IN PICS: ದೇಶದಾದ್ಯಂತ ಕಂಡ ಆಕ್ರೋಶ್ ದಿವಸ್...
ನೋಟು ರದ್ದು ಎಂಬ ನಿರ್ಧಾರ ನರೇಂದ್ರ ಮೋದಿ ನೇತೃತ್ವದ ಸರಕಾರದ ಪಾಲಿಗೆ ಸಲೀಸಾಗಂತೂ ಕಾಣುತ್ತಿಲ್ಲ. ದೇಶದ ಪ್ರಮುಖ ಪಕ್ಷಗಳ ಮುಖಂಡರು ಸೋಮವಾರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು
ಬೆಂಗಳೂರು, ನವೆಂಬರ್ 28: ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ರದ್ದು ನಿರ್ಧಾರದ ನಡೆಯನ್ನು ವಿರೋಧಿಸಿ ದೇಶದಾದ್ಯಂತ ನವೆಂಬರ್ 28ರ ಸೋಮವಾರದಂದು ಪ್ರತಿಭಟನೆಗಳಾಗಿವೆ. ವಿವಿಧ ರಾಜಕೀಯ ಪಕ್ಷಗಳು ಬಂದ್ ಕರೆಯನ್ನು ಬೆಂಬಲಿಸದಿದ್ದರೂ ನೂರಾರು ಸಂಖ್ಯೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ.
ನೋಟು ರದ್ದು ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ, 'ಆಕ್ರೋಶ್ ದಿವಸ್' ಆಚರಣೆಗೆ ಕರೆ ನೀಡಲಾಗಿತ್ತು. ಜನರು ಒಗ್ಗೂಡಿ ರಸ್ತೆಗೆ ಇಳಿದು ಕೇಂದ್ರ ಸರಕಾರದ ನಡೆಯನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.
ಮೊದಲಿಗೆ ಕಪ್ಪುಹಣದ ವಿರುದ್ಧ ಕ್ರಮಕ್ಕೆ ನೋಟು ರದ್ದು ತೀರ್ಮಾನ ಎಂದ ಪ್ರಧಾನಿ, ಈಗ ಕಾರ್ಡ್, ಕಂಪ್ಯೂಟರ್, ಮೊಬೈಲ್ ಹಣಕಾಸು ವ್ಯವಹಾರ ರೂಢಿಯಾಗಲಿ ಎಂದು ಹೀಗೆ ಮಾಡಿದ್ದು ಎನ್ನುತ್ತಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.[ಒಣಮೆಣಸಿನಕಾಯಿ ಹಂಚಿ 'ಆಕ್ರೋಶ್' ವ್ಯಕ್ತಪಡಿಸಿದ ವಾಟಾಳ್]
ಜನಸಾಮಾನ್ಯರು ಬ್ಯಾಂಕ್, ಎಟಿಎಂ ಮುಂದೆ ಸಾಲುಗಟ್ಟಿ ನಿಲ್ಲುವುದು ನಿಂತಿಲ್ಲ. ವ್ಯವಸ್ಥೆ ಇನ್ನೂ ಸರಿಹೋಗಿಲ್ಲ. ಪೂರ್ವ ನಿಯೋಜಿತವಾಗಿ ಒಂದಿಷ್ಟು ಕ್ರಮ ತೆಗೆದುಕೊಳ್ಳದ ಇಂಥ ನಿರ್ಧಾರ ದೇಶದ ಆರ್ಥಿಕತೆಗೆ ಮಾರಕವಾಗುವುದು ಎಂದು ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ದೇಶದ ವಿವಿಧೆಡೆ ಕೈಗೊಂಡ ಪ್ರತಿಭಟನೆಗಳ ವಿವರ ಇಲ್ಲಿದೆ.[ಟೌನ್ ಹಾಲ್ ಬಳಿ ಕಾಂಗ್ರೆಸ್ಸಿಗರ ಆಕ್ರೋಶ]
ಮುಂಬೈನಲ್ಲಿ ಪ್ರತಿಭಟನೆ
500, 1000 ನೋಟುಗಳನ್ನು ಅಮಾನ್ಯ ಮಾಡಿದ ಕೇಂದ್ರ ಸರಕಾರದ ತೀರ್ಮಾನಕ್ಕೆ ಅಕ್ರೋಶ ವ್ಯಕ್ತಪಡಿಸಿ, ಮುಂಬೈನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಭಾರೀ ಪ್ರತಿಭಟನೆ ನಡೆಸಿದರು.
ಮಮತಾ ಬ್ಯಾನರ್ಜಿ ನೇತೃತ್ವ
ಕೋಲ್ಕತ್ತಾದಲ್ಲಿ ನೋಟು ರದ್ದು ವಿರೋಧಿ ಪ್ರತಿಭಟನೆಯ ನೇತೃತ್ವವನ್ನು ತೃಣಮೂಲ ಕಾಂಗ್ರೆಸ್ ನ ಸರ್ವೋಚ್ಚ ನಾಯಕಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಹಿಸಿದ್ದರು.
ಜನಾಕ್ರೋಶ
ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವ ವಹಿಸಿದ್ದ ಆಕ್ರೋಶ್ ದಿವಸ್ ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್ ನ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಆಕ್ರೋಶ
ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಿದರು.
ಟೌನ್ ಹಾಲ್ ಹೊರಭಾಗ ಕಾಂಗ್ರೆಸ್ ಆಕ್ರೋಶ
ಬೆಂಗಳೂರಿನ ಟೌನ್ ಹಾಲ್ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನೋಟು ರದ್ದು ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ನೋಟು ರದ್ದು ನಿರ್ಧಾರ ವಾಪಸ್ ಪಡೆಯಿರಿ
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೋಟು ರದ್ದು ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಆಕ್ರೋಶ್ ದಿವಸ್ ನಲ್ಲಿ ಭಾಗಿಯಾದರು.
ಸರಿಯಾಗಿ ಜಾರಿಯಾಗದ ಬದಲಾವಣೆ
ನೋಟು ಬದಲಾವಣೆ ನಿರ್ಧಾರವನ್ನು ಪ್ರಧಾನಮಂತ್ರಿ ಸರಿಯಾಗಿ ಜಾರಿ ಮಾಡಲಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಹೈದರಾಬಾದ್ ನಲ್ಲಿ ಪ್ರತಿಭಟಿಸಿದರು.