ಲೋಕಸಭೆ ಚುನಾವಣೆಗೆ ಬಿಜೆಪಿಯ 'ಮಿಷನ್ 350', ಅಮಿತ್ ಶಾ ಸೂಚನೆ ಏನು?
ನವದೆಹಲಿ, ಆಗಸ್ಟ್ 18: 'ಮಿಷನ್ 150' ಎಂಬುದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಗುರಿ. ಇದೀಗ ಲೋಕಸಭೆ ಚುನಾವಣೆಗೆ 'ಮಿಷನ್ 350' ಎಂದು ಗುರಿ ಹಾಕಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ 'ಮಿಷನ್ 2019'ರ ಬಗ್ಗೆ ಚರ್ಚೆ ನಡೆದಿದೆ.
350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲು ಅನುಸರಿಸಬೇಕಾದ ತಂತ್ರಗಾರಿಕೆ ಭಾಗವಾಗಿ, ಅಮಿತ್ ಶಾ ಸಲಹೆ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ ನೂರೈವತ್ತು ಸ್ಥಾನಗಳ ಮೇಲೆ ಗಮನ ಹರಿಸಲು ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕರ್ನಾಟಕ ಚುನಾವಣೆ ರಣಾಂಗಣದ ದಿಕ್ಕು ನಿರ್ಧರಿಸಲಿರುವ ಅಮಿತ್ ಶಾ, ಮೋದಿ!
ಈ ಸ್ಥಾನಗಳು ಪಶ್ಚಿಮ ಬಂಗಾಲ, ಒಡಿಶಾ, ಕರ್ನಾಟಕ ಮತ್ತು ಈಶಾನ್ಯ ಭಾಗ ಸೇರಿದಂತೆ ವಿವಿಧ ರಾಜ್ಯಗಳಲ್ಲಿವೆ. ಅಂದಹಾಗೆ ಈ ಸಭೆಯಲ್ಲಿ ಪಕ್ಷದ ಮೂವತ್ತೊಂದು ನಾಯಕರು ಭಾಗವಹಿಸಿದ್ದರು. ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಅನಂತ್ ಕುಮಾರ್ ಮತ್ತು ಜೆಪಿ ನಡ್ಡಾ ಅಂಥವರಿದ್ದರು.
ಪವರ್ ಪಾಯಿಂಟ್ ಪ್ರದರ್ಶನ
ಇನ್ನು ಪಕ್ಷದ ಪದಾಧಿಕಾರಿಗಳಾದ ರಾಮ್ ಲಾಲ್, ಅನಿಲ್ ಜೈನ್ ಹಾಗೂ ಭೂಪೇಂದರ್ ಯಾದವ್ ಸಹ ಇದ್ದರು. ಚುನಾವಣೆಗೆ ಬಿಜೆಪಿಯ ಯೋಜನೆಗಳೇನು ಎಂಬ ಬಗ್ಗೆ ಪವರ್ ಪಾಯಿಂಟ್ ಕೂಡ ಪ್ರದರ್ಶಿಸಲಾಗಿದೆ.
ಮೂರನೇ ಎರಡರಷ್ಟು ಬಹುಮತ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವ ಅಥವಾ ಮುನ್ನೂರಾ ಐವತ್ತಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವ ಯೋಜನೆಯನ್ನು ಪಕ್ಷವು ಹಾಕಿಕೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ನೂರಾ ಹತ್ತುದಿನಗಳ ಪ್ರವಾಸ
ವಿವಿಧ ರಾಜ್ಯಗಳಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸದೃಢ ಪಡಿಸುವ ಉದ್ದೇಶದಿಂದ ನೂರಾ ಹತ್ತುದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವಂತೆ ನೋಡಿಕೊಳ್ಳಲು ಬೇಕಾದ ಯೋಜನೆ, ರಣತಂತ್ರಗಳನ್ನು ಹೆಣೆಯಲು ಆರಂಭಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ 272 ಸ್ಥಾನ
ಮೂವತ್ತು ವರ್ಷಗಳ ನಂತರ ಒಂದು ಪಕ್ಷವು ಲೋಕಸಭೆಯ ಒಟ್ಟು ಬಲಾಬಲದ ಅರ್ಧಕ್ಕಿಂತ ಹೆಚ್ಚು ಸ್ಥಾನ ಗಳಿಸಿದ್ದರೆ ಅದು ಬಿಜೆಪಿ. ಕಳೆದ ಲೋಕಸಭಾ ಚುನಾವಣೆಯಲ್ಲಿ 272 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಅದು 543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಬೇಕಾದ ಸಂಖ್ಯೆಗಿಂತ ಹತ್ತು ಸ್ಥಾನ ಹೆಚ್ಚಾಗಿತ್ತು.