ಸರ್ಜಿಕಲ್ ಸ್ಟ್ರೈಕ್ 2: ಮೋದಿ ಮುಂದಿನ ತಂತ್ರದ ಬಗ್ಗೆ ಸಚಿವರ ಸುಳಿವು
ಪಾಕ್ ಪ್ರಚೋದಿತ ಉಗ್ರರ ವಿರುದ್ದ ಎರಡನೇ ಸೀಮಿತ ದಾಳಿಯ (ಸರ್ಜಿಕಲ್ ಸ್ಟ್ರೈಕ್) ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸುಳಿವು ನೀಡಿದ್ದಾರೆ.
ಜಮ್ಮು, ಕಾಶ್ಮೀರದ ಸಮಸ್ಯೆಗಳಿಗೆ ಸದ್ಯದಲ್ಲೇ ಶಾಸ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಒಂದೆಡೆ ಹೇಳಿಕೆ ನೀಡಿದರೆ, ಉಗ್ರರ ವಿರುದ್ದ ಎರಡನೇ ಸೀಮಿತ ದಾಳಿ (ಸರ್ಜಿಕಲ್ ಸ್ಟ್ರೈಕ್) ಬಗ್ಗೆ ಕೇಂದ್ರ ಸಚಿವರು ಸುಳಿವು ನೀಡಿದ್ದಾರೆ.
ಭಾರತೀಯ ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ತಮ್ಮ ಸಿಬ್ಬಂದಿಗಳಿಗೆ 'ಸನ್ನದ್ದರಾಗಿರಿ' ಎಂದು ವೈಯಕ್ತಿಕ ಪತ್ರ ಬರೆದ ವಿಷಯ ಬಹಿರಂಗಗೊಂಡ ಬೆನ್ನಲ್ಲೇ, ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.[ಮುಂದಿನ ವಾರ ರಜನಿಕಾಂತ್, ಮೋದಿ ಮಹತ್ವದ ಭೇಟಿ]
ಗಡಿರೇಖೆ ಉಲ್ಲಂಘನೆ ಮತ್ತು ಉಗ್ರ ಚಟುವಟಿಕೆ ಹತ್ತಿಕ್ಕಲು ಮೋದಿ ಸರಕಾರ ಕಾಂಕ್ರೀಟ್ ಪರಿಹಾರ ಕಂಡುಕೊಳ್ಳುವಲ್ಲಿ ಸಾಗುತ್ತಿದೆ, ದೇಶದ ರಕ್ಷಣಾ ವಿಚಾರದಲ್ಲಿ ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇಂಡಿಯಾ ಟುಡೇ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಿದ್ದ ಈಶಾನ್ಯ ರಾಜ್ಯಗಳ ಅಭಿವೃದ್ದಿ, ಪ್ರಧಾನಮಂತ್ರಿ ಕಾರ್ಯಾಲಯ, ಸಾರ್ವಜನಿಕ ಕುಂದುಕೊರತೆಯ ಸಚಿವರಾಗಿರುವ ಜಿತೇಂದ್ರ ಸಿಂಗ್, ನಮ್ಮ ರಕ್ಷಣಾ ಪಡೆಗಳು ಸರಿಯಾದ ಉತ್ತರವನ್ನು ಸದ್ಯದಲ್ಲೇ ನೀಡಲಿವೆ ಎಂದಿದ್ದಾರೆ.
ಮಾತುಕತೆ, ಎಚ್ಚರಿಕೆಯ ನಂತರವೂ ಪಾಕ್ ತನ್ನ ದುರ್ಬುದ್ದಿಯನ್ನು ಮುಂದುವರಿಸುತ್ತಿರುವ ಬಗ್ಗೆ ಮಾತನಾಡಿದ ಸಿಂಗ್, ಮೊದಲನೇ ಸರ್ಜಿಕಲ್ ಸ್ಟ್ರೈಕ್ ನಡೆಯುವ ಮುನ್ನ ನಾವು ಮಾಧ್ಯಮದವರಿಗೆ ಈ ಬಗ್ಗೆ ಸುಳಿವು ನೀಡಲಿಲ್ಲ ತಾನೇ ?ಎನ್ನುವ ಮೂಲಕ, ಮತ್ತೊಂದು ಸುತ್ತಿನ ಸೀಮಿತ ದಾಳಿಗೆ ಮೋದಿ ಸರಕಾರ ಸಿದ್ದತೆ ನಡೆಸುತ್ತಿದೆ ಎನ್ನುವ ಸುಳಿವನ್ನು ನೀಡಿದ್ದಾರೆ. ಮುಂದೆ ಓದಿ
ರಕ್ಷಣಾ ವಿಚಾರ ಬಹಿರಂಗ ಪಡಿಸಲು ಸಾಧ್ಯವಿಲ್ಲ
ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ನಮ್ಮ ಸೇನೆ ಸನ್ನದ್ದವಾಗಿದೆ, ಇದರ ಫಲಿತಾಂಶವನ್ನು ನೀವು ಸದ್ಯದಲ್ಲೇ ನೋಡಲಿದ್ದೀರಿ ಎಂದು ಜಿತೇಂದ್ರ ಸಿಂಗ್ ಹೇಳುವ ಮೂಲಕ, ಇನ್ನೊಂದು ಸುತ್ತಿನ ಭರ್ಜರಿ ಕಾರ್ಯಾಚರಣೆಗೆ ಕೇಂದ್ರ ಸರಕಾರ ಸನ್ನದ್ದವಾಗಿದೆ ಎನ್ನುವ ಸುಳಿವನ್ನು ಜಿತೇಂದ್ರ ಸಿಂಗ್ ನೀಡಿದ್ದಾರೆ.
ಪ್ರತ್ಯೇಕತಾವಾದಿಗಳು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ
ಕಾಶ್ಮೀರದ ಬಹುತೇಕ ಯುವ ಸಮುದಾಯ ತಮ್ಮ ರಾಜ್ಯ ಅಭಿವೃದ್ದಿಯಾಗಬೇಕೆಂದು ಬಯಸುತ್ತಿದೆ. ಆದರೆ ಕೆಲವೊಂದು ಪ್ರತ್ಯೇಕತಾವಾದಿಗಳು ಯುವಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಕಲ್ಲುತೂರಾಟ, ವಿಧ್ವಂಸಕ ಕೃತ್ಯ ನಡೆಸುವ ಯುವಕರು ಹೆಚ್ಚೆಂದರೆ 350 ದಾಟುವುದಿಲ್ಲ. ಸದ್ಯದಲ್ಲೇ ಇದಕ್ಕೆ ಶಾಸ್ವತ ಪರಿಹಾರ ಸಿಗಲಿದೆ - ಜಿತೇಂದ್ರ ಸಿಂಗ್.
ವಾಯುಸೇನಾ ಮುಖ್ಯಸ್ಥರ ವೈಯಕ್ತಿಕ ಪತ್ರ
ತೀರಾ ಅಪರೂಪಕ್ಕೆ ಎನ್ನುವಂತೆ ವಾಯುಪಡೆಯ ಮುಖ್ಯಸ್ಥರು, ಪಾಕಿಸ್ತಾನದ ತಂಟೆ ಹೆಚ್ಚಾಗುತ್ತಿದೆ, ಯಾವುದೇ ಕ್ಷಣದಲ್ಲಿ ಯುದ್ಧ ಎದುರಾಗುವ ಸಾಧ್ಯತೆಯಿದ್ದು, ನಾವು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಹಾಗಾಗಿ, ಕಾರ್ಯಾಚರಣೆಗೆ ಸಿದ್ಧರಾಗಿ ಎಂದು ಧನೋವಾ ಐಎಎಫ್ ಸಿಬ್ಬಂದಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದರು.
ಹುರಿಯತ್ ಮುಖಂಡರು
ಕಾಶ್ಮೀರ ಸಮಸ್ಯೆ ಪರಿಹರಿಸಲು ಹುರಿಯತ್ ಮುಖಂಡರನ್ನು ಮಾತ್ರ ಯಾಕೆ ಪರಿಗಣಿಸಬೇಕು, ಕಾಶ್ಮೀರದಲ್ಲಿ ದಶಕಗಳಿಂದ ನೆಲೆಸಿರುವ ಪಂಡಿತರು ಇಲ್ಲವೇ, ಅಲ್ಲಿನ ಸಿಖ್, ಲಡಾಕೀಸ್, ಯುವಕರಿಲ್ಲವೇ ಎನ್ನುವ ಮೂಲಕ, ಹುರಿಯತ್ ಮುಖಂಡರ ಜೊತೆಗಿನ ಚೌಕಾಸಿಗೆ ಮೋದಿ ಸರಕಾರ ಉತ್ಸುಕತೆ ತೋರುತ್ತಿಲ್ಲ ಎನ್ನುವ ಸಂದೇಶವನ್ನು, ಜಿತೇಂದ್ರ ಸಿಂಗ್ ರವಾನಿಸಿದ್ದಾರೆ.
68 ಸಾವಿರ ಯುವಕರಿಂದ ಅರ್ಜಿ ಸಲ್ಲಿಕೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಲಭ್ಯವಿರುವ 700 ಪೊಲೀಸ್ ಹುದ್ದೆಗೆ 68 ಸಾವಿರ ಯುವಕರು ಅರ್ಜಿ ಸಲ್ಲಿಸಿದ್ದಾರೆ. ಇದು ಅಲ್ಲಿನ ಯುವ ಸಮುದಾಯಕ್ಕಿರುವ ಅಲ್ಟಿಮೇಟ್ ಅವಕಾಶ, ದುಡ್ಡು ತೆಗೆದುಕೊಂಡು ಕಲ್ಲು ತೂರುವ ಕೆಲಸ ಅವರಿಗೆ ಬೇಕಿಲ್ಲ. ಆ ಭಾಗದ ಜನ ನಮ್ಮ ಸರಕಾರಕ್ಕೆ ಸೂಕ್ತವಾಗಿ ಸ್ಪಂಧಿಸುತ್ತಿದ್ದಾರೆ - ಜಿತೇಂದ್ರ ಸಿಂಗ್.