ತಲಾಖ್ ಹೇಳಿ 3 ತಿಂಗಳು ವಾಪಸ್ ಪಡೆಯದಿದ್ದರೆ 'ವಿಚ್ಛೇದನ'ವೇ? ಸುಪ್ರೀಂ ಪ್ರಶ್ನೆ
ನವದೆಹಲಿ, ಮೇ 11: ಬಹು ನಿರಿಕ್ಷಿತ ತ್ರಿವಳಿ ತಲಾಖ್ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಆರಂಭವಾಗಿದೆ.
ಮೊದಲ ದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಹಲವು ಪ್ರಶ್ನೆಗಳನ್ಜು ಎತ್ತಿದೆ. ಮುಸ್ಲಿಂ ವೈಯಕ್ತಿಕ ಕಾನೂನೆಂದರೆ ಶರಿಯತ್ ಅಥವಾ ಬೇರೆಯಾ? ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ.
ಸುಪ್ರೀಂ ಕೋರ್ಟ್ ನ 5 ಸದಸ್ಯರ ಸಾಂವಿಧಾನಿಕ ಪೀಠ ಗುರುವಾರ ತ್ರಿವಳಿ ತಲಾಖ್ ವಿಚಾರಣೆ ಕೈಗೆತ್ತಿಕೊಂಡಿದ್ದು ತ್ರಿವಳಿ ತಲಾಖ್ ಧರ್ಮದ ಮೂಲಭೂತ ಅಂಶವಾಗಿರಬಹುದು. ಆದರೆ ಮುಸ್ಲಿಂ ಧರ್ಮದ ಬಹುಪತ್ನಿತ್ವವನ್ನು ನಾವಿಲ್ಲಿ ಪರಿಗಣಿಸುತ್ತಿಲ್ಲ. ಇದಕ್ಕೂ ತ್ರಿವಳಿ ತಲಾಖ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.[ಟ್ರಿಪಲ್ ತಲಾಖ್ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ]
ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ತ್ರಿವಳಿ ತಲಾಖ್ ಮುಸ್ಲಿಂ ಧರ್ಮದ ಮೂಲಭೂತ ತತ್ವವೇ ಹಾಗೂ ಮುಸ್ಲಿಂ ಧರ್ಮವನ್ನು ಅನುಸರಿಸುವವರ ಮೇಲೆ ತ್ರಿವಳಿ ತಲಾಖ್ ಹೇರಬಹುದಾದ ಮೂಲಭೂತ ಹಕ್ಕೇ ಎಂಬುದನ್ನು ಕೋರ್ಟ್ ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
ಇನ್ನು ವಿಚಾರಣೆ ವೇಳೆ ವಾದ ಮಂಡಿಸಿದ ಸಲ್ಮಾನ್ ಖುರ್ಷಿದ್, ಗಂಡ ಮತ್ತು ಹೆಂಡತಿಯ ಅಭಿಪ್ರಾಯ ಪರಿಗಣಿಸದರೆ ತ್ರಿವಳಿ ತಲಾಖ್ ಒಂದು ಸಮಸ್ಯೆಯೇ ಅಲ್ಲ ಎಂದು ವಾದ ಮಂಡಿಸಿದರು. ಸಮನ್ವಯ ಅಥವಾ ರಾಜೀ ಮಾತುಕತೆ ನಡೆಸದೆ ತ್ರಿವಳಿ ತಲಾಖ್ ಸಿಂಧುವಾಗುವುದಿಲ್ಲ ಎಂದೂ ಅವರು ವಾದಿಸಿದರು.[ಯುಪಿ ಎಲೆಕ್ಷನ್ ಬಳಿಕ ತ್ರಿವಳಿ ತಲಾಖ್ ನಿಷೇಧ: ಸಚಿವ ರವಿಶಂಕರ್]
ಒಮ್ಮೆ ಯಾರಾದರೂ ತ್ರಿವಳಿ ತಲಾಖ್ ಹೇಳಿ ಅದನ್ನು ಮೂರು ತಿಂಗಳ ಒಳಗೆ ಹಿಂದಕ್ಕೆ ಪಡೆಯದಿದ್ದಲ್ಲಿ ಅದು ನೈಜ ವಿಚ್ಛೇದನವಾಗುತ್ತದೆ ಎಂದು ಖುರ್ಷಿದ್ ವಾದ ಮುಂದಿಟ್ಟರು. ಇದು ಸರಿಯಾ? ಎಂದು ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿದೆ.
ವಾಟ್ಸಾಪ್, ಪೇಸ್ಬುಕ್ ಸೇರಿದಂತೆ ಹಲವು ರೀತಿಯಲ್ಲಿ ತಲಾಖ್ ಪಡೆದ ಮಹಿಳೆಯರು ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಇಲ್ಲಿ ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳನ್ನು ವಿಚಾರಣೆಗೆ ತೆಗೆದುಕೊಳ್ಳುವ ಬದಲು ಸುಪ್ರೀಂ ಕೋರ್ಟ್ ಇದಕ್ಕೆಲ್ಲಾ ಕಾನೂನಿನ ಮಾನ್ಯತೆ ಇದೆಯೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದೆ.
ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತನ್ನ ತೀರ್ಪು ನೀಡಿದ ನಂತರ ಶಾಸಕಾಂಗ ಕಾನೂನು ಬದಲಾವಣೆ ಮಾಡಬೇಕೆ ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳಲಿದೆ.
ಎರಡೂ ಕಡೆಯವರಿಗೆ ವಾದ ಮಂಡಿಸಲು ಎರಡು ದಿನಗಳ ಅವಕಾಶ ನೀಡಲಾಗಿದೆ. ಮಾತ್ರವಲ್ಲ ಒಂದು ದಿನದ ಒಳಗೆ ಇದಕ್ಕೆ ಪ್ರತಿಕ್ರಿಯೆ ನೀಡಬಹುದು. ಯಾವುದೇ ಕಾರಣಕ್ಕೂ ವಾದ ಪುನರಾವರ್ತನೆ ಮಾಡುವಂತಿಲ್ಲ ಎಂದು ಸುಪ್ರೀಂ ಹೇಳಿದೆ.