ಬಾಂಗ್ಲಾದೇಶಕ್ಕೆ ಭಾರತದಿಂದ 29 ಸಾವಿರ ಕೋಟಿ ರು. ಸಾಲ
ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಹಾಗೂ ಆ ದೇಶದ ಹಿರಿಯ ರಾಜತಾಂತ್ರಿಕ ಸಿಬ್ಬಂದಿ ಜತೆಗೆ ಹೈದರಾಬಾದ್ ಹೌಸ್ ನಲ್ಲಿ ನಡೆದ ದ್ವಿಪಕ್ಷೀಯ ರಾಜತಾಂತ್ರಿಕ ಸಭೆಯ ನಂತರ, ಸುದ್ದಿ ಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಮೋದಿ.
ನವದೆಹಲಿ, ಏಪ್ರಿಲ್ 8: ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶಕ್ಕೆ 4.5 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 29 ಸಾವಿರ ಕೋಟಿ ರು. ) ಮೊತ್ತದ ಸಾಲ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಹಾಗೂ ಆ ದೇಶದ ಹಿರಿಯ ರಾಜತಾಂತ್ರಿಕ ಸಿಬ್ಬಂದಿ ಜತೆಗೆ ಹೈದರಾಬಾದ್ ಹೌಸ್ ನಲ್ಲಿ ನಡೆದ ದ್ವಿಪಕ್ಷೀಯ ರಾಜತಾಂತ್ರಿಕ ಸಭೆಯ ನಂತರ, ಸುದ್ದಿ ಗೋಷ್ಠಿಯಲ್ಲಿ ಪ್ರಧಾನಿ ಮೋದಿ ಈ ವಿಚಾರ ತಿಳಿಸಿದರು.
ಇದೇ ವೇಳೆ, ಭಾರತ ಹಾಗೂ ಬಾಂಗ್ಲಾದೇಶಗಳು ನಾಗರಿಕ ಪರಮಾಣು ಒಪ್ಪಂದ, ಎರಡು ಸಾಮಾನ್ಯ ನಿವಾದನಾ ಒಪ್ಪಂದಗಳೂ ಸೇರಿದಂತೆ ಒಟ್ಟು 22 ಒಪ್ಪಂದಗಳಿಗೆ ಸಹಿ ಹಾಕಿದವು.
ಸುದ್ದಿಗೋಷ್ಠಿಯಲ್ಲಿ, ದ್ವಿಪಕ್ಷೀಯ ಒಪ್ಪಂದಗಳ ಪ್ರಾಮುಖ್ಯತೆಯ ಬಗ್ಗೆ ಪ್ರಸ್ತಾಪಿಸಿದ ಮೋದಿ, ''ಬಾಂಗ್ಲಾದೇಶಕ್ಕೆ ಸುಮಾರು 29 ಸಾವಿರ ಕೋಟಿ ರು.ಗಳ ಸಾಲವನ್ನು ಮಂಜೂರು ಮಾಡಿದೆ. ಅಲ್ಲದೆ, ಬಾಂಗ್ಲಾದೇಶದ ಸೇನಾ ಶಕ್ತಿಯ ವೃದ್ಧಿಗಾಗಿ 3200 ಕೋಟಿ ರು. ಹಣವನ್ನು ಸಾಲವನ್ನಾಗಿ ನೀಡಲಿದೆ'' ಎಂದು ಪ್ರಕಟಿಸಿದರು.
ಇದೇ ವೇಳೆ, ''ಬಾಂಗ್ಲಾದೇಶದಿಂದಲೂ ಕೆಲವಾರು ವಿಚಾರಗಳಲ್ಲಿ ನೆರವನ್ನು ಭಾರತವು ನಿರೀಕ್ಷಿಸುತ್ತದೆ. ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ, ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ನಾಗರಿಕ ಪರಮಾಣು ಇಂಧನದಂತಹ ವಿಚಾರಗಳಲ್ಲಿ ಭಾರತವನ್ನು ಬೆಂಬಲಿಸುವಂತೆ ಬಾಂಗ್ಲಾದೇಶವನ್ನು ಭಾರತ ಸರ್ಕಾರ ಕೋರುತ್ತದೆ'' ಎಂದು ಮೋದಿ ವಿವರಿಸಿದರು.
ಇದೇ ವೇಳೆ, ಭಾರತದ ಕೋಲ್ಕತಾ ಹಾಗೂ ಬಾಂಗ್ಲಾದ ಢಾಕಾದ ನಡುವೆ ವಿಶೇಷ ಬಸ್ ಸೌಕರ್ಯವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಹಾಗೂ ಶೇಖ್ ಹಸೀನಾ ಅವರು, ಜಂಟಿಯಾಗಿ ಉದ್ಘಾಟಿಸಿದರು.
ಬಳಿಕ, ಕೋಲ್ಕತಾ ಹಾಗೂ ಬಾಂಗ್ಲಾದೇಶದ ಕುಲ್ನಾ ನಡುವೆ ರೈಲು ಸೇವೆಗೂ ಚಾಲನೆ ನೀಡಿದರು. ಇದೇ ವೇಳೆ, ರಾಧಿಕಾಪುರ್ - ಕುಲ್ನಾ ನಡುವೆ ಹೊಸ ರೈಲು ಸೇವೆಗೂ ಚಾಲನೆ ನೀಡಲಾಯಿತು.
ಇನ್ನು, ಉಭಯ ದೇಶಗಳ ನಡುವಿನ ತೀಸ್ತಾ ನದಿ ನೀರಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಮೋದಿ, ''ಶೀಘ್ರದಲ್ಲೇ ಆ ಬಗ್ಗೆ ಉಭಯ ದೇಶಗಳು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.
ಚಿತ್ರಕೃಪೆ: ಪಿಟಿಐ