ಸರ್ಜಿಕಲ್ ಸ್ಟ್ರೈಕಿಗಿಂತಲೂ ಉತ್ತಮ ಆಯ್ಕೆ ನಮ್ಮಲ್ಲಿದೆ: ಪಾಕಿಸ್ತಾನಕ್ಕೆ ಎಚ್ಚರಿಕೆ
ಸರ್ಜಿಕಲ್ ಸ್ಟ್ರೈಕಿಗಿಂತಲೂ ಪರಿಣಾಮಕಾರಿಯಾಗಿ ದಾಳಿ ನಡೆಸುವ ಆಯ್ಕೆ ನಮ್ಮಲ್ಲಿ ಇದೆ ಎಂದು ಪಾಕಿಸ್ತಾನಕ್ಕೆ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ, ಜೂ 28: ಸೀಮಿತ ದಾಳಿಗಿಂತಲೂ ತೀಕ್ಷ್ಣವಾದ ಆಯ್ಕೆ ನಮ್ಮಲ್ಲಿದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ಜೊತೆಗಿನ ಯುದ್ದ ತ್ರಾಸದಾಯಕವಲ್ಲ ಎನ್ನುವ ನಿರ್ಧಾರಕ್ಕೆ ಪಾಕ್ ಬಂದಿದ್ದರೆ, ಸರ್ಜಿಕಲ್ ಸ್ಟ್ರೈಕಿಗಿಂತಲೂ ಪರಿಣಾಮಕಾರಿಯಾಗಿ ದಾಳಿ ನಡೆಸುವ ಆಯ್ಕೆ ನಮ್ಮಲ್ಲಿ ಇದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇನೆಂದು ರಾವತ್ ಹೇಳಿದ್ದಾರೆ.
ಭಾರತದ ಯೋಧರ ದೇಹವನ್ನು ವಿರೂಪಗೊಳಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದ ಜನರಲ್ ರಾವತ್, ನಮ್ಮ ಸೇನೆ ಪಾಕಿಸ್ತಾನದ ರೀತಿಯಲ್ಲಿ ಅಮಾನುಷ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಎರಡು ದೇಶಗಳ ನಡುವೆ ಶಾಂತಿ ನೆಲೆಸಿದರೆ ಮಾತ್ರ ಮಾತುಕತೆ ನಡೆಯಲು ಸಾಧ್ಯ. ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎನ್ನುವುದು ನಮ್ಮ ಆಶಯ ಕೂಡಾ. ಕಾಶ್ಮೀರ ಸಂಪೂರ್ಣ ಸಹಜಸ್ಥಿತಿಗೆ ಬಂದಾಗ ನಾನೇ ಮಾತುಕತೆ ಆಯೋಜಿಸುತ್ತೇನೆಂದು ರಾವತ್ ಹೇಳಿದ್ದಾರೆ.
ಹಿಜ್ಬುಲ್ ಉಗ್ರಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ವಿರುದ್ದ ಪಾಕಿಸ್ತಾನ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದನ್ನು ನಾವು ಕಾದು ನೋಡುತ್ತೇವೆ.
ಸಲಾಹುದ್ದೀನ್ 'ಜಾಗತಿಕ ಭಯೋತ್ಪಾದಕ' ಎಂದು ಅಮೆರಿಕಾ ಘೋಷಿಸಿರುವುದರ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಜನರಲ್ ರಾವತ್, ಆತ ಪ್ರತಿಭಟನೆಗಳಿಗೆ ಕ್ಯಾಲೆಂಡರ್ ನಲ್ಲಿ ಮೊದಲೇ ದಿನ ನಿಗದಿಪಡಿಸುವವನು. ಈತನ ವಿರುದ್ದ ತುರ್ತಾಗಿ ಪಾಕ್ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.