ಟಾರ್ಗೆಟ್ ಚೀನಾː ಕ್ಷಿಪಣಿ ತಯಾರಿಕೆಯಲ್ಲಿ ಭಾರತ
ವಾಷಿಂಗ್ಟನ್, ಜುಲೈ 13: ಕಮ್ಯೂನಿಸ್ಟ್ ದೇಶ ಚೀನಾದ ಸಂಭವನೀಯ ಆಕ್ರಮಣವನ್ನು ಎದುರಿಸಲು ತನ್ನ ಅಣ್ವಸ್ತ್ರಗಳನ್ನು ಭಾರತ ಅತ್ಯಾಧುನೀಕರಣಗೊಳಿಸುತ್ತಿದೆ. ಚೀನಾದ ಎಲ್ಲ ಭಾಗಗಳ ಮೇಲೆ ದಕ್ಷಿಣ ಭಾರತದಿಂದ ಸಮರ್ಥವಾಗಿ ದಾಳಿ ನಡೆಸಬಲ್ಲ ಕ್ಷಿಪಣಿಗಳನ್ನು ಭಾರತ ಅಭಿವೃದ್ದಿಗೊಳಿಸುತ್ತಿದೆ ಎಂದು ಯುಎಸ್ ಅಣ್ವಸ್ತ್ರ ತಜ್ಞರು ಹೇಳಿದ್ದಾರೆ.
ಹಲವಾರು ಹೊಸ ಅಣ್ವಸ್ತ್ರಗಳ ವ್ಯವಸ್ಥೆಯ ಅಭಿವೃದ್ದಿಯೊಂಧಿಗೆ ಭಾರತವು ತನ್ನ ಶಸ್ತ್ರಾಸ್ತ್ರ ಭಂಡಾರವನ್ನು ಹೆಚ್ಚಿಸಿಕೊಂಡಿದೆ. ಭೂಮಿಯಿಂದ ಗಗನಕ್ಕೆ ಚಿಮ್ಮುವ ಖಂಡಾಂತರ ಕ್ಷಿಪಣಿಗಳು, ಹಾಗೂ ಸಮುದ್ರದಿಂದ ಹಾರಿ ನಿಖರ ಗುರಿಯನ್ನು ಧ್ವಂಸ ಮಾಡಬಲ್ಲ ಮಿಸೈಲ್ಗಳನ್ನು ಹೊಂದಿದೆ ಎಂದು ಅಮೆರಿಕದ ಇಬ್ಬರು ಅಣ್ವಸ್ತ್ರ ತಜ್ಞರು ಹೇಳಿದ್ದಾರೆ.
ಈವರೆಗೆ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಮೇಲೆ ಮಾತ್ರ ನಿಗಾ ವಹಿಸಿದ್ದ ನವದೆಹಲಿ, ಈಗ ಏಷ್ಯಾದ ಅತ್ಯಂತ ಪ್ರಬಲ ಕಮ್ಯೂನಿಸ್ಟ್ ದೇಶದ ದಾಳಿಯನ್ನು ತಡೆದು ನಿಗ್ರಹಿಸಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ.
ಚೀನಾದ ಎಲ್ಲ ಭಾಗಗಳ ಮೇಲೆ ದಾಳಿ ನಡೆಸುವ ಕ್ಷಿಪಣಿಗಳನ್ನು ವಿನ್ಯಾಸಗೊಳಿಸಿ, ಭಾರತದ ದಕ್ಷಿಣ ಭಾಗದಿಂದ ಕಾರ್ಯ ನಿರ್ವಹಿಸುವಂತೆ ಮಾಡುವ ಯೋಜನೆ ಸಿದ್ಧವಾಗಿದೆ ಎಂದು ಜುಲೈ-ಆಗಸ್ಟ್ ಸಂಚಿಕೆಯ ಡಿಜಿಟಲ್ ನಿಯತಕಾಲಿಕ-ಆಫ್ಟರ್ ಮಿಡ್ನೈಟ್ನಲ್ಲಿ ಪ್ರಕಟಗೊಂಡ ವರದಿಯಲ್ಲಿ ಹೇಳಲಾಗಿದೆ.
ಭಾರತವು ವಿನಾಶಕಾರಿ 150-200 ಅಣ್ವಸ್ತ್ರ ಸಿಡಿತಲೆಗಳಿಗಾಗಿ ಸಾಕಷ್ಟು ಪ್ಲುಟೋನಿಯಂನನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಲಾಗಿದೆ.(ಪಿಟಿಐ)