8 ನಾಗರೀಕರ ಹತ್ಯೆಗೆ ಪ್ರತೀಕಾರ, ಪಾಕಿಸ್ತಾನದ 14 ಚೆಕ್ ಪೋಸ್ಟ್ ಧ್ವಂಸ
ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಯ ಮೂಲಕ 8 ನಾಗರೀಕರನ್ನು ಹತ್ಯೆಗೈದ ಪಾಕಿಗೆ ಭಾರತದ ಗಡಿ ಭದ್ರತಾ ಪಡೆ ತಿರುಗೇಟು ನೀಡಿದ್ದು, ಸೇನೆಯ ದಾಳಿಗೆ ಇಬ್ಬರು ಪಾಕ್ ಯೋಧರು ಸಾವನ್ನಪ್ಪಿದ್ದು, 14 ಚೆಕ್ ಪೋಸ್ಟ್ ಧ್ವಂಸಗೊಂಡಿದೆ.
ನವದೆಹಲಿ, ನ 1: ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಯ ಮೂಲಕ 8 ನಾಗರೀಕರನ್ನು ಹತ್ಯೆಗೈದ ಪಾಕಿಸ್ತಾನಕ್ಕೆ ಭಾರತದ ಗಡಿ ಭದ್ರತಾ ಪಡೆ ತಿರುಗೇಟು ನೀಡಿದೆ.
ಭಾರತದ ಸೇನೆಯ ದಾಳಿಗೆ ಇಬ್ಬರು ಪಾಕ್ ಯೋಧರು ಸಾವನ್ನಪ್ಪಿದ್ದು ಜೊತೆಗೆ 14 ಚೆಕ್ ಪೋಸ್ಟ್ ಧ್ವಂಸಗೊಂಡಿದೆ. (ಡಿಸೆಂಬರ್ ನಲ್ಲಿ ದಾವೂದ್ ಶರಣಾಗತಿ)
ಸರ್ಜಿಕಲ್ ದಾಳಿಯ ನಂತರ ಪಾಕಿಸ್ತಾನದ ಪುಂಡಾಟಕ್ಕೆ ಬ್ರೇಕ್ ಬೀಳಬಹುದು ಎನ್ನುವ ಲೆಕ್ಕಾಚಾರ ತಪ್ಪುತ್ತಿದ್ದು, ಪಾಕಿಸ್ತಾನ ನಿರಂತರವಾಗಿ ಭಾರತದ ಸೈನಿಕರ ವಿರುದ್ದ ಗಡಿಯಲ್ಲಿ ದಾಳಿ ನಡೆಸುತ್ತಲೇ ಇದೆ.
ಸಾಂಬಾ ಪ್ರಾಂತ್ಯದಲ್ಲಿ ಮಂಗಳವಾರ (ನ 1) ಪಾಕ್ ನಡೆಸಿದ ಶೆಲ್ ದಾಳಿಗೆ ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿದಂತೆ 8 ನಾಗರೀಕರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಸಾಂಬಾದ ಅರ್ನಿಯಾ ಮತ್ತು ರಾಂಘರ್ ಸೆಕ್ಟರಿನಲ್ಲಿ ನಮ್ಮ ನಾಗರೀಕರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ದ ದಾಳಿ ನಡೆಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ಡಿಐಜಿ ಧರ್ಮೇಂದ್ರ ಪರೀಖ್ ಹೇಳಿದ್ದಾರೆ.
ಸೋಮವಾರ ( ಅ 31) ಪಾಕ್ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ಸೈನಿಕ ಹುತಾತ್ಮನಾಗಿದ್ದು, ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ದರು.
ತನ್ನ ಯೋಧನ ದೇಹವನ್ನು ಕತ್ತರಿಸಿದ ಪಾಕಿಸ್ತಾನದ ಕೃತ್ಯದಿಂದ ಆಕ್ರೋಶಗೊಂಡಿರುವ ಭಾರತದ ಯೋಧರು ಕೇರನ್ ಸೆಕ್ಟರಿನಲ್ಲಿ ಶನಿವಾರ (ಅ 29) ತಡರಾತ್ರಿ ನಡೆಸಿದ್ದ ದಾಳಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಪಾಕ್ ಸೈನಿಕರು ಸಾವನ್ನಪ್ಪಿದ್ದರು.