ಮೋದಿ ಆಹ್ವಾನಿಸದ ಬುಖಾರಿ: ತಿರುಗಿಬಿದ್ದ ಮುಸ್ಲಿಮರು
ನವದೆಹಲಿ, ನ 3: ತನ್ನ ಹತ್ತೊಂಬತ್ತು ವರ್ಷದ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸದೇ ಇರುವುದಕ್ಕೆ ಮುಸ್ಲಿಂ ಸಮುದಾಯ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯ್ಯದ್ ಅಹಮದ್ ಬುಖಾರಿ ವಿರುದ್ದ ತಿರುಗಿ ಬಿದ್ದಿವೆ.
ಪಾಕಿಸ್ತಾನದ ಪ್ರಧಾನಿ ಇಷ್ಟಪಟ್ಟು, ಭಾರತದ ಪ್ರಧಾನಿಯನ್ನು ಇಷ್ಟ ಪಡದೇ ಹೋದರೆ, ಉತ್ತರಾಧಿಕಾರಿ ಸಮಾರಂಭವನ್ನು ಪಾಕಿಸ್ತಾನದಲ್ಲೇ ಆಯೋಜಿಸಲಿ ಎಂದು ಸ್ವತಃ ಬುಖಾರಿ ಸಹೋದರ ಯಾಹ್ಯಾ ಬುಖಾರಿ ಟೀಕಾ ಪ್ರಹಾರ ನಡೆಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಬುಖಾರಿ ಫತ್ವಾ ಹೊರಡಿಸಿದ್ದ. ಆತನ ಮಾತಿಗೆ ಯಾರೂ ಬೆಲೆಕೊಡಲಿಲ್ಲ. ಮುಸ್ಲಿಂರನ್ನು ತಾನೇ ಉದ್ದಾರ ಮಾಡುತ್ತೇನೆಂದು ಸಮುದಾಯವನ್ನು ಮೂರ್ಖರನ್ನಾಗಿಸಲು ಆತನಿಂದ ಸಾಧ್ಯವಿಲ್ಲ ಎಂದು ಯಾಹ್ಯಾ ಬುಖಾರಿ ಸಹೋದರನ ವಿರುದ್ದ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಯವರನ್ನು ಈ ಸಮಾರಂಭಕ್ಕೆ ಆಹ್ವಾನಿಸಬೇಕಿತ್ತು. ಕಾರ್ಯಕ್ರಮಕ್ಕೆ ಯಾರನ್ನು ಕರೆಯಬೇಕು, ಬೇಡ ಎನ್ನುವುದು ಅವರ ವಿವೇಚನೆಗೆ ಬಿಟ್ಟ ವಿಚಾರ, ಆದರೆ ಇದನ್ನು ಅವರು ಮುಸ್ಲಿಂರ ಹೆಸರಿನಲ್ಲಿ ಮಾಡುತ್ತಿದ್ದಾರೆ.
ಇದು ಬುಖಾರಿ ಮನೆಯ ಮದುವೆ ಕಾರ್ಯಕ್ರಮವಲ್ಲ. ಉತ್ತರಾಧಿಕಾರಿ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು ಬರುತ್ತಾರೆ. ಹಾಗಾಗಿ, ಪ್ರಧಾನಿಯವರನ್ನು ಕಾರ್ಯಕ್ರಮಕ್ಕೆ ಕರೆಯಬೇಕಿತ್ತು ಎಂದು ದೆಹಲಿ ಅಲ್ಪಸಂಖ್ಯಾತ ಸಮಿತಿಯ ಮಾಜಿ ಅಧ್ಯಕ್ಷ ಕಮಲ್ ಫಾರೂಕಿ, ಬುಖಾರಿ ಕ್ರಮವನ್ನು ಟೀಕಿಸಿದ್ದಾರೆ.
ಉತ್ತರಪ್ರದೇಶ, ಬಿಹಾರ, ಹೈದರಾಬಾದಿನ ಹಲವು ಮುಸ್ಲಿಂ ಸಂಘಟನೆಗಳು ಬುಖಾರಿ ಕ್ರಮವನ್ನು ಈಗಾಗಲೇ ಟೀಕಿಸಿವೆ. ಮುಸ್ಲಿಂ ಸಮುದಾಯದ ಏಳಿಗೆಗೆ ಶ್ರಮಿಸದ ಅವರೊಬ್ಬ ಇಮಾಮ್ ಅಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ, ಬುಖಾರಿ ವಿರುದ್ದ ಹೌಹಾರಿದ್ದಾರೆ.
ಏನಿದು ವಿವಾದ? ದೆಹಲಿಯ ಜಾಮಾ ಮಸೀದಿಯ ಇಮಾಮ್ ಬುಖಾರಿ, ತಮ್ಮ 19ವರ್ಷದ ಪುತ್ರ ಶಾಬನ್ ಬುಖಾನ್ ಅವರನ್ನು ತನ್ನ ಉತ್ತರಾಧಿಕಾರಿಯೆಂದು ಘೋಷಿಸಿದ್ದರು. 'ನೈಬ್ ಶಾಹಿ ಇಮಾಮ್' ಎಂದು ಹೆಸರಿಡಲಾಗಿರುವ ಉತ್ತರಾಧಿಕಾರಿ ನೇಮಿಸುವ ಈ ಸಮಾರಂಭವನ್ನು ನವೆಂಬರ್ 22ರಂದು ಚಾರಿತ್ರಿಕ ಜಾಮಾ ಮಸೀದಿಯಲ್ಲಿ ಇಮಾಂ ಆಯೋಜಿಸಿದ್ದಾರೆ.
ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸದೇ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಬುಖಾರಿ ಆಹ್ವಾನ ನೀಡಿರುವುದೇ ವಿವಾದಕ್ಕೆ ಕಾರಣ.
2002ರಲ್ಲಿ ಗೋಧ್ರಾ ಹತ್ಯಾಕಾಂಡದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಂರ ನರಮೇಧ ನಡೆಯಿತು. ಇದಕ್ಕೆ ಮೋದಿ ವಿಷಾದವನ್ನಾಗಲಿ, ಕ್ಷಮೆಯನ್ನಾಗಲಿ ಯಾಚಿಸಲಿಲ್ಲ. ಪ್ರಧಾನಿಯಾದ ನಂತರ ಕೂಡಾ ಮುಸ್ಲಿಂರ ಏಳಿಗೆಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ.
ಭಾರತ ಮತ್ತು ವಿದೇಶದ ಹಲವು ನಾಯಕರುಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇನೆ. ಆದರೆ ಮೋದಿಯವರಿಗೆ ಆಹ್ವಾನ ನೀಡುವುದಿಲ್ಲ ಎಂದು ಇಮಾಮ್ ಬುಖಾರಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಬಿಜೆಪಿ ಹೊರತಾಗಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರುಗಳಿಗೆ ಬುಖಾರಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕಾರ್ಯಕ್ರದಲ್ಲಿ ಭಾಗವಹಿಸುವುದಿಲ್ಲ ಪಕ್ಷದ ವಕ್ತಾರರು ಹೇಳಿದ್ದಾರೆ.