ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಿ!
ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಬಹುದು. ಅದೂ ಅಜ್ಜಿಯರ ಬಾಯಲ್ಲಿ! ಹೌದು, ಇಲ್ಲಿ ಶಿಕ್ಷಣ ಇಲಾಖೆ ಇಂಥ ವಿಭಿನ್ನ ಯೋಜನೆಯನ್ನು ಪರಿಚಯಿಸುತ್ತಿದೆ.
ರಾಜಸ್ಥಾನ, ಮೇ 23: ರಕ್ಕಸರನ್ನೆಲ್ಲ ಒಂದೇ ಏಟಿಗೆ ಹೊಡೆದುರುಳಿಸುವ ಸುಂದರ ರಾಜಕುಮಾರ, ಉದ್ದ ಜಡೆಯ ಚೆಂದದ ರಾಜಕುಮಾರಿ, ಗಿಳಿಯ ಕೊರಳೊಳಗಿರುವ ರಾಕ್ಷಸನ ಪ್ರಾಣ... ಎಂಬೆಲ್ಲ ಸುಂದರ ಕಲ್ಪನೆಯನ್ನು ಹೊತ್ತು ತರುತ್ತಿದ್ದ ಅಜ್ಜಿಯ ಕತೆಗೆ ಆಧುನಿಕ ಕಾಲದಲ್ಲಿ ಅಜ್ಜಿಯಂತೇ ವೃದ್ಧಾಪ್ಯ ಆವರಿಸಿದೆ!
ವಿಡಿಯೋ ಗೇಮ್, ಕಾಮಿಕ್ಸ್ ಗಳು, ಕಾರ್ಟೂನ್ ಚಾನೆಲ್ ಗಳು ಮಕ್ಕಳ ಕಲ್ಪನಾ ಶಕ್ತಿಯನ್ನೇ ಕಸಿದಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೀಗ ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸಿ, ಕ್ರಿಯಾಶೀಲತೆಯನ್ನು ವೃದ್ಧಿಸುವುದಕ್ಕಾಗಿ ರಾಜಸ್ಥಾನ ಸರ್ಕಾರ ಹೊಸ ಯೋಜನೆಯೊಂದನ್ನು ಪರಿಚಯಿಸುತ್ತಿದೆ.[ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ]
ರಾಜಸ್ಥಾನದ ಶಾಲೆಗಳಲ್ಲಿ ಇನ್ಮುಂದೆ ಅಜ್ಜಿ ಕತೆ ಕೇಳಬಹುದು. ಅದೂ ಅಜ್ಜಿಯರ ಬಾಯಲ್ಲಿ! ಹೌದು, ಇಲ್ಲಿ ಶಿಕ್ಷಣ ಇಲಾಖೆ ಇಂಥ ವಿಭಿನ್ನ ಯೋಜನೆಯನ್ನು ಪರಿಚಯಿಸುತ್ತಿದೆ. ಆಧುನಿಕ ಕಾಲದ ಭರಾಟೆಯಲ್ಲಿ ಮಕ್ಕಳಲ್ಲಿನ ಮುಗ್ಧತೆ, ಕ್ರಿಯಾಶೀಲತೆ, ಕಲ್ಪನಾ ಶಕ್ತಿ ಮಾಯವಾಗುತ್ತಿರುವ ಕಾರಣ ಇಂಥದೊಂದು ಯೋಜನೆಯನ್ನು ಪರಿಚಯಿಸಿ ಮಕ್ಕಳಿಗೆ ಪರಿಪೂರ್ಣ ಬಾಲ್ಯವನ್ನು ಒದಗಿಸುವ ಉದ್ದೇಶ ಇಲ್ಲಿನ ಸರ್ಕಾರದ್ದು.[ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ : ಭಾಗ 2]
ಮಕ್ಕಳ ವ್ಯಕ್ತಿತ್ವ ವಿಕಸನ, ಮನರಂಜನೆ, ಬುದ್ಧಿವಿಕಾಸದ ಉದ್ದೇಶದಿಂದ ಜಾರಿಯಾದ ಬಾಲ ಸುಭಾಸ್ ಯೋಜನೆಯ ಅಡಿಯಲ್ಲಿ ಪ್ರತಿ ಶನಿವಾರ ದ ಒಂದು ಅವಧಿಯಲ್ಲಿ ಇಲ್ಲಿನ ಶಾಲೆಗಳಲ್ಲಿ ಓದುವ ಒಂದರಿಂದ ಐದನೇ ತರಗತಿಯವರೆಗಿನ ಮಕ್ಕಳಿಗೆ ಕಥೆ ಹೇಳಲಾಗುತ್ತದೆ. ಈ ಶಾಲೆಗಳಲ್ಲಿ ಓದುವ ಮಕ್ಕಳ ಅಜ್ಜಿಯರೇ ಶಾಲೆಗೆ ಬಂದು ಕತೆ ಹೇಳಬಹುದು.
ಅಕಸ್ಮಾತ್ ಅಜ್ಜಿಯರು ಬಾರದೆ ಇದ್ದಲ್ಲಿ ಶಾಲೆಯ ಹಿರಿಯ ಶಿಕ್ಷಕರು ಕಥೆಹೇಳಬೇಕಾಗುತ್ತದೆ ಎಂದು ಇಲ್ಲಿನ ಮಾಧ್ಯಮಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ ಬಿತ್ತುವಂಥ ನೀತಿ ಕತೆಗಳು, ಮನರಂಜನೆ ನೀಡುವ ಕತೆಗಳು, ಅವರ ಕಾಲ್ಪನಿಕ ಶಕ್ತಿಯನ್ನು ಹೆಚ್ಚಿಸುವ ಕಥೆಗಳಿಗೆ ಆದ್ಯತೆ ನೀಡಲಾಗುತ್ತದೆ.