ಬಿಜೆಪಿ ಸೇರಿದ್ರೆ ರಜನಿಕಾಂತ್ ಅವರೇ ಸಿಎಂ ಅಭ್ಯರ್ಥಿ!
ರಜನಿಕಾಂತ್ ಬಿಜೆಪಿ ಸೇರಿದರೆ ಚುನಾವಣೆ ವೇಳೆ ಅವರನ್ನು ತಮಿಳುನಾಡು ಸಿಎಂ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆಯಿದೆ, ಆದರೆ, ಹೈಕಮಾಂಡ್ ನಿರ್ಧಾರ ಅಂತಿಮ ಕೇಂದ್ರ ಸಚಿವ ಪೊನ್ ರಾಧಕೃಷ್ಣನ್ ಹೇಳಿದ್ದಾರೆ.
ಚೆನ್ನೈ, ಮೇ 25: ರಜನಿ ರಾಜಕೀಯಕ್ಕೆ ಬಂದರೆ ಸಂತಸವಾಗುತ್ತೆ. ಬಿಜೆಪಿ ಸೇರಿದರೆ ಇನ್ನಷ್ಟು ಸಂತೋಷವಾಗುತ್ತೆ, ಬಿಜೆಪಿ ಸೇರಿದರೆ ಮುಂದಿನ ಚುನಾವಣೆ ವೇಳೆಗೆ ಸಿಎಂ ಅಭ್ಯರ್ಥಿಯಾಗಿ ರಜನಿಕಾಂತ್ ಅವರನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ. ಆದರೆ, ಹೈಕಮಾಂಡ್ ನಿರ್ಧಾರ ಅಂತಿಮ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ಪೊನ್ ರಾಧಾಕೃಷ್ಣನ್ ಹೇಳಿದ್ದಾರೆ.
ರಜನಿಕಾಂತ್ ಬಿಜೆಪಿ ಸೇರಬಾರದು ಎನ್ನುತ್ತಿರುವ ವಿಸಿಕೆ ನಾಯಕ ತಿರುಮಾವಳನ್, ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪೊನ್ ರಾಧಕೃಷ್ಣನ್ ಟೀಕಿಸಿದರು.[ಖಾಮೋಶ್, ಬೇರೆ ಪಕ್ಷಗಳೇ ರಜನಿ ಪಕ್ಷವನ್ನು ಸೇರಲಿ!]
ಬಿಜೆಪಿಗೆ ಸೇರಬೇಕೋ ಬಿಡಬೇಕೋ ಎಂಬುದು ನಟ ರಜನೀಕಾಂತ್ ಗೆ ಬಿಟ್ಟ ವಿಚಾರ. ಅವರಿಗಾಗಿ ಪಕ್ಷದ ಬಾಗಿಲಂತೂ ತೆರೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.[ರಜನಿಕಾಂತ್ ರಾಜಕೀಯಕ್ಕೆ ಏಕೆ ಧುಮುಕಬೇಕು : 5 ಕಾರಣ]
ಕಳೆದ ಲೋಕಸಭೆ ಚುನಾವಣೆ(2014) ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ಅಲ್ಲಿಂದ ಮೊದಲುಗೊಂಡು ಇಂದಿನ ತನಕ ಬಿಜೆಪಿ ರಜನಿಕಾಂತ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸಾಹ ತೋರಿದೆ.
ಈ ಹಿಂದೆ ಟಿಎಂಸಿ ಹಾಗೂ ಡಿಎಂಕೆಗೆ ಬೆಂಬಲ ನೀಡಿದ್ದ ರಜನಿಕಾಂತ್ ಮಾತ್ರ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ನಿಖರವಾದ ಹೇಳಿಕೆ ನೀಡಿರಲಿಲ್ಲ. ಆದರೆ, ಈಗ ಅಭಿಮಾನಿಗಳ ಜತೆ ಫೋಟೊ ತೆಗೆಸಿಕೊಂಡು ದೇವರು ಬಯಸಿದರೆ ರಾಜಕೀಯಕ್ಕೆ ಎಂಟ್ರಿ ಕೊಡುವೆ ಎಂದಿರುವ ರಜನಿ ಮುಂದಿನ ನಡೆ ಬಗ್ಗೆ ಕುತೂಹಲ ಇನ್ನೂ ಮುಂದುವರೆದಿದೆ.[ಬಿಜೆಪಿ ಬಾಗಿಲು ತೆರೆದಿದೆ, ಬರಬೇಕೋ ಬಿಡಬೇಕೋ ರಜನಿ ನಿರ್ಧರಿಸಲಿ: ಅಮಿತ್ ಶಾ]
1996ರಲ್ಲಿ ಡಿಎಂಕೆ-ಟಿಎಂಸಿ ಪರ ರಜನಿಕಾಂತ್ ಬೆಂಬಲ ವ್ಯಕ್ತಪಡಿಸಿದ್ದರು. ಇದರಿಂದ ಎಂ ಕರುಣಾನಿಧಿ ಅಧಿಕಾರಕ್ಕೆ ಬಂದಿದ್ದರು. ಜಯಲಲಿತಾ ಅವರಿಗೆ ಅಲ್ಲಿಂದ ಅಕ್ರಮ ಆಸ್ತಿ ಭೂತ ಕಾಡತೊಡಗಿತು.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ರಜನಿಕಾಂತ್ ಬಿಜೆಪಿ ಸೇರ್ಪಡೆಗೆ ಬಲವಾಗಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ರಜನಿಕಾಂತ್ ಅವರ ಆಪ್ತರ ಪ್ರಕಾರ ರಜನಿ ಅವರು ಯಾವುದೇ ಪಕ್ಷ ಸೇರುವುದಿಲ್ಲ. ಬದಲಾಗಿ ತಮ್ಮದೇ ಸ್ವಂತ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ.