'ಭಾರತದಲ್ಲಿ ಗೂಢಚರ್ಯೆ ಮಾಡಿದ್ರೆ ಮಾತ್ರ ಪಾಕಿಸ್ತಾನಕ್ಕೆ ಹೋಗಲು ಬಿಡ್ತಿದ್ರು'
ಭಾರತದ ವಿರುದ್ಧ ಗೂಢಚರ್ಯೆ ಮಾಡಿದರೆ ಮಾತ್ರ ಪಾಕಿಸ್ತಾನದಲ್ಲಿರುವ ನಿನ್ನ ಕುಟುಂಬವನ್ನು ಭೇಟಿಯಾಗಲು ಬಿಡುವುದಾಗಿ ಹೇಳಿದ್ದರಿಂದ ನಾನು ಅನಿವಾರ್ಯವಾಗಿ ಐಎಸ್ಐ ಮಾಹಿತಿದಾರನಾದೆ ಎಂದು ಶನಿವಾರ ಬಂಧಿತನಾದ ಸಾದಿಕ್ ಖಾನ್ ಹೇಳಿದ್ದಾನೆ.
ನವದೆಹಲಿ, ಜನವರಿ 31: ಗೂಢಚರ್ಯೆ ಆರೋಪದ ಮೇಲೆ ಶನಿವಾರ ಬಂಧಿತನಾದ ಸಾದಿಕ್ ಖಾನ್ ವಿಚಾರಣೆ ವೇಳೆ ಸ್ಪೋಟಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. 'ಭಾರತದಲ್ಲಿ ಗೂಢಚರ್ಯೆ ಮಾಡಿದ್ರೆ ಮಾತ್ರ ಪಾಕಿಸ್ತಾನ ವೀಸಾ' ನೀಡುವುದಾಗಿ ಹೇಳಿದ್ದರಿಂದ ನಾನು ಅನಿವಾರ್ಯವಾಗಿ ಮಾಹಿತಿ ನೀಡುತ್ತಿದ್ದೆ ಎಂದು ಆತ ಹೇಳಿದ್ದಾನೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಜೋಧ್ ಪುರ್ ರೈಲ್ವೇ ನಿಲ್ದಾಣದಲ್ಲಿ ಶನಿವಾರ ಸಾದಿಕ್ ಖಾನ್ ನನ್ನು ಬಂಧಿಸಲಾಗಿತ್ತು. ಈತನನ್ನು ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ, ತಾನು ನಡೆಸಿದ ಕುಕೃತ್ಯಗಳನ್ನು ಒಂದೊಂದಾಗಿ ಬಾಯ್ಬಿಟ್ಟಿದ್ದಾನೆ.[ಪಾಕಿಸ್ತಾನ ಗೂಢಚಾರನ ಬಳಿ ಇದ್ದದ್ದು 190 ಸಿಮ್ ಕಾರ್ಡ್!]
ರಾಜಸ್ಥಾನ ಭಾಗದಲ್ಲಿ ಕಾರ್ಯ ನಿರ್ವಹಿಸುವ ಐಎಸ್ಐ ಜಾಲದಲ್ಲಿ ತಾನು ಕೆಲಸ ಮಾಡುತ್ತಿದ್ದುದಾಗಿ ಆತ ಹೇಳಿದ್ದಾನೆ. ಈತ ನಂದು ಮಹಾರಾಜ್ ಎಂಬ ಇನ್ನೊಬ್ಬ ಗೂಢಚರ್ಯನ ಜತೆ ಸೇರಿ ಸೇನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಪಾಕಿಸ್ತಾನದಲ್ಲಿರುವ ತಮ್ಮ ಸೂತ್ರದಾರರಿಗೆ ತಲುಪಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.['ಅಣು ಬಾಂಬ್ ಹಾಕಿ ಭಾರತದ ಸರ್ವನಾಶ': ಪಾಕಿಸ್ತಾನ]
ಅಷ್ಟೆ ಅಲ್ಲದೆ ಐಎಸ್ಐ ತನಗೆ ಸಹಾಯ ಮಾಡಿರುವುದಾಗಿ ಸಾದಿಕ್ ಹೇಳಿದ್ದಾನೆ. ತನ್ನ ಪಾಕಿಸ್ತಾನ ಭೇಟಿಯನ್ನು ಐಎಸ್ಐ ನೋಡಿಕೊಳ್ಳುತ್ತಿತ್ತು. ನನಗೆ ಪಾಕಿಸ್ತಾನದಲ್ಲಿ ಕುಟುಂಬವಿದ್ದು ನಾನು ಹೋಗಿ ಬರುವ ಖರ್ಚನ್ನು ಐಎಸ್ಐ ಭರಿಸುತ್ತಿತ್ತು. ಒಮ್ಮೆ ಒಬ್ಬ ಐಎಸ್ಐ ಏಜೆಂಟ್ ನಿನಗೆ ಪಾಕಿಸ್ತಾನಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೆದರಿಸಿದ್ದ. ನಂತರ ಭಾರತದಲ್ಲಿ ಗೂಢಚರ್ಯೆ ಮಾಡಿ ಮಾಹಿತಿ ಕಲೆ ಹಾಕಿದರೆ ನಿನ್ನ ಪ್ರಯಾಣ ವೆಚ್ಚ ಭರಿಸುವುದಾಗಿ ಆತನೇ ಹೇಳಿದ.
ನನಗೆ ಬೇರೆ ದಾರಿ ಇರಲಿಲ್ಲ. ನನಗೆ ಪ್ರತಿ ಸಲ ಮಾಹಿತಿ ನೀಡಿದಾಗಲೂ ಸ್ವಲ್ಪ ಹಣವನ್ನಷ್ಟೇ ನೀಡುತ್ತಿದ್ದರು. ನಾನು ನನ್ನು ಕುಟುಂಬವನ್ನು ಭೇಟಿಯಾಗುವ ಸಲುವಾಗಿಯಷ್ಟೆ ಈ ಜಾಲದ ಜತೆ ಗುರುತಿಸಿಕೊಂಡಿದ್ದೆ ಎಂದು ಹೇಳಿದ್ದಾನೆ. ಅಷ್ಟೆ ಅಲ್ಲದೆ ಎಲ್ಲಿಯಾದರೂ ಕೆಲಸ ನಿಲ್ಲಿಸಿದರೆ ನಿನ್ನ ಕುಟುಂಬವನ್ನು ಸರ್ವನಾಶ ಮಾಡುವುದಾಗಿಯೂ ಐಎಸ್ಐ ಅಧಿಕಾರಿಗಳು ಹೆಸರಿಸಿದ್ದರು ಎಂದು ಸಾದಿಕ್ ಹೇಳಿದ್ದಾನೆ.