ಗುಪ್ತಚರ ಎಚ್ಚರಿಕೆಯ ಮಧ್ಯೆ ಡ್ರೋಣ್ ಹಾರಾಟ: ಮುಂಬೈ ಕಟ್ಟೆಚ್ಚರ
ಮಾನವರಹಿತ ವಿಮಾನಗಳ ಮೂಲಕ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ ಎನ್ನುವ ಗುಪ್ತಚರ ಇಲಾಖೆಯ ಎಚ್ಚರಿಕೆಯ ಬೆನ್ನಲ್ಲೇ, ಡ್ರೋಣ್ ಹಾರಾಟ ಕಂಡು ಬಂದಿದ್ದರಿಂದ ಮುಂಬೈನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಮುಂಬೈ, ಅ 19: ಮಾನವರಹಿತ ವಿಮಾನಗಳ ಮೂಲಕ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ ಎನ್ನುವ ಗುಪ್ತಚರ ಇಲಾಖೆಯ ಎಚ್ಚರಿಕೆಯ ಬೆನ್ನಲ್ಲೇ, ಡ್ರೋಣ್ ಹಾರಾಟ ಕಂಡು ಬಂದಿದ್ದರಿಂದ ಮುಂಬೈನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ಹಾರಾಡುತ್ತಿತ್ತು ಎಂದು ಪೈಲಟ್ ನೀಡಿದ ಮಾಹಿತಿಯ ನಂತರ ವಾಣಿಜ್ಯ ನಗರಿಯಲ್ಲಿ ಕಟ್ಟೆಚ್ಚರ ಹೆಚ್ಚಿಸಲಾಗಿದೆ.
ದೆಹಲಿಯಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ವಿಮಾನದ (6E 755) ಪೈಲಟ್, ಅನುಮಾನದ ರೀತಿಯಲ್ಲಿ ಡ್ರೋಣ್ ಹಾರುತ್ತಿದ್ದನ್ನು ನೋಡಿರುವುದಾಗಿ ಭದ್ರತಾ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಮಂಗಳವಾರ (ಅ 18) ವಿಮಾನ ಲ್ಯಾಂಡ್ ಮಾಡುತ್ತಿದ್ದ ವೇಳೆ (ಸಂಜೆ ಆರು ಗಂಟೆಗೆ) ಸುಮಾರು ನೂರು ಮೀಟರ್ ಕೆಳಗೆ ನೀಲಿ ಮತ್ತು ಗುಲಾಬಿ ಬಣ್ಣದ ಡ್ರೋಣ್ ಹಾರುತ್ತಿತ್ತು ಎಂದು ಪೈಲಟ್, ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ವಿಶೇಷ ಪೊಲೀಸ್ ದಳ ಮತ್ತು ಭಯೋತ್ಪಾದನೆ ನಿಗ್ರಹ ಪಡೆ ಕಾರ್ಯಪ್ರವೃತ್ತವಾಗಿದ್ದು ಡ್ರೋಣ್ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಪ್ಯಾರಾ ಗ್ಲೈಡರ್ಸ್ ಮತ್ತು ಬಲೂನುಗಳ ಹಾರಾಟವನ್ನು ಮುಂಬೈ ವಾಯುಪ್ರದೇಶದಲ್ಲಿ ನಿಷೇಧಿಸಲಾಗಿದೆ.