ಸುದ್ದಿಸ್ವಾರಸ್ಯ : ರಜನಿ ಭಾರತದ ಮುಂದಿನ ರಾಷ್ಟ್ರಪತಿ?
ನವದೆಹಲಿ, ಏಪ್ರಿಲ್ 22 : 'ರಜನಿಕಾಂತ್' ಹೆಸರು ಕೇಳಿದ ಕೂಡಲೆ ಸುದ್ದಿಗಳಿಗೆ ನಾನಾ ರೆಕ್ಕೆಪುಕ್ಕಗಳು ಬಂದು ಹಾರಾಡಲು ಶುರುಮಾಡಿಬಿಡುತ್ತವೆ. ಅವರ ಕುರಿತ ಅತಿರೇಕದ ಜೋಕುಗಳು ಸೇರಿದಂತೆ ಸುದ್ದಿಗಳಿಗೆ ಹಲವಾರು ಬಾರಿ ತಲೆಬುಡಗಳಿರುವುದಿಲ್ಲ.
ರಜನಿಕಾಂತ್ ಅವರಿಗೆ ತೀವ್ರ ಹುಷಾರಿಲ್ಲವೆಂಬ ಸುದ್ದಿಯಿಂದ ಹಿಡಿದುಕೊಂಡು ಅವರು ರಾಜಕೀಯ ಪಕ್ಷ ಕಟ್ಟೇಬಿಟ್ಟರು ಎಂಬವರೆಗೆ. ಆ ಸುದ್ದಿಯ ಜಾಡು ಅವರು ತಮಿಳುನಾಡು ಮುಖ್ಯಮಂತ್ರಿ ಆಗೇಬಿಟ್ಟರು ಎಂಬುವವರೆಗೆ ಬಂದು ನಿಂತಿರುತ್ತದೆ.
ಇದೀಗ ಕೇಳಿ ಲೇಟೆಸ್ಟ್ ನ್ಯೂಸ್. ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಸಕ್ರೀಯ ರಾಜಕಾರಣದಿಂದ ಬಹುದೂರ ಉಳಿದಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್, ಸ್ಟೈಲ್ ಕಿಂಗ್, ಬಡವರ ಬಂಧು, ತಮಿಳುರ ಪಾಲಿನ ಅಣ್ಣ 66 ವರ್ಷದ ರಜನಿಕಾಂತ್ ಭಾರತದ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ... ಅಂತೆ!
ರಜನಿಕಾಂತ್ ಅವರು ರಾಷ್ಟ್ರಪತಿಗಳಾಗಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದವರು ಮತ್ತಾರೂ ಅಲ್ಲ, ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ದೆಹಲಿಯಲ್ಲಿ ಹಾರಿಸಿರುವ ಗಾಳಿಪಟ ದಕ್ಷಿಣ ಭಾರತಕ್ಕೆ ಬಂದು ತಲುಪಿದೆ. ತಮಿಳುನಾಡಿನ ಜನತೆ ಪುಳಕಗೊಳ್ಳಲು, ಡಂಕಟಕ್ಕ ಡಾನ್ಸ್ ಹೊಡೆಯಲು ಅಷ್ಟು ಸಾಕಲ್ಲವೆ? [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]
ಮೊದಲಿಗೆ ಬಿಜೆಪಿಯ ಹಿರಿಯ ನಾಯಕರಾದ 89 ವರ್ಷದ ಲಾಲ್ ಕೃಷ್ಣ ಅಡ್ವಾಣಿ ಮತ್ತು 83 ವರ್ಷದ ಮುರಳಿ ಮನೋಹರ ಜೋಶಿ ಅವರ ಹೆಸರುಗಳು ರಾಷ್ಟ್ರಪತಿ ಹುದ್ದೆಗೆ ಪ್ರಸ್ತಾವನೆಯಾಗಿದ್ದವು. ಆದರೆ, ಅವರಿಬ್ಬರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮತ್ತೆ ಸಿಲುಕಿರುವುದರಿಂದ ಸದ್ಯಕ್ಕೆ ಅವರಿಬ್ಬರು ಪ್ರೆಸಿಡೆಂಟ್ ಆಗುವುದು ರೂಲ್ಡ್ ಔಟ್. [ಸೂಪರ್ ಸ್ಟಾರ್ 'ರಜನಿ' ನಿರ್ಮಾಪಕರ 'ಡಾರ್ಲಿಂಗ್' ಏಕೆ?]
ಬಚ್ಚನ್ ಹೆಸರು ಕೂಡ ಕೇಳಿಬಂದಿತ್ತು
ಮತ್ತೊಬ್ಬ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಹೆಸರು ಕೂಡ ಕಿವಿಗೆ ಬೀಳುತ್ತಿತ್ತು. ಆದರೆ, ಅವರ ಹೆಸರು ಕೂಡ ಪನಾಮಾ ಪೇಪರ್ಸ್ ಹಗರಣದಲ್ಲಿ ಕೇಳಿಬಂದಿದ್ದರಿಂದ ಅವರ ಹೆಸರನ್ನು ಕೂಡ ಕೈಬಿಡಲಾಯಿತು. ಪ್ರಣಬ್ ಮುಖರ್ಜಿ ಅವರಿಗೆ ಜುಲೈ ನಂತರ ಮತ್ತೊಂದು ಅವಧಿ ನೀಡುವುದು ಅಸಾಧ್ಯವೆಂದು ಕಾಣುತ್ತಿರುವುದರಿಂದ ರಜನಿಕಾಂತ್ ಅವರೇ ಸೂಕ್ತ ವ್ಯಕ್ತಿ ಎಂಬಂತೆ ಬಿಂಬಿಸಲಾಗುತ್ತಿದೆ.[ಆರ್ ಕೆ ನಗರ ಕ್ಷೇತ್ರ ಚುನಾವಣೆ, ರಜನಿ ಬೆಂಬಲ ಯಾರಿಗೆ?]
ರಜನಿಗೆ ಹಮ್ಮುಬಿಮ್ಮಿಲ್ಲ, ವಿವಾದ ಸುತ್ತಿಕೊಂಡಿಲ್ಲ
ರಜನಿ ಅವರಿಗೆ ಯಾವುದೇ ಹಮ್ಮುಬಿಮ್ಮುಗಳಿಲ್ಲ, ಅವರ ಸುತ್ತ ಯಾವುದೇ ವಿವಾದ ಸುತ್ತಿಕೊಂಡಿಲ್ಲ, ರಾಜಕೀಯದಿಂದ ದೂರವೇ ಉಳಿದಿದ್ದಾರೆ ಮತ್ತು ಸರ್ವರ ಗೌರವಕ್ಕೆ ಪಾತ್ರರಾಗಿರುವ ಜನಪ್ರಿಯ ವ್ಯಕ್ತಿ. ತೊಂಬತ್ತರ ದಶಕದಲ್ಲಿ ಜಯಲಲಿತಾಗೆ ಮತ ಹಾಕಿದರೆ ತಮಿಳುನಾಡಿಗೆ ಒಳಿತಾಗದು ಎಂಬಂತಹ ಹೇಳಿಕೆ ನೀಡಿದ್ದು ಬಿಟ್ಟರೆ ಅಂತಹ ಯಾವುದೇ ವಿವಾದಕ್ಕೆ ಅವರು ಒಳಗಾಗಿಯೇ ಇಲ್ಲ. [ರಜನಿಕಾಂತ್, ರವಿಶಂಕರ್ ಗುರೂಜಿಗೆ ಪದ್ಮ ವಿಭೂಷಣ ಪ್ರಶಸ್ತಿ]
ವಿರೋಧಿಸಿದರೆ ಸಿಗುವ ಮತವೂ ಸಿಗಲ್ಲ!
ಒಂದು ವೇಳೆ ರಜನಿಕಾಂತ್ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬೇರೆ ಪಕ್ಷಗಳಿಂದ ವಿರೋಧ ವ್ಯಕ್ತವಾಗುವುದು ಬಲುಕಷ್ಟ. ಅವರನ್ನು ವಿರೋಧಿಸಿದರೆ ಸಿಗುವ ಮತಗಳೂ ಸಿಗಲಿಕ್ಕಿಲ್ಲ ಎಂಬ ಆತಂಕ ಪಕ್ಷಗಳಿಗೆ ಇದ್ದೇ ಇರುತ್ತದೆ. ಇನ್ನು ಎಐಎಡಿಎಂಕೆ ಪಕ್ಷಕ್ಕೆ ರಜನಿಕಾಂತ್ ಅವರನ್ನು ಬೆಂಬಲಿಸದೆ ಬೇರೆ ದಾರಿಯೇ ಉಳಿದಿಲ್ಲ. ಇಲ್ಲದಿದ್ದರೆ ಮುಂದೆ ಏನಾಗುತ್ತದೆಂದು ಅವರ ಅಭಿಮಾನಿಗಳೇ ತಿಳಿಸುತ್ತಾರೆ.
ಕಲಾಂ ರಾಷ್ಟ್ರಪತಿಯಾಗಿ ಆಯ್ಕೆಯಾದಾಗ
ಅಟಲ್ ಬಿಹಾರಿ ವಾಜಪೇಯಿ ಅವರು ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದಾಗಲೂ ಇಂಥದೇ ಮುತ್ಸದ್ದಿತನ ಮೆರೆದಿತ್ತು. ಭಾರತದ ಮಿಸೈಲ್ ಮ್ಯಾನ್ ರನ್ನು ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶನ ಮಾಡುವ ಮೂಲಕ ಭಾರತ ವಿಜ್ಞಾನ, ರಕ್ಷಣೆ ಮತ್ತು ಪರಮಾಣು ಕ್ಷೇತ್ರದಲ್ಲಿ ಬಲಶಾಲಿಯಾಗಿದ್ದೇವೆ ಎಂಬ ಸಂದೇಶ ರವಾನಿಸಿತ್ತು.
ಪ್ರಬಲವಾಗಿರುವ ಸಮರ್ಥ ವ್ಯಕ್ತಿ
ಪದ್ಮ ವಿಭೂಷಣ, ಪದ್ಮಶ್ರೀ ಮುಂತಾದ ಅತ್ಯುನ್ನತ ನಾಗರಿಕ ಪದವಿಗೆ ಭಾಜನರಾಗಿರುವ ರಜನಿಕಾಂತ್ ಅತ್ಯಂತ ಸರಳ, ಸ್ನೇಹಜೀವಿ. ಅಲ್ಲದೆ, ಭಾರತದ ಕಲಾಕ್ಷೇತ್ರದ ಉತ್ತಮ ರಾಯಭಾರಿ ಕೂಡ. ಆಂತರ್ಯದಲ್ಲಿ ಅವರು ಎಷ್ಟೇ ಮಿತಭಾಷಿ, ಮೃದು ವ್ಯಕ್ತಿತ್ವದವರಾಗಿದ್ದರೂ, ಬಾಹ್ಯಜಗತ್ತಿಗೆ ಅವರು, ಘನತೆ ಗಾಂಭೀರ್ಯವಿರುವ, ಮಾನಸಿಕವಾಗಿ ಅತ್ಯಂತ ಪ್ರಬಲವಾಗಿರುವ ಸಮರ್ಥ ವ್ಯಕ್ತಿ. ಇದು ನಿಜ ಕೂಡ.
ಆಧಿಪತ್ಯ ಸ್ಥಾಪಿಸಲು ಒಳ್ಳೆಯ ಅವಕಾಶ
ಜಯಲಲಿತಾ ಸಾವಿನ ನಂತರ ಮತ್ತು ದೇಶದಲ್ಲಿ ಮೋದಿ ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ತಮಿಳುನಾಡಿನಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಆಶಾಕಿರಣವನ್ನು ಕಂಡಿದೆ. ತಮಿಳುನಾಡಿನಲ್ಲಿ ಅಸ್ವಿತ್ವ ಕಂಡುಕೊಳ್ಳಲು ವಿಫಲವಾಗಿರುವುದರಿಂದ ತನ್ನ ಆಧಿಪತ್ಯ ಸ್ಥಾಪಿಸಲು ಭಾರತೀಯ ಜನತಾ ಪಕ್ಷಕ್ಕೆ ಒಳ್ಳೆಯ ಅವಕಾಶವೂ ಕೂಡಿಬಂದಿದೆ. ಎಐಎಡಿಎಂಕೆ ಒಳಜಗಳಗಳಿಂದ ಒಡೆದುಹೋಗುತ್ತಿದೆ, ಡಿಎಂಕೆ ಮೊನಚು ಕಳೆದುಕೊಳ್ಳುತ್ತಿದೆ.
ತಮಿಳುನಾಡಿನಲ್ಲಿ ಗೌರವ ಸಂಪಾದನೆ
ಇಂಥ ಸಮಯದಲ್ಲಿ ರಜನಿಕಾಂತ್ ಅವರು ಬಿಜೆಪಿಗೆ ಒಳ್ಳೆ ಅಸ್ತ್ರವಾಗಿ ಕಂಡಿದ್ದಾರೆ. ಅಲ್ಲದೆ, ಶಶಿಕಲಾ ನಟರಾಜನ್ ಮತ್ತು ದಿನಕರನ್ ನಂಥವರನ್ನು ರಾಜಕೀಯದಿಂದ ದೂರ ಉಳಿಯುವಂತೆ ಮಾಡಿದ್ದಕ್ಕೆ ತಮಿಳರ ಗೌರವವನ್ನೂ ಬಿಜೆಪಿ ಸಂಪಾದಿಸಿದೆ. ಜಯಲಲಿತಾ ಸತ್ತಾಗ ಕೇಂದ್ರ ಸರಕಾರ ತಮಿಳುನಾಡಿಗೆ ಉತ್ತಮವಾಗಿಯೇ ಸ್ಪಂದಿಸಿದೆ. ಕಬ್ಬಿಣ ಬೇಕಾದ ಹಾಗೆ ಕಾಯುತ್ತಿದೆ, ಅದನ್ನು ತಕ್ಕ ಹಾಗೆ ಬಡಿಯಬೇಕಾದ ಅಗತ್ಯವಿದೆ.
ರಜನಿ ರಾಷ್ಟ್ರಪತಿಯಾಗಲು ಒಪ್ಪುತ್ತಾರಾ?
ಈ ಸುದ್ದಿಸ್ವಾರಸ್ಯಗಳೇನೇ ಇರಲಿ, ರಜನಿ ರಾಷ್ಟ್ರಪತಿಯಾಗಲು ಒಪ್ಪುತ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆ! ರಜನಿಯವರನ್ನು ಬಿಜೆಪಿಗೆ ತರಲು ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಅವರು ಅದಕ್ಕೆ ಸೊಪ್ಪು ಹಾಕಿಲ್ಲ. ನಯವಾಗಿಯೇ ತಿರಸ್ಕರಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಈ ಗಾಳಿಸುದ್ದಿಗೆ ರಜನಿಕಾಂತ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ? ಅಥವಾ ಮೋದಿಯವರೇ ರಜನಿಯವರ ಮನವೊಲಿಸಲಿದ್ದಾರಾ? ಕುತೂಹಲದಿಂದ ನೋಡುತ್ತಿದೆ.