ಅಖಿಲೇಶ್ ಉಚ್ಚಾಟನೆಯ ಹಿಂದೆ ಮುಲಾಯಂ ಎರಡನೇ ಕುಟುಂಬದ ಕೈವಾಡ?
ಮುಲಾಯಂ ಅವರ ಮೊದಲ ಹೆಂಡತಿ ಮಾಲತಿ ದೇವಿ 2003ರಲ್ಲಿ ಅಸುನೀಗಿದ್ದಾರೆ. ಅವರ ಎರಡನೇ ಹೆಂಡತಿಯ ಹೆಸರು ಸಾಧನಾ ಗುಪ್ತಾ. ಅವರ ಸೊಸೆ ಅಪರ್ಣಾ ಯಾದವ್ ಸದ್ಯಕ್ಕೆ ಕುಟುಂಬ ಕಲಹದ ಕೇಂದ್ರಬಿಂದುವಾಗಿದ್ದಾರೆ.
ಲಖನೌ, ಡಿಸೆಂಬರ್ 31 : ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಮೊದಲ ಹೆಂಡತಿಯ ಮಗನನ್ನು ಪಕ್ಷದಿಂದ ಉಚ್ಚಾಟಿಸುತ್ತಿದ್ದಂತೆ, ಅವರ ಎರಡನೇ ಹೆಂಡತಿಯ ಸೊಸೆ 'ಪ್ರತ್ಯಕ್ಷ'ಳಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬಹುಶಃ ಮುಲಾಯಂ ಸಿಂಗ್ ಅವರ 'ಯಾದವೀ' ಕುಟುಂಬ ರಾಜಕಾರಣದ ಆಳಅಗಲವನ್ನು ಬಗೆದು ನೋಡಿದರೆ, ಭಾರತದ ಯಾವುದೇ ಕುಟುಂಬ ರಾಜಕಾರಣವನ್ನು ಮೀರಿಸುವಂತಿದೆ. ಅಖಿಲೇಶ್ ಅವರನ್ನು ಉಚ್ಚಾಟಿಸುತ್ತಿದ್ದಂತೆ ಒಂದೊಂದೇ ಕೌಟುಂಬಿಕ ದ್ವೇಷದ ವಿಷಯಗಳು ಬಯಲಾಗುತ್ತಿವೆ.
ಮುಲಾಯಂ ಅವರ ಮೊದಲ ಹೆಂಡತಿ ಮಾಲತಿ ದೇವಿ 2003ರಲ್ಲಿ ಅಸುನೀಗಿದ್ದಾರೆ. ಅವರ ಎರಡನೇ ಹೆಂಡತಿಯ ಹೆಸರು ಸಾಧನಾ ಗುಪ್ತಾ. ಅವರ ಸೊಸೆ ಅಪರ್ಣಾ ಯಾದವ್ ಸದ್ಯಕ್ಕೆ ಕುಟುಂಬ ಕಲಹದ ಕೇಂದ್ರಬಿಂದುವಾಗಿದ್ದಾರೆ. ಆಕೆಯ ರಾಜಕೀಯ ಮಹತ್ವಾಕಾಂಕ್ಷೆಯೇ ಯಾದವೀ ಕಲಹಕ್ಕೆ ಮೂಲ ಕಾರಣ ಎಂದು ಮೂಲಗಳು ಹೇಳುತ್ತಿವೆ. [ಅಖಿಲೇಶ್ ರನ್ನು ಪಕ್ಷದಿಂದ ಉಚ್ಚಾಟಿಸಿದ ಮುಲಾಯಂ ಸಿಂಗ್]
ಸಾಧನಾ ಅವರು ರಾಜಕೀಯದಲ್ಲಿ ಎಂದೂ ಆಸಕ್ತಿ ತೋರಿಸಿರಲಿಲ್ಲ. ಆದರೆ, ಅವರ ಸೊಸೆ ಅಪರ್ಣಾ ಯಾದವ್ ರಾಜಕಾರಣಕ್ಕೆ ಧುಮುಕುತ್ತಿದ್ದಂತೆ ಸಾರ್ವಜನಿಕ ಸಭೆಗಳಲ್ಲಿ ಸಾಧನಾ ಅವರೂ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಈ ಅಪರ್ಣಾ ಮತ್ತು ಅಖಿಲೇಶ್ ನಡುವೆ ಕೂಡ ಅಂತಹ ಸೌಹಾರ್ದಯುತವಾದ ಸಂಬಂಧವೂ ಇಲ್ಲ. ಸಿಕ್ಕಾಗ ನಮಸ್ತೆ, ನಮಸ್ತೆ ಅಷ್ಟೇ.
ಪಕ್ಷದ ಹಿತದೃಷ್ಟಿಯಿಂದ ಅಖಿಲೇಶ್ ಅವರನ್ನು ಉಚ್ಚಾಟಿಸಲಾಯಿತು ಎಂದು ಮುಲಾಯಂ ಅವರು ಹೇಳಿಕೆ ನೀಡಿದ್ದರೂ, ಎರಡನೇ ಕುಟುಂಬದ 'ಮಧ್ಯಸ್ಥಿಕೆ'ಯಿಂದಲೇ ಅಖಿಲೇಶ್ ಅವರು ಉಚ್ಚಾಟನೆಗೊಂಡಿದ್ದಾರೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.
ಅಖಿಲೇಶ್ ಅವರು ರಾಜ್ಯದ ಉತ್ತಮ ಮುಖ್ಯಮಂತ್ರಿಯಾಗಬೇಕು ಎಂದು ಮುಲಾಯಂ ಕೂಡ ಬಯಸಿದ್ದರು. ಆದರೆ, ತಾವು ಹೇಳಿದಂತೆ ಕೇಳಿಕೊಂಡು ಅಧಿಕಾರ ನಡೆಸಬೇಕು ಎಂದೂ ಬಯಸಿದ್ದರೂ. ಈ ವಿಷಯ ಕೂಡ ಅಂತಃಕಲಹಕ್ಕೆ ಕಾರಣವಾಗಿದೆ.
ಕಳೆದ ಅಕ್ಟೋಬರ್ ನಿಂದಲೇ ಯಾದವ ಕುಟುಂಬದಲ್ಲಿ ಬಿರುಕುಗಳು ಕಾಣಲಾರಂಬಿಸಿದವು. ಎರಡನೇ ಕುಟುಂಬದ ಅತಿಯಾದ ಮಧ್ಯಸ್ಥಿಕೆ ಒಂದೆಡೆಯಾದರೆ, ಮುಲಾಯಂ ಅವರ ಸಹೋದರ ಶಿವಪಾಲ್ ಯಾದವ್ ಅವರ ಕೈವಾಡವನ್ನು ಅಲ್ಲಗಳೆಯುವಂತಿಲ್ಲ. ಶಿವಪಾಲ್ ಯಾದವ್ ಅವರು ದಿನದಿಂದ ದಿನಕ್ಕೆ ಪ್ರಬಲರಾಗುತ್ತ ಸಾಗಿದ್ದಾರೆ.
ಮುಂದಿನ ದಿನಗಳಲ್ಲಿ ಏನಾಗಲಿದೆ? ಅಪ್ಪ ಮಗ ಸಂಧಾನ ಮಾಡಿಕೊಂಡು ಪಕ್ಷವನ್ನು ಬಲಿಷ್ಠಪಡಿಸುತ್ತಾರಾ ಅಥವಾ ಅಖಿಲೇಶ್ ಹೊಸ ಪಕ್ಷಕ್ಕೆ ನಾಂದಿ ಹಾಡುತ್ತಾರಾ? ಅಖಿಲೇಶ್ ಕ್ಷಮೆಕೋರಿ ವಾಪಸ್ ಬಂದರೂ ಅವರು ಕಾದುನೋಡಬೇಕು ಎಂದು ಮುಲಾಯಂ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.