ನಿತೀಶ್ ರಾಜಿನಾಮೆ ಕೊಟ್ಟಾಯ್ತು. ಬಿಹಾರದಲ್ಲಿ ಮುಂದೇನಾಗಬಹುದು?
ಬಿಹಾರ ವಿಧಾನಸಭೆಯ ಬಲಾಬಲ ಹೀಗಿದೆ. ಒಟ್ಟು ಸ್ಥಾನಗಳು 243. ಬಹುಮತಕ್ಕೆ 122. ಅತೀ ದೊಡ್ಡ ಪಕ್ಷ ಆರ್.ಜೆ.ಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಮತ್ತು ಇತರ ಪಕ್ಷಗಳು 8 ಸ್ಥಾನಗಳನ್ನು ಹೊಂದಿವೆ.
ಪಾಟ್ನಾ, ಜುಲೈ 26: ಬಿಹಾರ ರಾಜಕೀಯದಲ್ಲಿ ಇದ್ದಕ್ಕಿದ್ದಂತೆ ನಡೆದ ರಾಜಕೀಯ ವಿದ್ಯಮಾನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
BIG NEWS: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಇದೀಗ, ನಿತೀಶ್ ಅವರ ಮುಂದಿನ ನಡೆಯೇನು, ಬಿಹಾರದಲ್ಲಿ ಅಸ್ತಿತ್ವದಲ್ಲಿದ್ದ ಮಹಾಘಟ ಬಂಧನ ಒಡೆದು ಹೋಗಲಿದೆಯೇ ಎಂಬಿತ್ಯಾದಿ ವಿಚಾರಗಳು ಹರಿದಾಡುತ್ತಿವೆ. ಸದ್ಯದ ರಾಜಕೀಯ ವಿದ್ಯಮಾನಗಳ ಪ್ರಕಾರ, ಬಿಹಾರದಲ್ಲಿ ಈ ಮೂರು ಬೆಳವಣಿಗೆಗಳು ನಡೆಯಬಹುದು.
1. ಲಾಲು ಪ್ರಸಾದ್ ಯಾದವ್ ಅವರು ತಮ್ಮ ಪುತ್ರ ತೇಜಸ್ವಿ ಅವರಿಂದ ಉಪ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡುವಂತೆ ಮಾಡಿ ನಿತೀಶ್ ಮನ ಗೆಲ್ಲಬಹುದು. ಇದರಿಂದ ಸಂತುಷ್ಟರಾಗುವ ನಿತೀಶ್, ತಮ್ಮ ರಾಜಿನಾಮೆ ಹಿಂಪಡೆಯಬಹುದು.
2. ಬಿಜೆಪಿಯಿಂದ ಬೆಂಬಲ ಪಡೆಯುವ ಮೂಲಕ ನಿತೀಶ್ ಅವರು ಬಿಹಾರದಲ್ಲಿ ಹೊಸ ಸರ್ಕಾರ ರಚಿಸಬಹುದು.
3. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಬಗ್ಗೆ ನಿತೀಶ್ ಇಮೇಜ್ ದೊಡ್ಡದಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಇದೇ ಸಂದರ್ಭವನ್ನು ಮಧ್ಯಂತರ ಚುನಾವಣೆಗೆ ಹೋಗಲು ಜೆಡಿಯು ಸಿದ್ಧವಾಗಬಹುದು. ಹಾಗಾದಲ್ಲಿ, ಬಿಜೆಪಿಯು ಜೆಡಿಯು ಜತೆಗೆ ಕೈಜೋಡಿಸುವ ಸಾಧ್ಯತೆಗಳು ಹೆಚ್ಚಿವೆ.
ಚುನಾವಣೆ ನಡೆಯುವುದು ದೂರದ ಮಾತು. ಆದರೆ, ಅದಕ್ಕೆ ಮುನ್ನವೇ, ಬಿಹಾರ ವಿಧಾನ ಸಭೆಯಲ್ಲಿ ಸದ್ಯದ ಮಟ್ಟಿಗೆ ವಿವಿಧ ಪಕ್ಷಗಳ ಬಲಾಬಲ ಹೇಗಿದೆ ಎಂಬುದನ್ನು ನೋಡೋಣ. ಒಂದು ವೇಳೆ, ಈಗಿರುವ ಬಲಾಬಲಗಳ ಅನುಸಾರ ಜೆಡಿಯು-ಬಿಜೆಪಿ ಸೇರಿ ಸರ್ಕಾರ ರಚಿಸಿದರೆ, ಆ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಯಾವುದೇ ಪಕ್ಷದ ಅಥವಾ ಮೈತ್ರಿಕೂಟದ ಸರ್ಕಾರ ಬಹುಮತ ಸಾಧಿಸಲು 122 ಸ್ಥಾನಗಳ ಅಗತ್ಯವಿದೆ. ಅತೀ ದೊಡ್ಡ ಪಕ್ಷ ಆರ್.ಜೆ.ಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಮತ್ತು ಇತರ ಪಕ್ಷಗಳು 8 ಸ್ಥಾನಗಳನ್ನು ಹೊಂದಿವೆ.
ನನ್ನ ಪುತ್ರ ರಾಜಿನಾಮೆ ನೀಡುವುದಿಲ್ಲ: ಲಾಲೂ ಸ್ಪಷ್ಟನೆ
ಬಿಜೆಪಿ + ಜೆಡಿಯು+ಎಲ್ಜೆಪಿ (ಬಿಜೆಪಿ ಮಿತ್ರ ಪಕ್ಷ) = 53+71+2 = 128 ಸ್ಥಾನಗಳಾಗುವುದರಿಂದ ಬಿಜೆಪಿ ಬೆಂಬಲದೊಂದಿಗೆ ಆಡಳಿತ ನಡೆಸುವುದು ಜೆಡಿಯುಗೆ ಕಷ್ಟವಾಗಲಾರದು. ಆದರೆ ಆರ್.ಜೆಡಿಗೆ ಈ ಅವಕಾಶವಿಲ್ಲ. ಕಾಂಗ್ರೆಸ್ ಜತೆಗೆ ನಿಂತಿದ್ದರೂ ಇಬ್ಬರ ಒಟ್ಟು ಸ್ಥಾನಗಳು 98 ಆಗಲಿದ್ದು ಬಹುಮತಕ್ಕೆ 26 ಸ್ಥಾನಗಳ ಕೊರತೆಯಾಗಲಿದೆ. ಪಕ್ಷೇತರರು ಕೇವಲ 4 ಜನರು ಇರುವುದರಿಂದ ಅವರು ಬೆಂಬಲ ನೀಡಿದರೂ ಆರ್ ಜೆಡಿಗೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ.
ಹಾಗಾಗಿ, ಬಿಜೆಪಿ ಹಾಗೂ ಜೆಡಿಯು ಪಕ್ಷಗಳು ಸೇರಿದರೆ ಅಲ್ಲಿ ಸಮ್ಮಿಶ್ರ ಸರ್ಕಾರ ನಿರ್ಮಾಣವಾಗಿ, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಬಹುದು.