ದೇವರೇ, ಹವಾಮಾನ ಮುನ್ಸೂಚನೆ ನಿಜವಾಗದಿರಲಿ!
ನವದೆಹಲಿ, ಜೂ. 02 : "ಭಾರತೀಯ ಹವಾಮಾನ ಇಲಾಖೆ ಪರಿಷ್ಕರಿಸಿದ (ಮುಂಗಾರು ಮಳೆ) ಮುನ್ಸೂಚನೆ ನಿಜವಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ."
ಕೇಂದ್ರ ಭೂವಿಜ್ಞಾನ ಸಚಿವ ಡಾ. ಹರ್ಷವರ್ಧನ ಅವರ ಈ ಆತಂಕದ ನುಡಿಗಳು ಭಾರತ ಈ ವರ್ಷ ಎದುರಿಸಲಿರುವ ಭೀಕರ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ. ಈ ವರ್ಷ ಶೇ.88ರಷ್ಟು ಮಾತ್ರ ಮುಂಗಾರು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ವರದಿಯನ್ನು ಪರಿಷ್ಕರಿಸಿದ್ದು, ಭಾರತಕ್ಕೆ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದೆ.
ಎಲ್ ನಿನೋ ದುಷ್ಪರಿಣಾಮ ಬೀರಲಿದ್ದು, ಏಪ್ರಿಲ್ ನಲ್ಲಿ ಶೇ.93ರಷ್ಟು ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿತ್ತು. ಈಗ ಮತ್ತೆ ಅದನ್ನು ಪರಿಷ್ಕರಿಸಿದ್ದು, ಶೇ.88ರಷ್ಟು ಮಲೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇದು ಶೇ.4ರಷ್ಟು ಅತ್ತಿತ್ತ ಆಗಬಹುದಾದರೂ, ಶೇ.90ಕ್ಕಿಂತ ಕಡಿಮೆ ಮಳೆಯಾದರೆ 'ಬರದ ವರ್ಷ' ಎಂದು ಘೋಷಿಸಲಾಗುತ್ತದೆ.
ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಎಲ್ಲೆಡೆ ಅಗತ್ಯ ವಸ್ತುಗಳ ಧಾರಣೆ ಗಗನಕ್ಕೇರಿದೆ. ಇಂಥ ಸಂದರ್ಭದಲ್ಲಿ ಮುಂಗಾರು ಮಳೆಯೂ ಕೈಕೊಟ್ಟರೆ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ ಎಂದು ಇಂಡಿಟ್ರೇಡ್ ಡಿರೈವೆಟೀವ್ಸ್ ಅಂಡ್ ಕಮೋಡಿಟೀಸ್ ಅಧ್ಯಕ್ಷ ಹರೀಷ್ ಗಾಲಿಪೆಲ್ಲಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದ ರೈತ ಮಳೆಯನ್ನೇ ನಂಬಿದ್ದಾನೆ. ಶೇ.50ರಷ್ಟು ಕೃಷಿ ಭೂಮಿಗೆ ಸರಿಯಾದ ನೀರಾವರಿ ವ್ಯವಸ್ಥೆಯಿಲ್ಲ. ಕಳೆದ ವರ್ಷ ಕೂಡ ಮಳೆಯ ಕೊರತೆ ಮತ್ತು ಅಕಾಲಿಕ ವರ್ಷಧಾರೆಯಿಂದ ಸಾಕಷ್ಟು ಬೆಳೆ ಹಾನಿಯಾಗಿತ್ತು. ಬೆಳೆಹಾನಿಯಿಂದ ಕಂಗೆಟ್ಟಿದ್ದ ಹಲವಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಮಳೆ ಕೈಕೊಟ್ಟರೆ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜೂನ್ 1ರಂದು ಆಗಮಿಸಬೇಕಿದ್ದ ಮುಂಗಾರು ಮಳೆ ಕೇರಳವನ್ನು ಜೂನ್ 5ರಂದು ಪ್ರವೇಶಿಸುವ ಸಂಭವನೀಯತೆಯಿದೆ. ಮಳೆ ಕೊರತೆಯಾದರೆ ಮೋಡ ಬಿತ್ತನೆ ಮಾಡುವ ಯೋಜನೆಗೆ ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸುತ್ತಿದೆ. ಆರ್ಥಿಕ ಪರಿಸ್ಥಿತಿಯ ಮೇಲೂ ಮಳೆ ಕೊರತೆ ದುಷ್ಪರಿಣಾಮ ಬೀರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆಯ ಮಾತುಗಳನ್ನಾಡಿದೆ.
ಮುನ್ಸೂಚನೆಯಂತೆ ಮಳೆ ಕೈಕೊಟ್ಟರೆ ಉತ್ತರ ಕರ್ನಾಟಕ, ಪೂರ್ವ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಓರಿಸ್ಸಾ, ರಾಜಸ್ತಾನದ ಪ್ರದೇಶಗಳು ಬರಪೀಡಿತ ಪ್ರದೇಶಗಳಾಗಿವೆ.