ಕರ್ನಾಟಕ ಅಕ್ರಮ ಗಣಿಗಾರಿಕೆ ಮೇಲಷ್ಟೇ ಸಿಬಿ'ಐ'
ಪಣಜಿ, ನ. 25: ಕರ್ನಾಟಕ ಹಾಗೂ ಗೋವಾದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಬಯಸಿದ್ದ ಸಿಬಿಐಗೆ ಹಿನ್ನಡೆಯಾಗಿದೆ. ಕರ್ನಾಟಕದ ಅದಿರುಗಳನ್ನು ಗೋವಾದ ಮೋರ್ಮುಗಾವು ಹಾಗೂ ಪಣಜಿಯ ಚಿಕ್ಕ ಬಂದರುಗಳ ಮೂಲಕ ವಿದೇಶಗಳಿಗೆ ರಫ್ತು ಮಾಡಿರುವ ಪ್ರಕರಣಗಳ ತನಿಖೆಗೆ ಮಾತ್ರ ಗೋವಾ ಒಪ್ಪಿಕೊಂಡಿದೆ.
ಶಾ ಕಮಿಶನ್ ವರದಿ ಪ್ರಕಾರ ಕರ್ನಾಟಕ ಹಾಗೂ ಗೋವಾ ಎರಡೂ ರಾಜ್ಯಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಸಿಬಿಐ ಬಯಸಿತ್ತು. ಈ ಕುರಿತು ಗೋವಾ ಸರ್ಕಾರಕ್ಕೆ ಸಾಲು ಸಾಲಾಗಿ ಪತ್ರವನ್ನೂ ಬರೆಯಲಾಗಿತ್ತು. ಆದರೆ, ಗೋವಾದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಗಾಗಿ ಈಗಾಗಲೇ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಆದ್ದರಿಂದ ಸಿಬಿಐಗೆ ಪ್ರಕರಣ ವಹಿಸುವ ಅಗತ್ಯವಿಲ್ಲ ಎಂದು ಗೋವಾ ಸರ್ಕಾರ ಸ್ಪಷ್ಟಪಡಿಸಿದೆ. [ಸಂಸದ ಡಿಕೆ ಸುರೇಶಗೆ ನೋಟಿಸ್]
ಮೂವರ ಬಂಧನ: ಗೋವಾ ಸರ್ಕಾರ ರಚಿಸಿರುವ SIT ತಂಡವು ಇಲ್ಲಿಯವರೆಗೆ 15 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಇವುಗಳಲ್ಲಿ 2 ಪ್ರಕರಣಗಳಲ್ಲಿ ಆರೋಪ ಪಟ್ಟಿಗಳನ್ನೂ ದಾಖಲಿಸಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಮೂರು ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ. [ಗಾಲಿ ರೆಡ್ಡಿಗೆ ಜಾಮೀನು ಮಂಜೂರು]
ಈಚೆಗಷ್ಟೇ ಗೋವಾದ SIT ಹಾಗೂ ಕರ್ನಾಟಕ ಲೋಕಾಯುಕ್ತಕ್ಕೆ ಸೇರಿರುವ SIT ತಂಡ ಎರಡೂ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತಾರ್ಕಿಕ ಅಂತ್ಯ ಕಂಡುಕೊಳ್ಳಲು ಕೈಜೋಡಿಸಿದ್ದವು. ಎರಡೂ SIT ತಂಡಗಳು ಗೋವಾ ಮತ್ತು ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಿದ್ದವು. [137 ಅಧಿಕಾರಿಗಳಿಗೆ ತನಿಖೆ ಬಿಸಿ]
ಈವರೆಗೆ ಕರ್ನಾಟಕದ ಬೇಲಿಕೆರೆ ಬಂದರಿನಿಂದ ರಫ್ತುಗೊಂಡಿರುವುದು ಹಾಗೂ ಕರ್ನಾಟಕ ಲೋಕಾಯುಕ್ತದ SIT ತಂಡವು ನಡೆಸಿದ ತನಿಖೆಯಲ್ಲಿ ಕಂಡುಬಂದ ಅಕ್ರಮ ಗಣಿಗಾರಿಕೆಗಳಿಗೆ ಸಂಬಂಧಿಸಿದಂತೆ 28 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.