ಗೋಹತ್ಯೆ ನಿಷೇಧ: ಮೋದಿಗೆ ಅಜಂ ಖಾನ್ ನೀಡಿದ ಸಲಹೆ
ಮಧುರಾ, ಏ 7: ಉತ್ತರ ಪ್ರದೇಶದ ಪ್ರಭಾವಿ ರಾಜಕೀಯ ಮುಖಂಡ, ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವ ಮತ್ತು ತನ್ನ ವಿವಾದಕಾರಿ ಹೇಳಿಕೆಯಿಂದಲೇ ಜನಪ್ರಿಯರಾಗಿರುವ ಅಜಂ ಖಾನ್, ಪ್ರಧಾನಿಗೆ ಉಪಯುಕ್ತ ಸಲಹೆಯ ಜೊತೆಗೆ ತನ್ನ ಎಂದಿನ ವಾಕ್ ಪ್ರಹಾರವನ್ನು ಮುಂದುವರಿಸಿದ್ದಾರೆ.
ಕಳೆದ ಶುಕ್ರವಾರವಷ್ಟೇ (ಏ 3) ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ನರೇಂದ್ರ ಮೋದಿ ಕೊಂಚ ಸುಳಿವು ನೀಡಿದ್ದರು.
ಇದಕ್ಕೆ ಪೂರಕ ಎನ್ನುವಂತೆ ಅಜಂ ಖಾನ್, ಮೊದಲು ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸಿ, ಆಗ ಗೋಹತ್ಯೆ ತಾನಾಗಿಯೇ ಹತೋಟಿಗೆ ಬರುತ್ತದೆ ಎಂದು ಮೋದಿಗೆ ಸಲಹೆ ನೀಡಿದ್ದಾರೆ.
ಶ್ರೀಕೃಷ್ಣನ ತವರೂರು ಮಥುರಾದಲ್ಲಿ ಗೋಶಾಲೆಯೊಂದನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅಜಂ ಖಾನ್, ಗೋಹತ್ಯೆ ನಿಷೇಧಿಸ ಬೇಕು ಎನ್ನುವ ಬಿಜೆಪಿಯ ಪ್ರಯತ್ನದಲ್ಲಿ ಪ್ರಾಮಾಣಿಕತೆಯಿರಲಿ ಎಂದು ಸಲಹೆ ನೀಡಿದ್ದಾರೆ.
ಪ್ರಧಾನಿಗೆ ಗೋಮಾಂಸ ರಫ್ತು ಮಾಡುವವರಲ್ಲಿ ಮುಸ್ಲಿಮರೇತರರೇ ಹೆಚ್ಚು ಎನ್ನುವುದು ಗಮನದಲ್ಲಿ ಇರಲಿ. ಗೋಹತ್ಯೆ ನಿಷೇಧ ಎನ್ನುವುದನ್ನು ಬಿಜೆಪಿ ತನ್ನ ವೋಟ್ ಬ್ಯಾಂಕಿಗೆ ಬಳಸಿಕೊಳ್ಳುವುದಕ್ಕೆ ನನ್ನ ವಿರೋಧವಿದೆ ಎಂದು ಅಜಂಖಾನ್ ಹೇಳಿದ್ದಾರೆ.
ಬೆಂಗಳೂರು ಸಾರ್ವಜನಿಕ ಸಭೆ
ಬೆಂಗಳೂರಿನ ಸಾರ್ವಜನಿಕ ಸಭೆಯಲ್ಲಿ ಮೋದಿ ಪಶು ಯೋಜನೆಯ ಬಗ್ಗೆ ಮಾತನಾಡಿದ್ದರು, ಅದರ ಅವಶ್ಯಕತೆಯನ್ನು ವಿವರಿಸಿದ್ದರು. ಆ ಮೂಲಕ ಮುಂದಿನ ದಿನಗಳಲ್ಲಿ ಗೋಹತ್ಯೆ ನಿಷೇಧ ಆದರೂ ಆಗಬಹುದು ಎನ್ನುವುದರ ಬಗ್ಗೆ ಸುಳಿವು ನೀಡಿದ್ದರು.
ಅಜಂಖಾನ್ ಖಾರ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಮೋದಿ ನೀಡಿದ ಹೇಳಿಕೆಗೆ ದೂರದ ಉತ್ತರ ಪ್ರದೇಶದಿಂದ ಉತ್ತರ ನೀಡಿದ ಅಜಂಖಾನ್, ಮೊದಲು ಕೇಂದ್ರದ ಬಿಜೆಪಿ ಸರಕಾರ ಬೀಫ್ ರಫ್ತನ್ನು ನಿಷೇಧಿಸಲಿ, ಆಗ ಎಲ್ಲವೂ ದಾರಿಗೆ ಬರುತ್ತೆ. ವೋಟ್ ಬ್ಯಾಂಕಿಗಾಗಿ ರಾಜಕೀಯ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಮುಸ್ಲಿಮರೇತರರೇ ಹೆಚ್ಚು
ಗೋಮಾಂಸ ರಫ್ತು ವ್ಯವಹಾರದಲ್ಲಿ ಮುಸ್ಲಿಮರೇತರರೇ ಹೆಚ್ಚು. ಇದನ್ನು ಕೇಂದ್ರದ ಬಿಜೆಪಿ ಸರಕಾರ ಮೊದಲು ಅರಿತುಕೊಳ್ಳಲಿ. ಕೆಲವೊಂದು ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಮೋದಿ ಸರಕಾರ ಮೊದಲು ನಿಲ್ಲಿಸಲಿ - ಅಜಂ ಖಾನ್
ಗೋಶಾಲೆಗೆ ದೇಣಿಗೆ ನೀಡಿದ ಅಜಂಖಾನ್
ಇಲ್ಲಿನ ಗೋವರ್ಧನ ಮಠದ ಗೋಶಾಲೆಗೆ 30 ಲಕ್ಷ ದೇಣಿಗೆ ನೀಡಿ ಮಾತನಾಡುತ್ತಿದ್ದ ಅಜಂಖಾನ್, ಬಿಜೆಪಿಯ ಸಂಸದರೊಬ್ಬರು ತಂಬಾಕು ಉತ್ಪನ್ನದಿಂದ ಆರೋಗ್ಯಕ್ಕೆ ಏನೂ ತೊಂದರೆ ಇಲ್ಲ ಎನ್ನುತ್ತಾರೆ. ಹನ್ನೆರಡು ಸಾವಿರ ಕೋಟಿ ರೂಪಾಯಿ ಕೇಂದ್ರ ಸರಕಾರಕ್ಕೆ ಇದರಿಂದ ವಾರ್ಷಿಕ ಆದಾಯವಿದೆ. ಇದನ್ನು ಮೋದಿಯವರ ಕಾರ್ಪೋರೇಟ್ ಸಂಸ್ಕೃತಿ ಎಂದು ಹೇಳಬಹುದಾ ಎಂದು ಖಾನ್ ಲೇವಡಿ ಮಾಡಿದ್ದಾರೆ.
ಬಿಜೆಪಿ ತಿರುಗೇಟು
ಗೋಶಾಲೆ ಉದ್ಘಾಟನೆ ರಾಜಕೀಯ ಬೆರೆತ ಕಾರ್ಯಕ್ರಮ. ಮೋದಿ ವಿರುದ್ದ ಮಾತನಾಡುವವರು ಈ ಕಾರ್ಯಕ್ರಮಕ್ಕೆ ಬೇಕಿತ್ತು. ಅದಕ್ಕೆ ಅಜಂಖಾನ್ ಅವರನ್ನು ಆಹ್ವಾನಿಸಲಾಗಿದೆ. ಇಲ್ಲಿನ ಸ್ಥಳೀಯ ಎಂಪಿ ಹೇಮಾಮಾಲಿನಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನವೇ ಇರಲಿಲ್ಲ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.