ಭಾರತದಲ್ಲಿದ್ದು ಪಾಕಿಸ್ತಾನಕ್ಕೆ ಬೆಂಬಲ ನೀಡುವ ದ್ರೋಹಿಗಳಿಗೆ ಏನನ್ನಬೇಕು?
ದೇಶದ್ರೋಹಿಗಳು ಕಾಶ್ಮೀರದಲ್ಲಿ ಭಾರತದ ಸೈನಿಕರ ಮೇಲೆ ಕಲ್ಲುತೂರಾಟ ನಡೆಸಿ, ಐಎಸ್ಐಎಸ್, ಪಾಕಿಸ್ತಾನದ ಧ್ವಜವನ್ನು ಹಾರಿಸಿ ಪಾಕ್ ಪ್ರೇಮ್ ಮೆರೆದಿದ್ದಾರೆ.
ಶ್ರೀನಗರ, ಫೆ 18: ನಗರದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ (ಫೆ 17) ಪೂಜೆಯ ನಂತರ ದೇಶದ್ರೋಹಿಗಳು ಭಾರತದ ಸೈನಿಕರ ಮೇಲೆ ಕಲ್ಲುತೂರಾಟ ನಡೆಸಿ, ಐಎಸ್ಐಎಸ್ ಮತ್ತು ಪಾಕಿಸ್ತಾನದ ಧ್ವಜವನ್ನು ಹಾರಿಸಿ ಪಾಕ್ ಪ್ರೇಮ್ ಮೆರೆದಿದ್ದಾರೆ.
ಅಪಾರ ಸಂಖ್ಯೆಯಲ್ಲಿದ್ದ ನೆರೆದಿದ್ದ ಯುವಕರು ಪಾಕಿಸ್ತಾನ ಜಿಂದಾಬಾದ್, ಐಎಸ್ಐಎಸ್ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೂಗುತ್ತಾ, ಭಾರತದ ಸೈನಿಕರ ಮೇಲೆ ಕೈಗೆ ಸಿಕ್ಕವಸ್ತುಗಳನ್ನು ತೂರಿದ್ದಾರೆ.
ಇಂತಹ ಘಟನೆ ದಕ್ಷಿಣ ಕಾಶ್ಮೀರದ ಸೋಫಿಯಾ ಜಿಲ್ಲೆಯಲ್ಲಿ ಮತ್ತು ಶ್ರೀನಗರದಲ್ಲಿ ಪುನರಾವರ್ತನೆಯಾಗುತ್ತಲೇ ಇದೆ. ಪ್ರಮುಖವಾಗಿ ಶುಕ್ರವಾರದ ಪ್ರಾರ್ಥನೆಯ ನಂತರ ಇಂತಹ ಘಟನೆಗಳು ಹೆಚ್ಚುತ್ತಿವೆ(ಪಾಕ್ ಸೇರಿದಂತೆ 5 ದೇಶಗಳ ಪ್ರಜೆಗಳಿಗೆ ಕುವೈತ್ ಪ್ರವೇಶವಿಲ್ಲ)
ಘಟನೆಯ ಬಗ್ಗೆ ಎಚ್ಚರಿಕೆ ನೀಡಿದ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಯುವಕರು ಇದೇ ರೀತಿ ವರ್ತಿಸಿದರೆ ಅವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸೇನಾ ಮುಖ್ಯಸ್ಥರ ಹೇಳಿಕೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಸಿಪಿಐ(ಎಂ) ತಪ್ಪು ಹುಡುಕಿದೆ. ಸೇನಾ ಮುಖ್ಯಸ್ಥರು ಈ ರೀತಿ ಹೇಳಿಕೆ ನೀಡುವುದರ ಬದಲು, ಕೇಂದ್ರ ಮತ್ತು ರಾಜ್ಯ ಸರಕಾರ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಬೇಕೆಂದು ಸಿಪಿಐ(ಎಂ) ಮುಖಂಡ ಸೀತಾರಾಂ ಯಚೂರಿ ಹೇಳಿದ್ದಾರೆ.
ವಿಶ್ವದ ಐದನೇ ಅತಿದೊಡ್ಡ ಸೇನಾ ಮುಖ್ಯಸ್ಥರು ಮತ್ತು ಅತ್ಯಂತ ಶಿಸ್ತುಬದ್ದ ವ್ಯಕ್ತಿಯೆಂದೇ ಹೇಳಲಾಗುವ ಬಿಪಿನ್ ರಾವತ್ ಅವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಮುಸ್ತಾಫಾ ಕಮಲ್ ಕೊಂಕು ನುಡಿದಿದ್ದಾರೆ.
ಕಲ್ಲುತೂರಾಟ ನಡೆಸಬೇಡಿ ಎಂದು ಪದೇ ಪದೇ ಸೇನಾ ಅಧಿಕಾರಿಗಳು ಮನವಿ ಮಾಡಿದ ನಂತರವೂ ಕಲ್ಲು ತೂರಾಟ ಮುಂದುವರಿದಿದ್ದರಿಂದ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದರು.