ಪ್ರೇಕ್ಷಕ ಪ್ರಭುಗಳೆದಿರು ಕಳಚಿಬಿತ್ತು ಕಿಂಗ್ ಖಾನ್ ಕಿರೀಟ
ಮುಂಬೈ, ಡಿಸೆಂಬರ್, 17: ಕಾರಣವಿಲ್ಲದೇ ಫಟಾರನೇ ಕಪಾಳಕ್ಕೆ ಬಿಗಿದು ನಂತರ ಕ್ಷಮೆ ಕೇಳಿದರೆ ಹೇಗಿರುತ್ತದೆ!? ಬಾಲಿವುಡ್ ಬಾದ್ ಷಾ, ಕಿಂಗ್ ಖಾನ್ ಎಂದೆಲ್ಲ ಕರೆಸಿಕೊಳ್ಳುವ ಶಾರುಖ್ ಮಹಾಶಯ ಮಾಡಿದ್ದು ಇದನ್ನೆ.
ಎಲ್ಲ ಮುಗಿದ ಮೇಲೆ ಕ್ಷಮೆ ಕೇಳುವ ಚಾಳಿ ಸಿನಿಮಾ ಮಂದಿಗೂ ಹಿಡಿದುಕೊಂಡಿದೆ. ಅಸಹಿಷ್ಣುತೆ ಬಗ್ಗೆ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಇದೀಗ ಕ್ಷಮೆ ಕೇಳಿದ್ದಾರೆ. ಅಡಿಕೆ ಕದ್ದಾಗ ಹೋದ ಮಾನ ಆನೆ ಕೊಟ್ಟರೆ ಬರುವುದೆ?
ತಮ್ಮ ಅಭಿನಯದ ದಿಲ್ ವಾಲೇ ಚಿತ್ರ ಬಿಡುಗಡೆ ಹಿಂದಿನ ದಿನ ಶಾರುಖ್ ಕ್ಷಮೆ ಕೇಳಿರುವುದು ಸಹಜವಾಗಿಯೇ ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದರೆ ಆಶ್ಚರ್ಯವಿಲ್ಲ.[ಗೆಳೆಯ ಅಮೀರ್ ಖಾನ್ ಬಗ್ಗೆ ಶಾರುಖ್ ಹೇಳಿದ್ದೇನು?]
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಶಾರುಖ್ 'ನಾನು ಯಾವ ದುರುದ್ದೇಶ ಇಟ್ಟುಕೊಂಡು ಮಾತನಾಡಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಅವರ ಕ್ಷಮೆ ಕೋರುತ್ತೇನೆ. ದೇಶ ಭಕ್ತಿಯನ್ನು ಮೀರಿ ನಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ತಮ್ಮ ಹುಟ್ಟಿದ ದಿನದಂದು, 'ಭಾರತ ಸ್ವಲ್ಪ ಮಟ್ಟಿಗೆ ಅಸಹಿಷ್ಣುವಾಗಿದೆ ಎಂದು ಸಂದರ್ಶನ ಕೊಟ್ಟಿದ್ದ ಶಾರುಖ್ ಈಗ ಯು ಟರ್ನ್ ತೆಗೆದುಕೊಂಡಿದ್ದಾರೆ. ನನ್ನ ಸಿನಿಮಾ ರಿಲೀಸ್ ಆಗ್ತಿದೆ ಅಂಥ ನಾನು ಕ್ಷಮೆ ಕೇಳುತ್ತಿಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ಶಾರುಖ್ ಕ್ಷಮೆ ಕೇಳಲು ನಿಜವಾದ ಕಾರಣ ಏನು? ಸಂಗತಿಗಳು ಮುಂದಿವೆ.
ಬಾಕ್ಸ್ ಆಫೀಸ್ ಮೇಲೆ ಕಣ್ಣು
ಖಾನ್ ಗಳ ಸಿನಿಮಾವನ್ನು ನೋಡುವುದು ಬೇಡ ಎಂಬ ಗುಲ್ಲು ಸಾಮಾಜಿಕ ಜಾಲತಾಣದಲ್ಲಿ ಎದ್ದಿತ್ತು. ಅಸಹಿಷ್ಣುತೆ ಇದೆ ಎಂಬುವರ ಸಿನಿಮಾ ನೋಡುವುದು ಬೇಡ ಎಂಬ ಮಾತುಗಳು ಕೇಳಿ ಬಂದಿದ್ದವು. ಸಿನಿಮಾ ಕಲೆಕ್ಷನ್ ಮೇಲೆ ಹೊಡೆತ ಬೀಳುತ್ತದೆ ಎಂಬ ಆಧಾರದಲ್ಲಿಯೇ ಶಾರುಖ್ ಕ್ಷಮೆ ಕೇಳಿದ್ದಾರೆ ಎನ್ನುವುದು ತೆರೆದಿಟ್ಟ ಸತ್ಯ.
ಅಸಹಿಷ್ಣುತೆ ಇದೆಯಾ?
ಸುದ್ದಿ ಮಾಧ್ಯಮದಲ್ಲಿ ಮಾತನಾಡುತ್ತ 'Intolerance'ಗೆ ಹಿಂದಿಯಲ್ಲಿ ಏನು ಹೇಳುತ್ತಾರೆ? ಎಂಬ ಪ್ರಶ್ನೆ ಎದ್ದು ಬಂತು. ಅದಕ್ಕೆ ಅಸಹಿಷ್ಣುತೆ ಎಂಬ ಉತ್ತರವೂ ಬಂತು. ಆಗ ಶಾರುಖ್ ನನಗೆ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಅನಿಸುತ್ತಿಲ್ಲ ಎಂದು ಹೇಳಿದರು.
ಅಸಹಿಷ್ಣುತೆ ಪರವಾಗಿ ನಿಂತವರು
ಶಾರುಖ್ ಖಾನ್, ಅಮೀರ್ ಖಾನ್, ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಷಾ, ಎ ಆರ್ ರೆಹಮಾನ್ ಸಹ ಕೆಲವೊಂದು ಸಂದರ್ಭದಲ್ಲಿ ಅಸಹಿಷ್ಣುತೆ ಪರವಾಗಿ ಮಾತನಾಡಿದ್ದ ರಾಜಕಿಯೇತರ ಗಣ್ಯರು.
ಬಾಲಿವುಡ್ ಗೆ ಬಿಸಿ
ನಾಗರಿಕರು ತಮ್ಮ ಆಕ್ರೋಶವನ್ನು ಸಾಮಾಜಿಕ ತಾಣದ ಮೂಲಕ ಹೊರಹಾಕಿದ್ದು ಬಾಲಿವುಡ್ ಗೆ ಬಿಸಿ ತಟ್ಟಿದೆ. ಸಿನಿಮಾ ಒಂದು ವ್ಯಾಪಾರ ಎಂಬುದನ್ನು ಶಾರುಖ್ ಖಾನ್ ಕ್ಷಮೆ ಕೇಳಿದ ಪ್ರಕರಣ ಮತ್ತೆ ಬಿಂಬಿಸುತ್ತಿದೆ.
ದಿಲ್ವಾಲೆ ಬಾಜಿರಾವ್ ಮಸ್ತಾನಿ
ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಶಾರುಖ್ ಅಭಿನಯದ ದಿಲ್ವಾಲೆ ಮತ್ತು ದೀಪಿಕಾಳ ಬಾಜಿರಾವ್ ಮಸ್ತಾನಿ ನಡುವೆ ಜನರೇ ಬಾಜಿ ಕಟ್ಟಿದ್ದರು. ಅಸಹಿಷ್ಣುತೆ ಎನ್ನುವ ಖಾನ್ ಗಳ ಚಿತ್ರಕ್ಕೆ ಧಿಕ್ಕಾರ ಹಾಕೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.