ಮುಸ್ಲಿಮರ ಖಬರಸ್ತಾನ್ ಗೆ ಜಾಗ, ಆದ್ರೆ ಹಿಂದೂಗಳ ಸ್ಮಶಾನಕ್ಕೇಕಿಲ್ಲ?: ಮೋದಿ
ಉತ್ತರಪ್ರದೇಶದಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ಭೇದ-ಭಾವ ತಂದು ರಾಜಕಾರಣ ಮಾಡಲಾಗುತ್ತಿದೆ ಎಂದು ಫತ್ತೇಪುರ್ ಸಿಕ್ರಿಯ ಚುನಾವಣೆ ಪ್ರಚಾರ ಸಭೆಯಲ್ಲಿ ಉದಾಹರಣೆ ಸಹಿತ ಹೇಳಿ, ಆರೋಪ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಫತ್ತೇಪುರ್ ಸಿಕ್ರಿ, ಫೆಬ್ರವರಿ 20: ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ಫತ್ತೇಪುರ್ ಸಿಕ್ರಿಯಲ್ಲಿ ವಿಧಾಸನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಸೋಮವಾರ ನೀಡಿದ ಹೇಳಿಕೆಯಿಂದ ಕಾಂಗ್ರೆಸ್ ಕನಲಿ ಕೆಂಡವಾಗಿದೆ. ಅಖಿಲೇಶ್ ಯಾದವ್ ನೇತೃತ್ವದ ಸರಕಾರ ಧರ್ಮದ ಆಧಾರದಲ್ಲಿ ಶೋಷಣೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
"ಹಳ್ಳಿಗಳಲ್ಲಿ ಖಬರಸ್ತಾನ್ (ಮುಸ್ಲಿಮರ ಸ್ಮಶಾನ) ಗೆ ಜಾಗ ಸಿಗುತ್ತೆ ಅನ್ನೋದಾದರೆ, ಹಿಂದೂಗಳ ಸ್ಮಶಾನಕ್ಕೂ ಜಾಗ ನೀಡಬೇಕು. ರಂಜಾನ್ ನಲ್ಲಿ ವಿದ್ಯುತ್ ಬರುತ್ತೆ ಅನ್ನೋದಾದರೆ, ದೀಪಾವಳಿಯಲ್ಲೂ ಬರಬೇಕು. ಜಾತಿ-ಧರ್ಮದ ಆಧಾರದಲ್ಲಿ ಭೇದ-ಭಾವ ಮಾಡಬಾರದು" ಎಂದು ಮೋದಿ ಹೇಳಿದ್ದಾರೆ.[ಉತ್ತರಪ್ರದೇಶ ಚುನಾವಣೆ ಫಲಿತಾಂಶ: ಮೋದಿ ಬಗ್ಗೆ ರಾಹುಲ್ ನುಡಿದ ಭವಿಷ್ಯ]
ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆಗಳಿಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿ ಹೇಳಿಕೆ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.
ತಮ್ಮ ಭಾಷಣದುದ್ದಕ್ಕೂ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನ ತಿವಿದಿದ್ದಾರೆ ಮೋದಿ. ಅಷ್ಟೇ ಅಲ್ಲ, ಉತ್ತರಪ್ರದೇಶದಲ್ಲಿನ ಪೊಲೀಸ್ ವ್ಯವಸ್ಥೆ ಬಗ್ಗೆ ಕೂಡ ಮಾತನಾಡಿದ್ದಾರೆ. ಜನರ ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಫತ್ತೇಪುರ್ ಸಿಕ್ರಿ ಚುನಾವಣೆ ಪ್ರಚಾರ ಭಾಷಣದ ವೇಳೆಯಲ್ಲಿ ಮೋದಿ ಹೇಳಿದ ಇತರ ಅಂಶಗಳು ಹೀಗಿವೆ:
ಭಯದಿಂದ ಮೈತ್ರಿ ಮಾಡಿಕೊಂಡ ಕಾಂಗ್ರೆಸ್
ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿದೆ.
ರಾಮ್ ಮನೋಹರ್ ಲೋಹಿಯಾಗೆ ಅವಮಾನ
ದೇಶವನ್ನು ಕೊಳ್ಳೆ ಹೊಡೆದ ಕಾಂಗ್ರೆಸ್ ಜತೆ ಕೈ ಜೋಡಿಸುವ ಮೂಲಕ ಸಮಾಜವಾದಿ ಸಿದ್ಧಾಂತದ ಆದರ್ಶ ಪುರುಷ ರಾಮ್ ಮನೋಹರ್ ಲೋಹಿಯಾಗೆ ಎಸ್ ಪಿ ಅವಮಾನ ಮಾಡಿದೆ
ಸನ್ನಿವೇಶ ಕಾಂಗ್ರೆಸ್ ಗೆ ಪೂರಕವಾಗಿಲ್ಲ
ಯಾರು ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದ್ದಾರೋ ಅವರಿಗೆ ಗೊತ್ತಾಯ್ತು, ಸನ್ನಿವೇಶ ಅವರಿಗೆ ಪೂರಕವಾಗಿಲ್ಲ. ಆದ್ದರಿಂದಲೇ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ
ಯೂರಿಯಾ ಗೊಬ್ಬರ ಸಿಗಲು ತೊಂದರೆ
ಒಂದು ಕಾಲದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಸಹ ಸಿಗಲು ತೊಂದರೆ ಆಗುತ್ತಿತ್ತು. ನಾವು ಸಮರ್ಪಕ ಯೂರಿಯೂ ಸಿಗುವಂತೆ ಮಾಡಿದ್ದೇವೆ. ಮಾರುಕಟ್ಟೆಯಲ್ಲಿ ಕಾಳಧನಿಕರ ಕೈಯಿಂದ ತಪ್ಪಿಸಿದ್ದೇವೆ
ನನ್ನನ್ನು ಯಾರು ಕಾಪಾಡ್ತಾರೆ?
ಕಪ್ಪು ಮಾರುಕಟ್ಟೆಯಲ್ಲಿ ಮಾರುತ್ತಿದ್ದವರು ನನ್ನ ಮೇಲೆ ದ್ವೇಷ ತೀರಿಸಿಕೊಳ್ಳುವುದಿಲ್ಲವೇ? ನನ್ನನ್ನು ಯಾರು ಕಾಪಾಡ್ತಾರೆ? (ಸಾರ್ವಜನಿಕರಿಂದ ನಾವು ನಾವು ಎಂಬ ಉದ್ಗಾರ ಬರುತ್ತದೆ)
ಉಚಿತವಾಗಿ ಅಡುಗೆ ಅನಿಲ ಸಂಪರ್ಕ
ನಾವು ಗ್ರಾಮೀಣ ಪ್ರದೇಶದ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡಲು ಬಯಸುತ್ತೇವೆ. ಸ್ವಚ್ಛ ಇಂಧನದ ಬಳಕೆ ಮಾಡಲಿ ಎಂಬುದು ನಮ್ಮ ಆಶಯ
ರೈತರ ಎಲ್ಲ ಸಾಲ ಮನ್ನಾ
ನಾನು ಉತ್ತರಪ್ರದೇಶದ ಗ್ರಾಮೀಣ ಜನರಿಗೆ ಭಾಷೆ ಕೊಡ್ತೀನಿ: ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಲಾಗುತ್ತದೆ
ದೂರುಗಳನ್ನು ಯಾಕೆ ದಾಖಲಿಸಿಕೊಳ್ಳುವುದಿಲ್ಲ?
ಉತ್ತರಪ್ರದೇಶದ ಪೊಲೀಸ್ ವ್ಯವಸ್ಥೆ ಯಾಕಿಷ್ಟು ಹದಗೆಟ್ಟಿದೆ? ದೂರುಗಳನ್ನು ಯಾಕೆ ದಾಖಲಿಸಿಕೊಳ್ಳುವುದಿಲ್ಲ? ಇದೇನಾ ಕೆಲಸದ ಸಂಸ್ಕೃತಿ?
ಸುಪ್ರೀಂ ಕೋರ್ಟ್ ಮಧ್ಯಪ್ರವೇಶ
ಗಾಯತ್ರಿ ಪ್ರಜಾಪತಿ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸುವುದಕ್ಕೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯಿತು
ಜನರ ಸುರಕ್ಷತೆಗೆ ಆದ್ಯತೆ
ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಕೂಡ ಸಮಾಜವಾದಿ ಪಕ್ಷ ಗಮನ ಕೊಡಲಿಲ್ಲ. ಜನರ ಸುರಕ್ಷತೆಗೆ ಆದ್ಯತೆ ನೀಡುವ ಸರಕಾರವನ್ನು ಆಯ್ಕೆ ಮಾಡಿ ಎಂದು ಮತದಾರರನ್ನು ಒತ್ತಾಯಿಸುತ್ತೇನೆ