ನ್ಯಾಯಾಲಯದಲ್ಲಿ ಎಲ್ಲ ಖಾಲಿ ಹುದ್ದೆಗಳು ಭರ್ತಿಯಾಗಿದ್ದರೆ!
ನ್ಯಾಯಮೂರ್ತಿಗಳ ಕೊರತೆಯನ್ನು ನೆನೆದು ಪ್ರಧಾನಿಯ ಸಮ್ಮುಖದಲ್ಲಿಯೇ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ತೀರ್ಥ ಎಸ್. ಠಾಕೂರ್ ಭಾವುಕರಾಗಿ ಕಣ್ಣೀರು ಸುರಿಸುತ್ತಾರೆಂದರೆ ಭಾರತದ ನ್ಯಾಯಾಂಗ ಸ್ಥಿತಿ ಎಂಥದ್ದಿರಬೇಕು ಲೆಕ್ಕಹಾಕಿ.
ಒಬ್ಬ ನ್ಯಾಯಮೂರ್ತಿ ಇಂಥ ವಿಷಯಕ್ಕೆ ಯಾಕೆ ಕಣ್ಣೀರು ಸುರಿಸಬೇಕು, ಯಾಕೆ ಈರೀತಿ ಭಾವುಕರಾಗಬೇಕು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ, ಇಂಥ ಸ್ಥಿತಿ ಬಂದಿರುವುದು, ಧೂಳು ತಿನ್ನುತ್ತಿರುವ ಪ್ರಕರಣಗಳ ಗುಡ್ಡ ದಿನೇದಿನೇ ಬೆಟ್ಟದಂತಾಗುತ್ತಿರುವುದು ನಿಜಕ್ಕೂ ಕಳವಳಕರ ಸಂಗತಿ.
ಕೊಳೆಯುತ್ತ ಬಿದ್ದಿರುವ ಪ್ರಕರಣಗಳೆಷ್ಟು, ಒಂದು ವೇಳೆ ನ್ಯಾಯಮೂರ್ತಿಗಳ ಸ್ಥಾನ ತುಂಬಿದ್ದರೆ ಎಷ್ಟು ಪ್ರಕರಣಗಳು ಇತ್ಯರ್ಥವಾಗುತ್ತಿದ್ದವು, ಇದು ಯಾವ ರೀತಿ ಭಾರತದ ನ್ಯಾಯಾಂಗದ ಮೇಲೆ ಸಮಾಜದ ಮೇಲೆ ಪರಿಣಾಮ ಬೀರುತ್ತಿತ್ತು ಎಂಬ ಸಂಗತಿಗಳ ಕುರಿತು ಅಂಕಿಅಂಶಗಳು ಇಲ್ಲಿವೆ. [ಭಾಷಣದ ವೇಳೆ ಭಾವುಕರಾದ ಮುಖ್ಯ ನ್ಯಾಯಮೂರ್ತಿ ಠಾಕೂರ್]
ಸರ್ವೋಚ್ಚ ನ್ಯಾಯಾಲಯದ ವರದಿಯ ಆಧಾರದ ಮೇಲೆ ಕೇಂದ್ರ ಮಾಹಿತಿ ಆಯುಕ್ತ ಶೈಲೇಂದ್ರ ಗಾಂಧಿ ಅವರು, ವಿವಿಧ ರಾಜ್ಯಗಳಲ್ಲಿನ ಪೆಂಡಿಂಗ್ ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನ್ಯಾಯದಾನ ವಿಳಂಬವಾಗಬಾರದೆಂದಿದ್ದರೆ ಕೂಡಲೆ ಕೆಳನ್ಯಾಯಾಲಯ ಮತ್ತು ಉನ್ನತ ನ್ಯಾಯಾಲಯಗಳ ಜಡ್ಜುಗಳ ನೇಮಕಾತಿ ಕೂಡಲೆ ಆಗಬೇಕಿದೆ.
2009ರಲ್ಲಿ 2 ಕೋಟಿ 64 ಲಕ್ಷ ಪ್ರಕರಣಗಳು ಕೆಳ ನ್ಯಾಯಾಲಯದಲ್ಲಿ ಪೆಂಡಿಂಗ್ ಇದ್ದವು. ಮುಂದಿನ 5 ವರ್ಷಗಳಲ್ಲಿ 8 ಕೋಟಿ 97 ಲಕ್ಷ ಕೇಸುಗಳು ಸೇರಿಕೊಂಡಿವೆ. ಈ 5 ವರ್ಷಗಳಲ್ಲಿ 8 ಕೋಟಿ 92 ಲಕ್ಷ ಕೇಸುಗಳು ಇತ್ಯರ್ಥವಾಗಿದ್ದರೆ, 2 ಕೋಟಿ 68 ಲಕ್ಷ ಕೇಸುಗಳ ವಿಚಾರಣೆ ಕುಂಟುತ್ತ ಸಾಗಿದೆ.
ಅಚ್ಚರಿಯ ಸಂಗತಿಯೆಂದರೆ, ನರೇಂದ್ರ ಮೋದಿ ಅವರ ರಾಜ್ಯ ಗುಜರಾತಿನಲ್ಲಿ ಅತೀಹೆಚ್ಚು ನ್ಯಾಯಾಧೀಶರ ಸ್ಥಾನಗಳು ಖಾಲಿಬಿದ್ದಿವೆ. ಒಂದರಮೇಲೆ ಒಂದು ಬಿದ್ದಿರುವ ಕೇಸುಗಳ ಫೈಲುಗಳನ್ನು ಇತ್ಯರ್ಥಗೊಳಿಸಬೇಕಿದ್ದರೆ ಕನಿಷ್ಠ 287 ವರ್ಷಗಳು ಬೇಕಂತೆ!
ಒಟ್ಟಾರೆ 5 ಸಾವಿರ ಜಡ್ಜುಗಳ ಕೊರತೆಯನ್ನು ಭಾರತ ಎದುರಿಸುತ್ತಿದೆ. ಭಾರತದ ಜನಸಂಖ್ಯೆಗನುಗುಣವಾಗಿ ಪ್ರತಿ 10 ಲಕ್ಷ ಜನಸಂಖ್ಯೆಗೆ 50 ನ್ಯಾಯಮೂರ್ತಿಗಳಿರಬೇಕು. ಆದರೆ, ಭಾರತದಲ್ಲಿ ಇದ್ದದ್ದು, ಪ್ರತಿ 10 ಲಕ್ಷ ಜನರಿಗೆ ಕೇವಲ 17 ನ್ಯಾಯಾಧೀಶರು ಮಾತ್ರ. ಎಲ್ಲ ಹುದ್ದೆಗಳು ಭರ್ತಿಯಾಗಿದ್ದರೆ ನ್ಯಾಯದಾನ ವಿಳಂಬ ಶೇ.83ರಷ್ಟು ತಗ್ಗಿರುತ್ತಿತ್ತು.
ಭಾರತದ ಉಚ್ಚ ನ್ಯಾಯಾಲಯಗಳಲ್ಲಿ 1,017 ನ್ಯಾಯಮೂರ್ತಿಗಳ ಬದಲಾಗಿ ಕೇವಲ 384 ನ್ಯಾಯಮೂರ್ತಿಗಳು ಕೇಸುಗಳ ಇತ್ಯರ್ಥ ಮಾಡುತ್ತಿದ್ದಾರೆ. ಅಲಹಾಬಾದ್ ಹೈಕೋರ್ಟಿನಲ್ಲಿ ಇರಬೇಕಾದ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 160, ಅದೇ ಕರ್ನಾಟಕದಲ್ಲಿ ಒಟ್ಟು ಇರುವ ಸ್ಥಾನಗಳು 60.
ನ್ಯಾಯದಾನ ವಿಳಂಬ ಮಾಡಿದರೆ ನ್ಯಾಯ ತಿರಸ್ಕರಿಸಿದಂತೆ ಎಂಬ ಮಾತಿದೆ. ಇದು ದಶಕಗಳಿಂದ ಕೇಳಿ ಬರುತ್ತಿರುವ ಮಾತಾದರೂ ಇನ್ನೂ ಬದಲಾಗಿಲ್ಲ. ಶೀಘ್ರ ನ್ಯಾಯದಾನದಲ್ಲಿ ನ್ಯಾಯಾಂಗದ ಹೊಣೆಗಾರಿಕೆ ಮಾತ್ರವಿರುವುದಿಲ್ಲ, ಕಕ್ಷಿಗಾರರ ಹೊಣೆಗಾರಿಕೆಯೂ ಇರುತ್ತದೆ. [ಮಾಹಿತಿ-ಅಂಕಿಸಂಖ್ಯೆ : ಇಂಡಿಯಾಸ್ಪೆಂಡ್ಸ್.ಕಾಂ]