ಗಗನಕ್ಕೆ ಹಾರಲಿದ್ದಾನೆ ಭಾರತದ ಮಾನವ
ನವದೆಹಲಿ, ನ. 13 : ಭಾರತದ ವಿಜ್ಞಾನಿಗಳ ಪ್ರಯತ್ನ ನಿಗದಿಯಂತೆ ಯಶಸ್ವಿಯಾದರೆ 2021ಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನ ಸಾಧ್ಯವಾಗಲಿದೆ. ಈ ಬಗ್ಗೆ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಬೇಕೆಂಬ ಭಾರತದ ಬಹುದಿನದ ಕನಸು ಇನ್ನು ಏಳು ವರ್ಷಗಳಲ್ಲಿ ನನಸಾಗಲಿದೆ ಎಂದು ತಿಳಿಸಿದ್ದಾರೆ.
ಮಂಗಳಯಾನದ ಯಶಸ್ಸನ್ನು ಹಂಚಿಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ರಾಧಾಕೃಷ್ಣನ್, ಮೂವರು ಜನರಿಗೆ ಸ್ಥಳಾವಕಾಶ ಕಲ್ಪಿಸುವ ಬಾಹ್ಯಾಕಾಶ ನೌಕೆ ನಿರ್ಮಾಣ ಕೆಲಸ ಈಗಾಗಲೇ ಆರಂಭವಾಗಿದೆ. ಜಿಎಸ್ ಎಲ್ ವಿ ಎಂಕೆ -3 ಉಡಾಹಕ ವಾಹಕ ಸಹಾಯದಲ್ಲಿ ನೌಕೆಯನ್ನು ಬಾಹ್ಯಾಕಾಶಕ್ಕೆ ರವಾನಿಸಿ ಮರಳಿ ತರುವ ಪ್ರಯತ್ನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.[ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?]
ಮಂಗಳಯಾನದ ಯಶಸ್ಸು ತೃಪ್ತಿ ತಂದಿದ್ದು, ಮಂಗಳನಲ್ಲಿಯೇ ನೌಕೆ ಇಳಿಸುವ ಪ್ರಯತ್ನ ಮಾಡಲಾಗುವುದು. ಪ್ರಯೋಗದ ಫಲಿತಾಂಶದ ಆಧಾರದಲ್ಲಿ ಮುಂದಿನ ನಡೆ ತೀರ್ಮಾನಿಸಲಾಗುವುದು. ಎಲ್ಲವೂ ನಿಗದಿಯಂತೆ ನಡೆದರೆ 2021 ರಲ್ಲಿ ಭಾರತದ ವಿಜ್ಞಾನಿಗಳು ಯಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಂಗಳ ಗ್ರಹದ ಪ್ರದಕ್ಷಿಣೆಯಲ್ಲಿ ತೊಡಗಿರುವ ಮಾಮ್ ಕೆಂಪು ಗ್ರಹವನ್ನು ಹಾದು ಹೋದ ಸೈಡಿಂಗ್ ಸ್ಟ್ರಿಂಗ್ ಧುಮಕೇತುವಿನ ಚಿತ್ರ ಸೆರೆಹಿಡಿದು ಕಳುಹಿಸಿದೆ. ಅಲ್ಲದೇ ಮಾಮ್ ಜೀವಿತಾವಧಿಯನ್ನು 6 ತಿಂಗಳಿಗಿಂತ ಹೆಚ್ಚಿಗೆ ಮಾಡುವ ಚಿಂತನೆಯೂ ನಡೆದಿದೆ ಎಂದು ತಿಳಿಸಿದರು.