಾಗ ಪೊಲೀಸರು ಆತನ ಬಂಧನಕ್ಕೆ ಮುಂದಾದರೋ ಆಗ ರಾಜತಾಂತ್ರಿಕ ನೆರವನ್ನು ಪಡೆಯಲು ಮುಂದಾದ.